ADVERTISEMENT

ಬೀದರ್ ನಗರದಲ್ಲಿ ಸಹಜ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 14:10 IST
Last Updated 9 ನವೆಂಬರ್ 2019, 14:10 IST
ಬೀದರ್‌ನ ಕೇಂದ್ರ ಬಸ್‌ ನಿಲ್ದಾಣದ ಬಳಿ ಶನಿವಾರ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು
ಬೀದರ್‌ನ ಕೇಂದ್ರ ಬಸ್‌ ನಿಲ್ದಾಣದ ಬಳಿ ಶನಿವಾರ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು   

ಬೀದರ್: ಶನಿವಾರ ಬೆಳಿಗ್ಗೆ ಹೊರ ಬಿದ್ದ‌ಅಯೋಧ್ಯೆ ವಿವಾದ ಕುರಿತ ಸುಪ್ರೀಂಕೋರ್ಟ್‌ ತೀರ್ಪು ಜಿಲ್ಲೆಯ ಜನ ಸಮುದಾಯದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಲಿಲ್ಲ. ನಗರದಲ್ಲಿ ಸಹಜ ಸ್ಥಿತಿ ಇತ್ತು. ವ್ಯಾಪಾರಿಗಳು ತೀರ್ಪಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ.

ವ್ಯಾಪಾರಿಗಳು ಎಂದಿನಂತೆ ಬೆಳಿಗ್ಗೆ ಅಂಗಡಿಗಳ ಬಾಗಿಲು ತೆರೆದು ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದರು. ಎರಡನೆಯ ಶನಿವಾರವಾದ ಕಾರಣ ಸರ್ಕಾರಿ ಕಚೇರಿಗಳಿಗೆ ರಜೆ ಇತ್ತು. ಶಾಲಾ ಕಾಲೇಜುಗಳಿಗೂ ಸರ್ಕಾರ ರಜೆ ಘೋಷಿಸಿದ್ದರಿಂದ ಅನೇಕರು ಹಬ್ಬದ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದರು.

ದೀಪಾವಳಿ ಪ್ರಯುಕ್ತ ಕೆಲವರು ಲಕ್ಷ್ಮಿಪೂಜೆ ನೆರವೇರಿಸಿದರೆ, ಇನ್ನು ಕೆಲವರು ತುಳಸಿ ವಿವಾಹ ಮಾಡಿ ಭಕ್ತಿಭಾವ ಮೆರೆದರು. ಮಾರುಕಟ್ಟೆಯಲ್ಲಿ ಕಬ್ಬು, ಚೆಂಡು ಹೂವು, ಅಡಿಕೆ ಹೂವು, ಹುಣಸೆಕಾಯಿ, ನೆಲ್ಲಿಕಾಯಿ ಮಾರಾಟ ಭರದಿಂದ ನಡೆಯಿತು. ಭಗತ್‌ಸಿಂಗ್‌ ವೃತ್ತ, ಅಂಬೇಡ್ಕರ್‌ ವೃತ್ತ, ಬಸವೇಶ್ವರ ವೃತ್ತ ಹಾಗೂ ಸಿದ್ಧಾರ್ಥ ಕಾಲೇಜು ಸಮೀಪದ ವೃತ್ತದಲ್ಲಿ ಖರೀದಿ ಭರಾಟೆ ಕಂಡು ಬಂದಿತು.

ADVERTISEMENT

ಪ್ರಮುಖ ವೃತ್ತಗಳಲ್ಲಿ ನಾಲ್ವರು ಪೊಲೀಸ್‌ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪೊಲೀಸ್ ಸಿಬ್ಬಂದಿ ರಾತ್ರಿ ಗಸ್ತುತಿರುಗಿ ಸೂಕ್ಷ್ಮ ಪ್ರದೇಶದ ಮೇಲೆ ನಿಗಾ ಇಟ್ಟಿದ್ದರು. ಕೆಎಸ್‌ಆರ್‌ಪಿ, ಡಿಎಆರ್ ತುಕ್ಕಡಿ ಪೊಲೀಸ್‌ ಮುಖ್ಯಾಲಯದಲ್ಲೇ ಇದ್ದವು. ಯಾವುದೇ ಸಂದರ್ಭದಲ್ಲಿ ಪೊಲೀಸ್‌ ತುಕ್ಕಡಿಯನ್ನು ಬಳಸಿಕೊಳ್ಳಲು ಅಣಿಗೊಳಿಸಲಾಗಿತ್ತು.

ಹೊರ ಜಿಲ್ಲೆಗಳಿಂದ ಬರುವ ಹಾಗೂ ನಗರದಿಂದ ಹೊರಗೆ ಹೋಗುವ ವಾಹನಗಳ ಮೇಲೆ ವೃತ್ತಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳ ಮೂಲಕ ನಿಗಾ ಇಡಲಾಗಿತ್ತು. ಬಸ್, ಆಟೊ ಸಂಚಾರ ಸಹಜವಾಗಿತ್ತು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.