ಔರಾದ್: ಕ್ಷೇತ್ರದ ಶಾಸಕ ಹಾಗೂ ಪಶು ಸಂಗೋಪನಾ ಸಚಿವ ಪ್ರಭು ಚವಾಣ್ ಅವರನ್ನು ಬೀದರ್ ಜಿಲ್ಲಾ ಉಸ್ತುವಾರಿ ಸ್ಥಾನದಿಂದ ಕೈಬಿಟ್ಟಿರುವುದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಹಿಂದುಳಿದ ತಾಲ್ಲೂಕಿಗೆ ಎರಡು ದಶಕಗಳ ನಂತರ ಸಚಿವ ಸ್ಥಾನ ಹಾಗೂ ಜಿಲ್ಲಾ ಉಸ್ತುವಾರಿ ದಕ್ಕಿದೆ. ಪ್ರಭು ಚವಾಣ್ ಅವರನ್ನೇ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮುಂದುವರಿಸಬೇಕು’ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ಕೇರಬಾ ಪವಾರ್ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದಾರೆ.
‘ಜಿಲ್ಲೆಯಲ್ಲಿ ಕೊರೊನಾ ಸೋಂಕು ಉಲ್ಬಣಿಸಿ ಜನ ಸಾಯುತ್ತಿರುವ ಈ ಸಂದರ್ಭದಲ್ಲಿ ಏಕಾಏಕಿ ಜಿಲ್ಲಾ ಉಸ್ತುವಾರಿ ಬದಲಿಸಿ ಸಚಿವ ಅರವಿಂದ ಲಿಂಬಾವಳಿ ಅವರಿಗೆ ವಹಿಸಿದ್ದು ಸರಿಯಾದ ಕ್ರಮ ಅಲ್ಲ’ ಎಂದು ಸಾಮಾಜಿಕ ಕಾರ್ಯಕರ್ತರ ಅನೀಲ ಜಿರೋಬೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಸಚಿವ ಪ್ರಭು ಚವಾಣ್ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೋವಿಡ್ ಹೋಗಲಾಡಿಸಲು ಪ್ರಯತ್ನ ನಡೆಸಿದ್ದಾರೆ. ಕೋವಿಡ್ಗೆ ಹೆದರಿ ಮನೆಯಲ್ಲಿ ಕುಳಿತವರಲ್ಲ. ಎಲ್ಲ ತಾಲ್ಲೂಕುಗಳಲ್ಲಿ ಸುತ್ತಾಡಿ ಜನರಲ್ಲಿ ಧೈರ್ಯ, ವೈದ್ಯರಲ್ಲಿ ಉತ್ಸಾಹ ತುಂಬಿ ಕೆಲಸ ಮಾಡಿಸಿಕೊಳ್ಳುವ ಕ್ರಿಯಾಶೀಲ ಸಚಿವರನ್ನು ಉಸ್ತುವಾರಿಯಿಂದ ಕೈಬಿಟ್ಟಿದ್ದು ಸರಿಯಲ್ಲ’ ಎಂದು ಅವರು ಹೇಳಿದ್ದಾರೆ.
‘ಪಕ್ಷದ ನಿರ್ಣಯ ಏನೇ ಇರಲಿ. ಇಂತಹ ಸಂಕಷ್ಟದ ಸಮಯದಲ್ಲಿ ಜನರ ಸಮಸ್ಯೆ ತಮ್ಮ ಸಮಸ್ಯೆ ಎಂದು ತಿಳಿದು ಕೆಲಸ ಮಾಡುವ ಚವಾಣ್ ಅವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯಿಂದ ಹೊರಗಿಡುವುದು ಸೂಕ್ತ ಅಲ್ಲ’ ಎಂದು ಬಿಜೆಪಿ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಖಂಡೋಬಾ ಕಂಗಟಿ ತಿಳಿಸಿದ್ದಾರೆ.
‘ಸಚಿವ ಪ್ರಭು ಚವಾಣ್ ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಅವರ ಕ್ರಿಯಾಶೀಲತೆ ಹಾಗೂ ಪಕ್ಷನಿಷ್ಠೆ ಮೆಚ್ಚಿ ಅವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎರಡೆರಡು ಜಿಲ್ಲೆಗಳ ಉಸ್ತುವಾರಿ ವಹಿಸಿಕೊಟ್ಟಿದ್ದಾರೆ. ಆದರೆ ಈಗ ಸರ್ಕಾರ ಕೆಲ ಜಿಲ್ಲೆಗಳ ಉಸ್ತುವಾರಿ ಬಲಿಸಿದ್ದು, ನಮಗೂ ಏನು ಹೇಳಲು ಬರುವುದಿಲ್ಲ’ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.