
ಭಾಲ್ಕಿ: ‘ಮಕ್ಕಳು ಮನೆಯಲ್ಲಿ ಪಾಲಕರ ಮತ್ತು ಶಾಲೆಯಲ್ಲಿ ಶಿಕ್ಷಕರ ನಡೆ, ನುಡಿಯನ್ನು ಅನುಕರಿಸುತ್ತಾರೆ. ಹೀಗಾಗಿ ಪಾಲಕರು, ಶಿಕ್ಷಕರ ನಡೆ, ನುಡಿಗಳು ವಿದ್ಯಾರ್ಥಿಗಳಿಗೆ ಮಾದರಿ ಆಗುವಂತೆ ಇರಬೇಕು’ ಎಂದು ಸಂಸದ ಸಾಗರ ಖಂಡ್ರೆ ಹೇಳಿದರು.
ಪಟ್ಟಣದ ಲಕ್ಷ್ಮಿಬಾಯಿ ಖಂಡ್ರೆ ಪಬ್ಲಿಕ್ ಶಾಲಾ ಆವರಣದಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ ಪಠ್ಯ ಚಟುವಟಿಕೆಗಳಿಗೆ ನೀಡುವಷ್ಟೇ ಮಹತ್ವವನ್ನು ಸಹಪಠ್ಯ ಚಟುವಟಿಕೆಗಳಿಗೂ ನೀಡಬೇಕು’ ಎಂದು ತಿಳಿಸಿದರು.
ಶಿಕ್ಷಣ ತಜ್ಞ ಗುರುರಾಜ ಕರಜಗಿ ಮಾತನಾಡಿ, ‘ಮಕ್ಕಳಿಗೆ ನಿರ್ಜೀವ ವಸ್ತುಗಳ(ಮೊಬೈಲ್, ಟಿ.ವಿ) ಜೊತೆ ಸ್ನೇಹವಾದಾಗ ಬಂಧಗಳು ದೂರವಾಗುತ್ತವೆ. ಹೀಗಾಗಿ, ಮಕ್ಕಳನ್ನು ಮೊಬೈಲ್ ಗೀಳಿನಿಂದ ದೂರ ಮಾಡಬೇಕು. ಅವರಲ್ಲಿ ಮೌಲ್ಯ ಬಿತ್ತುವ ಕಾರ್ಯ ಮಾಡಬೇಕು’ ಎಂದು ಹೇಳಿದರು.
ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಸಂತೋಷ ಮಿರಾಜಕರ, ವಿದ್ಯಾರ್ಥಿಗಳಾದ ಸೀಮಾರಾಣಿ ಸಂದೀಪ, ಸಬೀನಾರಾಣಿ ಸಾಗರ ಮಾತನಾಡಿದರು.
ಇದೇ ವೇಳೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಂಕುಶ ಢೋಲೆ, ಪ್ರಾಚಾರ್ಯ ಉದಯಕುಮಾರ ಕಲ್ಯಾಣೆ, ಸಂತೋಷಕುಮಾರ ತೀರ್ಥೆ, ಭೀಮರಾವ ಗಿರಿ, ಲಕ್ಷ್ಮೀಕಾಂತ ನಾಟೇಕರ, ಪುರಸಭೆ ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಭರತ ಸಿದ್ಧಾ ಕಲವಾಡಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.