
ಸಾಂದರ್ಭಿಕ ಚಿತ್ರ
ಹುಲಸೂರ: ಸಮೀಪದ ಭಾಲ್ಕಿ ತಾಲ್ಲೂಕಿನ ಸಾಯಗಾಂವ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಬಾಳೆಹಣ್ಣು ವಿತರಿಸಲಾಗಿದೆ ಎಂದು ಆರೋಪಿಸಿ ಪಾಲಕರು ಆಕ್ರೋಶ ವ್ಯಕ್ತಪಡಿಸಿದರು.
ಶಾಲೆಯಲ್ಲಿ ನಡೆದ ಪಾಲಕರ ಸಭೆಯ ಮರುದಿನ ಈ ವಿಷಯ ತೀವ್ರ ಚರ್ಚೆಗೆ ಗ್ರಾಸವಾಯಿತು. ಮಧ್ಯಾಹ್ನದ ಊಟದ ಜೊತೆಗೆ ನೀಡಲಾಗುತ್ತಿರುವ ಬಾಳೆಹಣ್ಣುಗಳು ಹಾಳಾಗಿರುವುದು ಹಾಗೂ ತಿನ್ನಲು ಯೋಗ್ಯವಾಗಿಲ್ಲವೆಂದು ಕೆಲವರು ದೂರಿದರು. ಮಕ್ಕಳ ಆರೋಗ್ಯದೊಂದಿಗೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಬಾರದು ಎಂದು ಪಾಲಕರು ಒತ್ತಾಯಿಸಿದರು.
‘ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಉದ್ದೇಶದಿಂದ ಹಣ್ಣು ವಿತರಿಸಲಾಗುತ್ತಿದೆ. ಆದರೆ ಕಳಪೆ ಗುಣಮಟ್ಟದ ಹಣ್ಣು ನೀಡುವುದು ಆತಂಕಕಾರಿ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಕೆಲ ಪಾಲಕರು ಆಗ್ರಹಿಸಿದರು.
ಈ ಕುರಿತು ಶಾಲಾ ಮುಖ್ಯಶಿಕ್ಷಕ ಸೋಮನಾಥ ಬಿರಾದಾರ ಪ್ರತಿಕ್ರಿಯಿಸಿ, ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪಾಲಕರು ಗುಣಮಟ್ಟದ ಆಹಾರ ವಿತರಣೆಗೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ಅಗತ್ಯವಿದೆ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.