ADVERTISEMENT

ಧಾರ್ಮಿಕ ಸಾಮರಸ್ಯ ಕಾಯ್ದುಕೊಂಡಿದ್ದ ಶಿವಾಜಿ: ಅಬ್ದಲ್‌ ಮನ್ನಾನ್‌ ಸೇಠ್

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2018, 15:38 IST
Last Updated 10 ಡಿಸೆಂಬರ್ 2018, 15:38 IST
ಬೀದರ್‌ನಲ್ಲಿ ಸಶಕ್ತ ಭಾರತ ನಿರ್ಮಾಣ ಕಾರ್ಯಕ್ರಮವನ್ನು ಅಲ್ಲಮಾ ಎಕ್ಬಾಲ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್‌ ಮನ್ನಾನ್‌ ಸೇಠ್ ಉದ್ಘಾಟಿಸಿದರು. ಸಾಧನಾ, ಬಾಬುರಾವ್‌ ಕಣಜಿಕರ್‌, ಎಂ.ಜಿ.ಮುಳೆ, ಅನಿಲ ಬೆಲ್ದಾರ್, ಪ್ರಕಾಶ ಪಾಟೀಲ ಹಾಗೂ ವಿದ್ಯಾಸಾಗರ ಶಿಂದೆ ಇದ್ದಾರೆ
ಬೀದರ್‌ನಲ್ಲಿ ಸಶಕ್ತ ಭಾರತ ನಿರ್ಮಾಣ ಕಾರ್ಯಕ್ರಮವನ್ನು ಅಲ್ಲಮಾ ಎಕ್ಬಾಲ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್‌ ಮನ್ನಾನ್‌ ಸೇಠ್ ಉದ್ಘಾಟಿಸಿದರು. ಸಾಧನಾ, ಬಾಬುರಾವ್‌ ಕಣಜಿಕರ್‌, ಎಂ.ಜಿ.ಮುಳೆ, ಅನಿಲ ಬೆಲ್ದಾರ್, ಪ್ರಕಾಶ ಪಾಟೀಲ ಹಾಗೂ ವಿದ್ಯಾಸಾಗರ ಶಿಂದೆ ಇದ್ದಾರೆ   

ಬೀದರ್‌: ‘ಶಿವಾಜಿ ಅವರು ಧಾರ್ಮಿಕ ಸಾಮರಸ್ಯ ಕಾಯ್ದುಕೊಂಡಿದ್ದರು. ಅವರಿಗೆ ಮುಸ್ಲಿಮರೇ ಅಂಗರಕ್ಷಕರು ಆಗಿದ್ದರು’ ಎಂದು ಅಲ್ಲಮಾ ಎಕ್ಬಾಲ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್‌ ಮನ್ನಾನ್‌ ಸೇಠ್ ಹೇಳಿದರು.

ನಗರದ ಜಿಲ್ಲಾ ರಂಗ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಸಶಕ್ತ ಭಾರತ ನಿರ್ಮಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಮತಕ್ಕಾಗಿ ಕೋಮುಭಾವನೆಯನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ. ಕೋಮುಭಾವನೆ ಕೆರಳಿಸುವವರ ಬಗ್ಗೆ ಎಚ್ಚರ ವಹಿಸಬೇಕಾಗಿದೆ’ ಎಂದು ತಿಳಿಸಿದರು.

ADVERTISEMENT

ಮಾಜಿ ಶಾಸಕ ಮಾರುತಿರಾವ್‌ ಮುಳೆ ಮಾತನಾಡಿ, ‘ಶಿವಾಜಿ ಮಹಾರಾಜರು ಎಂದಿಗೂ ಜಾತಿ ರಾಜಕಾರಣ ಮಾಡಿಲ್ಲ. ಅವರು ಒಂದೇ ಒಂದು ಮಸೀದಿಯನ್ನು ಒಡೆದ ಇತಿಹಾಸ ಇಲ್ಲ. ಸರ್ವ ಧರ್ಮ ಸಮನ್ವಯತೆಯನ್ನು ಕಾಯ್ದುಕೊಂಡು ಬಂದಿದ್ದರು’ ಎಂದು ಹೇಳಿದರು.

ಕರ್ನಾಟಕ ಮರಾಠಾ ಸೇವಾ ಸಂಘದ ಸಂಸ್ಥಾಪಕ ಅಧ್ಯಕ್ಷ ಸುರೇಶ ಟಾಕಳೆ, ಕರ್ನಾಟಕ ಮರಾಠಾ ಸೇವಾ ಸಂಘದ ಅಧ್ಯಕ್ಷ ಬಾಲಾಜಿ ಕಣಜಿಕರ್‌, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಕಾಶ ಪಾಟೀಲ, ರವಿ ಸ್ವಾಮಿ, ಬಾಬುರಾವ್ ಕಾರಭಾರಿ, ರಘುನಾಥ ಜಾಧವ್, ಬಾಲಾಜಿ ವಾಡೇಕರ್‌, ವಿದ್ಯಾವಾನ್‌ ಪಾಟೀಲ, ಪೀರಾಜಿ ಬಿರಾದಾರ, ರಣಜೀತ್‌ ಪಾಟೀಲ, ಅಶೋಕ ಪಾಟೀಲ, ಜ್ಞಾನೇಶ್ವರ ಬಿರಾದಾರ, ಅನಿಲ ಜಾಧವ, ರಾಯಗಡದ ಸಾಧನಾ, ಸಂಗೀತಾ ಪಾಟೀಲ ಉಪಸ್ಥಿತರಿದ್ದರು.
ಸತೀಶ ಮುಳೆ ಕಾರ್ಯಕ್ರಮ ನಿರೂಪಿಸಿದರು. ಶಂಕರರಾವ್ ಬಿರಾದಾರ ವಂದಿಸಿದರು.

ಭವ್ಯ ಸಾಗತ: ಸಶಕ್ತ ಭಾರತ ನಿರ್ಮಾಣ ಕಾರ್ಯಕ್ರಮದ ಅಂಗವಾಗಿ ಪುಣೆಯಿಂದ ಸೋಮವಾರ ನಗರಕ್ಕೆ ಬಂದ ಬೈಕ್‌ ರ್‌್ಯಾಲಿಗೆ ಸಿದ್ಧಾರ್ಥ ಕಾಲೇಜಿನ ಸಮೀಪದ ವೃತ್ತದಲ್ಲಿ ಕರ್ನಾಟಕ ಮರಾಠಾ ಸೇವಾ ಸಂಘದ ನೇತೃತ್ವದಲ್ಲಿ ಭವ್ಯ ಸ್ವಾಗತ ನೀಡಲಾಯಿತು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಕಾಶ ಪಾಟೀಲ, ಮಾಜಿ ಶಾಸಕ ಮಾರುತಿರಾವ್‌ ಮುಳೆ, ಕರ್ನಾಟಕ ಮರಾಠಾ ಸೇವಾ ಸಂಘದ ಅಧ್ಯಕ್ಷ ಬಾಲಾಜಿ ಕಣಜಿಕರ್‌, ಜಿಲ್ಲಾ ಪಂಚಾಯಿತಿ ಸದಸ್ಯ ವಿದ್ಯಾಸಾಗರ ಶಿಂದೆ, ಅಲ್ಲಮಾ ಎಕ್ಬಾಲ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್‌ ಮನ್ನಾನ್‌ ಸೇಠ್, ಅನಿಲ ಬೆಲ್ದಾರ್, ಬಸವರಾಜ ಮಾಳಗೆ ಇದ್ದರು.

ಮೊಘಲ್‌ ಸಾಮ್ರಾಟ ಔರಂಗಜೇಬನು ಆಗ್ರಾದ ಕೋಟೆಯಲ್ಲಿ ಬಂಧಿಸಿ ಇಟ್ಟಿದ್ದಾಗ ಶಿವಾಜಿ ಸೈನಿಕರ ಕಣ್ಣು ತಪ್ಪಿಸಿ ಹೊರಗೆ ಬಂದಿದ್ದರು. ಔರಾದ್‌ ತಾಲ್ಲೂಕಿನ ವನಮಾರಪಳ್ಳಿ ಮಾರ್ಗವಾಗಿ ಜಿಲ್ಲೆ ಪ್ರವೇಶಿಸಿ
ಹುಮನಾಬಾದ್, ಬಸವಕಲ್ಯಾಣ ಮಾರ್ಗವಾಗಿ ಪುಣೆಗೆ ಹೋಗಿದ್ದರು. ಇದರ ಸ್ಮರಣಾರ್ಥ 100 ಬೈಕ್‌
ಸವಾರರು ರ್‌್ಯಾಲಿಯಲ್ಲಿ ಇಲ್ಲಿಗೆ ಬಂದರು.

ಸಿದ್ಧಾರ್ಥ ಕಾಲೇಜಿನ ವೃತ್ತದಿಂದ ನೇರವಾಗಿ ಬೀದರ್‌ ಕೋಟೆಗೆ ಹೋಗಿ ಅಲ್ಲಿನ ಪಾದುಕೆ ದರ್ಶನ ಪಡೆದು ಅಲ್ಲಿಂದ ಗವಾನ್‌ ಚೌಕ್‌ಗೆ ಬಂದರು. ಅಲ್ಲಿ ಮನ್ನಾನ್‌ ಸೇಠ್‌ ಅವರು ಹಣ್ಣು, ಬಿಸ್ಕತ್‌ ಹಾಗೂ ನೀರಿನ ಬಾಟಲ್‌ಗಳನ್ನು ಕೊಟ್ಟರು. ಚೌಬಾರಾ, ಬಸವೇಶ್ವರ ವೃತ್ತ, ಭಗತ್‌ಸಿಂಗ್ ವೃತ್ತ, ಅಂಬೇಡ್ಕರ್‌ ವೃತ್ತದ ಮಾರ್ಗವಾಗಿ ಶಿವಾಜಿ ವೃತ್ತಕ್ಕೆ ಬಂದು ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ಜಿಲ್ಲಾ ರಂಗ ಮಂದಿರಕ್ಕೆ ಬಂದು ಸಮಾವೇಶಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.