ADVERTISEMENT

ಬಸವಕಲ್ಯಾಣ: ‘ದಸರಾ ದರ್ಬಾರ್‌’ ವಿರುದ್ಧ ಪ್ರತಿಭಟನೆಗೆ ಸ್ವಾಮೀಜಿ ಕರೆ

ಆ.17ರಂದು ಬಸವಕಲ್ಯಾಣದಲ್ಲಿ ಬಸವಭಕ್ತರ ಸಭೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 23:39 IST
Last Updated 6 ಆಗಸ್ಟ್ 2025, 23:39 IST
ಬಸವಲಿಂಗ ಪಟ್ಟದ್ದೇವರು
ಬಸವಲಿಂಗ ಪಟ್ಟದ್ದೇವರು   

ಭಾಲ್ಕಿ (ಬೀದರ್‌ ಜಿಲ್ಲೆ): ‘ಬಸವಕಲ್ಯಾಣದಲ್ಲಿ ದಸರಾ ದರ್ಬಾರ್‌ ಹೆಸರಿನಲ್ಲಿ ಬಸವಣ್ಣನವರಿಗೆ ಅವಮಾನಿಸುವ ಹಾಗೂ ಲಿಂಗಾಯತ ಧರ್ಮದ ವಿರುದ್ಧ ಕುತಂತ್ರ ಹೆಣೆಯುತ್ತಿರುವ ಬಸವ ದ್ರೋಹಿಗಳ ವಿರುದ್ಧ ನಾಡಿನ ಬಸವಪರ, ಹಿಂದುಳಿದ ಮಠಗಳ ಸ್ವಾಮೀಜಿ, ಸಂಘಟಕರು, ಭಕ್ತರು ಒಗ್ಗಟ್ಟಿನಿಂದ ಸಿಡಿದೇಳಬೇಕು’ ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದ್ದಾರೆ. 

‘ಜಗತ್ತು ಬಸವಣ್ಣನವರನ್ನು ಜಗದ್ಗುರು, ಜಗಜ್ಯೋತಿ ಎಂದು ವಂದಿಸುತ್ತಿದೆ. ಆದರೆ, ಬಸವತತ್ವವನ್ನು ಒಪ್ಪಿಕೊಳ್ಳದ ಕೆಲವರು ಬಸವಕಲ್ಯಾಣದ ಭೂಮಿಯಲ್ಲಿ ತಮ್ಮ ವ್ಯಕ್ತಿ ಪ್ರತಿಷ್ಠೆಯ ವೈಭವ ಮೆರೆಯಲು ಮುಂದಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

‘ಬಸವಣ್ಣನವರು ವೀರಶೈವ ಧರ್ಮ ಸ್ವೀಕರಿಸಿದರು ಎಂಬ ಹಸಿ ಸುಳ್ಳನ್ನು ಹಬ್ಬಿಸುವ ಆಚಾರ್ಯರು, ಬಸವಕಲ್ಯಾಣದ ಭೂಮಿಯಲ್ಲಿ ಬಂದು ಬಸವತತ್ವಕ್ಕೆ ದ್ರೋಹ ಬಗೆಯುವ ಎಲ್ಲಾ ಸಿದ್ಧತೆ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಬಸವಕಲ್ಯಾಣದಲ್ಲಿ ಆಗಸ್ಟ್ 17ರ ಬೆಳಿಗ್ಗೆ ಬಸವಭಕ್ತರ ಸಭೆ ಕರೆಯಲಾಗಿದೆ. ಹಿರಿಯ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಚರ್ಚಿಸಿ, ಮುಂದಿನ ನಡೆ ನಿರ್ಧರಿಸಲಾಗುವುದು.ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.