ಬೀದರ್: ಮರಾಠಾ ಅಭಿವೃದ್ಧಿ ನಿಗಮವನ್ನು ರದ್ದುಪಡಿಸಬೇಕು ಹಾಗೂ ನಿಗಮಕ್ಕೆ ₹ 50 ಕೋಟಿ ಮಂಜೂರು ಮಾಡಿ ಹೊರಡಿಸಿರುವ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ವೀರ ಕನ್ನಡಿಗರ ಸಂಸ್ಥೆ, ವೀರ ಕನ್ನಡಿಗರ ಸೇನೆ, ಕರ್ನಾಟಕ ಪ್ರಜಾಶಕ್ತಿ ಸಮಿತಿ ಹಾಗೂ ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ನಗರದಲ್ಲಿ ಬಂದ್ ಮಾಡದಿದ್ದರೂ ಕನ್ನಡ ಸಂಘಟನೆಗಳ ಕಾರ್ಯಕರ್ತರು ಡಾ.ಅಂಬೇಡ್ಕರ್ ವೃತ್ತದಿಂದ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಜಿಲ್ಲಾಧಿಕಾರಿ ಕಚೇರಿ ಆವರಣದ ವರೆಗೆ ಮೆರವಣಿಗೆಯಲ್ಲಿ ಬಂದು ರಾಜ್ಯಪಾಲರಿಗೆ ಬರೆದ ಮನವಿಪತ್ರವನ್ನು ಬೀದರ್ ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್ ಅವರಿಗೆ ಸಲ್ಲಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಾಷೆಗೊಂದು ನಿಗಮ, ಪ್ರಾಧಿಕಾರ ರಚನೆ ಮಾಡುತ್ತಿರುವುದು ಸರಿಯಲ್ಲ. ಸರ್ಕಾರದ ಒಡೆದು ಆಳುವ ನೀತಿಯಿಂದ ಕನ್ನಡಕ್ಕೆ ಗಂಡಾಂತರ ಬಂದೊಗಲಿದೆ ಎಂದು ಹೇಳಿದರು.
ಕನ್ನಡಪರ ಹೋರಾಟಗಾರರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕರ ರಾಜೀನಾಮೆ ಪಡೆಯಬೇಕು ಎಂದು ಮುಖ್ಯಮಂತ್ರಿಯನ್ನು ಒತ್ತಾಯಿಸಿದರು.
ಕನ್ನಡ ಸಂಘಟನೆಗಳ ಮುಖಂಡರಾದ ಸ್ವಾಮಿದಾಸ ಕೆಂಪೆನೋರ್, ಎಂ.ಡಿ. ಮಸ್ತಾನಮುಲ್ಲಾ, ಶಶಿಕಾಂತ ಪೊಲೀಸ್ ಪಾಟೀಲ, ಸಂಗಮೇಶ ಏಣಕೂರೆ, ರಿಚರ್ಡ್ ಮೇಲ್ದೊಡ್ಡಿ, ಸುರೇಶ ದೊಡ್ಡಿ, ವಿಲ್ಸನ್ ಕುಡ್ತೆನೋರ್, ನವೀನ್ ಅಲ್ಲಾಪೂರೆ, ಮತ್ತಯ್ಯ ಸುಲ್ತಾನಪೂರ, ಪಪ್ಪು ಯರನಳ್ಳಿ, ಜಾನ್ಸ್ನ್ ಧುಪತ್ಮಹಾಗಾಂವ, ತುಕರಾಮ ರಾಘಪೂರೆ, ಸುಬ್ಬಣ್ಣ ಕರಕನಳ್ಳಿ, ಸೂರ್ಯಕಾಂತ ಸಾಧುರೆ, ಮಹೇಶ ಶಹಾಗಂಜ್, ಸಾಯಿ ಶಿಂದೆ, ಮಲ್ಲಿಕಾರ್ಜುನ ಮೊಳಕೇರೆ, ರಮೇಶ ಪಾಸ್ವಾನ್, ಮಹೇಂದ್ರಕುಮಾರ ಹೊಸಮನಿ ಪಾಲ್ಗೊಂಡಿದ್ದರು.
ನಗರದಲ್ಲಿ ಜನಜೀವನ ಎಂದಿನಂತೆಯೇ ಇತ್ತು. ಆಟೊ ರಿಕ್ಷಾ, ಬಸ್'ಗಳ ಸಂಚಾರ ನಿರಾತಂಕವಾಗಿತ್ತು. ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರ ವಹಿವಾಟು ಎಂದಿನಂತೆಯೇ ನಡೆಯಿತು. ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಪೊಲಿಸ್ ಬಂದೋ ಬಸ್ತ್ ಮಾಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.