ಬಸವಕಲ್ಯಾಣ: ಸರ್ಕಾರ ಪ್ರತಿಯೊಬ್ಬ ರೈತನಿಂದ ಕನಿಷ್ಠ ಐದು ಎಕರೆಯಲ್ಲಿನ ಉದ್ದು, ಹೆಸರು ಖರೀದಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಶುಕ್ರವಾರ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ರಸ್ತೆತಡೆ ನಡೆಸಿ ಉಪ ವಿಭಾಗಾಧಿಕಾರಿ ಭುವನೇಶ ಪಾಟೀಲ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಈ ಮೊದಲು ಮೈತ್ರಿ ಸರ್ಕಾರ 20 ಕ್ವಿಂಟಾಲ್ ಉದ್ದು ಹಾಗೂ ಹೆಸರು ಖರೀದಿಸುತ್ತಿತ್ತು. ಆದರೆ, ಈ ಸರ್ಕಾರ ಬರೀ 6 ಕ್ವಿಂಟಾಲ್ ಉದ್ದು ಖರೀದಿಸುತ್ತಿರುವುದು ಸರಿಯಲ್ಲ. ಕಬ್ಬಿನ ಬಾಕಿ ಹಣ ಇದುವರೆಗೂ ಪಾವತಿಸಿಲ್ಲ. ಕಳೆದ ಸಾಲಿನಲ್ಲಿ ಸಂಭವಿಸಿದ ಬೆಳೆ ಹಾನಿಗೆ ಪರಿಹಾರ ನೀಡಬೇಕು. ಹೊಲದಲ್ಲಿನ ಮನೆ, ಕೊಟ್ಟಿಗೆ ಹಾಗೂ ಗೋದಾಮುಗಳಿಗೆ ವಿದ್ಯುತ್ ಸಂಪರ್ಕ ನೀಡಬೇಕು. ಕಾಡು ಹಂದಿಗಳ ಹಾವಳಿಯಿಂದ ಅನೇಕ ರೈತರ ಬೆಳೆ ಹಾನಿ ಆಗುತ್ತಿದೆ. ಆದ್ದರಿಂದ ರಕ್ಷಣೆ ಒದಗಿಸಬೇಕು. ಹಾನಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಲಾಯಿತು.
ತಾಲ್ಲೂಕಿನಿಂದ ಹಾದು ಹೋಗಿರುವ 34ನೇ ರಾಜ್ಯ ಹೆದ್ದಾರಿ ಪಕ್ಕದಲ್ಲಿನ ಭೂಸ್ವಾಧೀನಗೊಳ್ಳಲಿರುವ ಜಮೀನಿಗೆ ಪರಿಹಾರ ನೀಡಬೇಕು. ಸಮೀಕ್ಷೆ ಕೈಗೊಂಡು ಎಷ್ಟು ಜಮೀನು, ಮನೆ ಹಾಗೂ ಇತರೆ ಸ್ವತ್ತು ರಸ್ತೆ ವ್ಯಾಪ್ತಿಗೊಳಪಡಲಿದೆ ಎಂಬುದನ್ನು ತಿಳಿಸಬೇಕು. ಸರ್ಕಾರದ ಮನೆ ಯೋಜನೆಯಲ್ಲಿ ಅರ್ಹ ಫಲಾನುಭವಿಗಳ ಆಯ್ಕೆ ಆಗುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಹ ಆಗ್ರಹಿಸಲಾಯಿತು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಕಾಸಿಂಅಲಿ, ತಾಲ್ಲೂಕು ಘಟಕದ ಅಧ್ಯಕ್ಷ ರುದ್ರಯ್ಯಸ್ವಾಮಿ, ಉಪಾಧ್ಯಕ್ಷ ಸಂತೋಷಕುಮಾರ ಗುದಗೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಗನ್ನಾಥ ಪಾಟೀಲ ಮಂಠಾಳ, ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಜಿಂಕ್ಯ ಮುಳೆ, ಪ್ರಮುಖರಾದ ಅಣವೀರ ಬಿರಾದಾರ, ಅನಿಲ ಮರ್ಪಳ್ಳೆ, ವೀರಾರೆಡ್ಡಿ ಕಿಟ್ಟಾ, ಸಂಗಶೆಟ್ಟಿ ದಾನಾ, ವಿಶ್ವನಾಥ ಚಿಲಶೆಟ್ಟಿ, ವಿಜಯಕುಮಾರ ಕಾರಬಾರಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.