ಚಿಟಗುಪ್ಪ: 18 ತಿಂಗಳ ಸಂಬಳ ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ತಾಲ್ಲೂಕಿನ ನಿರ್ಣಾ ಗ್ರಾಮ ಪಂಚಾಯಿತಿ ನೌಕರರು ಹಾಗೂಸಫಾಯಿ ಕರ್ಮಚಾರಿಗಳು ಶುಕ್ರವಾರ ಪ್ರತಿಟನೆ ನಡೆಸಿದರು.
ಸಿಬ್ಬಂದಿ ಶಿವಕುಮಾರ ಅತಿವಾಳ್ ಮಾತನಾಡಿ, ‘ಪಂಚಾಯಿತಿಯಿಂದ 18 ತಿಂಗಳಿನಿಂದ ಸಂಬಳ ವಿತರಿಸಿಲ್ಲ. ನೌಕರರಿಗೆ ಪಾವತಿಸಬೇಕಾದ ಸಂಬಳದ ಹಣ ಜೆಸ್ಕಾಂ ಖಾತೆಗೆ ₹ 3.50 ಲಕ್ಷವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಮೆ ಮಾಡಿದ್ದಾರೆ. ಈ ಬಗ್ಗೆ ಇದುವರೆಗೂ ಯಾವುದೇ ಉತ್ತರ ನೀಡುತ್ತಿಲ್ಲ. ನಮ್ಮ ಬೇಡಿಕೆಗೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ’ ಎಂದು ದೂರಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರತಿಭಟನೆ ಆರಂಭಿಸಿದ ನೌಕರರು, ಪಂಚಾಯಿತಿ ವಿರುದ್ಧ ಘೋಷಣೆ ಕೂಗಿದರು. ಸುನೀಲ್ ರಾಜೇಂದ್ರ, ಅಶೋಕವೀರಪ್ಪ, ಶಾಂತಮ್ಮ ದೇವಿಂದ್ರ, ಲಕ್ಷ್ಮಿ ಕಲ್ಲಪ್ಪ, ಸುರೇಶ ದಶರಥ, ರುದ್ರಪ್ಪ ಹಣಮಂತಪ್ಪ, ರತ್ನಮ್ಮ ದಶರಥ, ಸುನೀಲ ಅರ್ಜುನ, ಸುಗಂಧ ಮಾರುತಿ ಪಾಲ್ಗೊಂಡಿದ್ದರು.
ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಂಕರ ಕನಕ ಮಾತನಾಡಿ, ‘ಸಧ್ಯಕ್ಕೆ ಒಂದು ತಿಂಗಳ ಸಂಬಳ ವಿತರಿಸಲಾಗುತ್ತದೆ. ಉಳಿದ ಸಂಬಳ ನಿಧಿ–2ರಿಂದ ಕ್ರಮೇಣ ಪಾವತಿಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಶರಣು ಕಾಶಂಪೂರ, ತಿಪ್ಪಣ್ಣ ಮಾಲೆ, ಶೇಖರ ಚಿರ್ಚಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸಂಜೀವ ರೆಡ್ಡಿ ಹಾಸರೆಡ್ಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.