ಬೀದರ್: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಘಟಕದ ಕಾರ್ಯಕರ್ತರು ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಬೀದರ್ ತಾಲ್ಲೂಕಿನ ಚಿಟ್ಟಾವಾಡಿಯ ಆಶ್ರಯ ಮನೆಗಳಲ್ಲಿ ಏಳು ವರ್ಷಗಳಿಂದ ಸುಮಾರು 200 ಕುಟುಂಬಗಳು ವಾಸವಾಗಿವೆ. ಅಲ್ಲಿ ಮೂಲಸೌಲಭ್ಯಗಳಾದ ರಸ್ತೆ, ಒಳಚರಂಡಿ, ವಿದ್ಯುತ್, ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಆಶ್ರಯ ಮನೆಗಳ ಸಮೀಪ ಗಿಡಗಂಟಿಗಳು ಬೆಳೆದಿವೆ. ಮನೆಗಳ ಸುತ್ತ ವಿಷಜಂತುಗಳು ಹೆಚ್ಚಾಗಿವೆ. ಮಕ್ಕಳು ಆಟವಾಟಲು ಹೋದಾಗ ಹಾವು ಕಚ್ಚಿ ಮೃತಪಟ್ಟ ಉದಾಹರಣೆಯೂ ಇದೆ. ಆದ್ದರಿಂದ ಚಿಟ್ಟಾವಾಡಿಗೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಆಹಾರ ಸರಬರಾಜಿನಲ್ಲಿ ಜಿಲ್ಲಾ ಹಿಂದುಳಿದ ಕಲ್ಯಾಣ ಅಧಿಕಾರಿ ನಡೆಸಿದ್ದಾರೆ ಎನ್ನಲಾದ ಅವ್ಯವಹಾರದ ತನಿಖೆ ನಡೆಸಬೇಕು. ಬಡ ಜನರ ಸಮಸ್ಯೆಗಳಿಗೆ ಸ್ಪಂದಿಸದ ಬೀದರ್ ನಗರಸಭೆಯ ಆಯುಕ್ತರ ವರ್ಗಾವಣೆ ಮಾಡಬೇಕು.
ಔರಾದ್ ತಾಲ್ಲೂಕಿನ ಲೋಕೋಪಯೋಗಿ ಇಲಾಖೆಯಲ್ಲಿ ಎಸ್.ಸಿ.ಪಿ., ಟಿ.ಎಸ್.ಪಿ. ಮತ್ತು 2234 ಹೊಸ ಯೋಜನೆಗಳಲ್ಲಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ರಮೇಶ ಕಾಳೇಕರ್, ಜಿಲ್ಲಾ ಸಂಚಾಲಕ ಕಲ್ಯಾಣರಾವ್ ಭೋಸ್ಲೆ, ಮುಖಂಡರಾದ ಅಶೋಕ ಸಂಗಮ್, ಮಾಣಿಕರಾವ್ ಪವಾರ, ಸಂಜುಕುಮಾರ ಮೇತ್ರೆ, ನಾಗರಾಜ ಮರ್ಜಾಪೂರ, ಸಂಜೀವಕುಮಾರ ಲಾಧಾ ಪ್ರತಿಭಟನಾಕಾರರ ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.