ಬೀದರ್: ನಮ್ಮ ಮನಸ್ಸು ಸದಾ ಏನನ್ನಾದರೂ ಮಾಡುತ್ತಿರುತ್ತದೆ. ಶಾಂತಿಗಾಗಿ ಹಂಬಲಿಸುತ್ತದೆ. ದೇಹ-ಮನಸ್ಸು-ಹೃದಯ ಆರೋಗ್ಯಪೂರ್ಣವಾಗಿ ಇರಬೇಕಾದರೆ ಇಷ್ಟಲಿಂಗ ಯೋಗ ಬೇಕು. ಇದೊಂದು ವಿಜ್ಞಾನ. ಇಷ್ಟಲಿಂಗಯೋಗದಿಂದ ದೇಹ, ಮನಸ್ಸು, ಹೃದಯ ವಿಕಾಸವಾಗುತ್ತದೆ. ಅಧುನಿಕ ಒತ್ತಡ ಬದುಕಿಗೆ ಇಷ್ಟಲಿಂಗಯೋಗ ಮಾರ್ಗ ಬೇಕು.
ಇಷ್ಟಲಿಂಗ ಸರ್ವಸಮಾನತೆಯ ಪ್ರತೀಕ. ಮನಃಶಾಂತಿಯ ಸಾಧನ. ಇದು ಯಾವುದೇ ಜಾತಿ-ಮತ-ಪಂಥಕ್ಕೆ ಸೀಮಿತವಾಗಿಲ್ಲ. ಯಾರಿಗೆ ಮನಃಶಾಂತಿ ಬೇಕೊ ಅವರೆಲ್ಲರೂ ಇಷ್ಟಲಿಂಗಯೋಗ ಮಾಡಬೇಕು. ಇಷ್ಟಲಿಂಗಯೋಗ ಮಾಡುವುದರಿಂದ ಮನುಷ್ಯ ಎಂಥ ಪ್ರಸಂಗದಲ್ಲಿಯೂ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಾನೆ. ಸದಾ ಉತ್ಸಾಹಿಯಾಗಿರುತ್ತಾನೆ. ಗಾಯವಾದಾಗ ಔಷಧ ಹಚ್ಚುವುದಕ್ಕಿಂತ ಗಾಯವೇ ಆಗದಂತೆ ಮಾಡುತ್ತದೆ ಇಷ್ಟಲಿಂಗಯೋಗ. ಎಂತಹ ಸಂದರ್ಭದಲ್ಲಿಯೂ ಪ್ರಸನ್ನತೆ ಇರುತ್ತದೆ. ಪ್ರಶಾಂತ ಭಾವವಾಗುತ್ತದೆ. ಎಲ್ಲರ ಜೊತೆ ಪ್ರೇಮಭಾವ ನಿರ್ಮಾಣವಾಗುತ್ತದೆ. ಅಹಂ ನಾಶವಾಗುತ್ತದೆ. ಸ್ವಾರ್ಥ ಮಾಯವಾಗುತ್ತ ನಿಸ್ವಾರ್ಥ ಭಾವ ಉದಯವಾಗುತ್ತದೆ.
12ನೇ ಶತಮಾನದ ಶರಣ-ಶರಣೆಯರು ಇಷ್ಟಲಿಂಗ ಯೋಗ ಮಾಡುತ್ತ ಮಾಡುತ್ತ ಕಲ್ಯಾಣ ರಾಜ್ಯ ನಿರ್ಮಾಣ ಮಾಡಿ ತೋರಿಸಿದರು. ಭಾವೈಕ್ಯದಿಂದ ಬಾಳಿ ತೋರಿದರು. ಇಂದಿಗೂ ನಾವು ಬಸವಾದಿ ಶರಣರ ಇಷ್ಟಲಿಂಗಯೋಗವನ್ನು ನಮ್ಮ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡಾಗ ಸರ್ವಾಂಗ ಸುಂದರ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಇದರಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.