ADVERTISEMENT

ಸಮಾಜದ ಅಂಧಕಾರ ತೊಲಗಿಸಿದವರು ಹರಿದಾಸರು: ಭೂಮರಡ್ಡಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2024, 7:33 IST
Last Updated 12 ಫೆಬ್ರುವರಿ 2024, 7:33 IST
ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನಿಂದ ಬೀದರ್‌ನಲ್ಲಿ ಶನಿವಾರ ದಾಸ ಸಾಹಿತ್ಯ ಸೌರಭ ಉಪನ್ಯಾಸ ಮಾಲಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನಿಂದ ಬೀದರ್‌ನಲ್ಲಿ ಶನಿವಾರ ದಾಸ ಸಾಹಿತ್ಯ ಸೌರಭ ಉಪನ್ಯಾಸ ಮಾಲಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು   

ಬೀದರ್‌: ‘ಹರಿದಾಸರು ಜ್ಞಾನದ ಮೂಲಕ ಸಮಾಜದಲ್ಲಿನ ನ್ಯೂನತೆ ಮತ್ತು ಅಂಧಕಾರವನ್ನು ಹೋಗಲಾಡಿಸಿ, ಭಕ್ತಿರಸವನ್ನು ಚಿಮ್ಮಿಸಿ, ಸಾಮಾನ್ಯ ಸಾಧಕನ ಜೀವನ ಸಮೃದ್ಧಗೊಳಿಸಲು ಶ್ರಮಿಸಿದ್ದಾರೆ’ ಎಂದು ಬಿ.ವಿ. ಭೂಮರಡ್ಡಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಶಿವರಾಜ ಜಿ. ಮಠ ತಿಳಿಸಿದರು.

ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನಿಂದ ನಗರದ ಚಿಕ್ಕಮಣಿ ಡಿ. ದೇವರಾಜ ಅರಸು ಪ್ರೌಢ ಶಾಲೆಯಲ್ಲಿ ಶನಿವಾರ ಪುರಂದರದಾಸರ ಆರಾಧನೆ ಅಂಗವಾಗಿ  ಹಮ್ಮಿಕೊಂಡಿದ್ದ ‘ದಾಸರೆಂದರೆ ಪುರಂದರದಾಸರಯ್ಯ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಲೌಕಿಕ ಹಿತದ ಜೊತೆಗೆ ಪಾರಮಾರ್ಥಿಕ ಸತ್ಯದ ಕಡೆಗೆ ಸಾಮಾನ್ಯರ ಮನಸ್ಸು ಆಕರ್ಷಿಸಿದ ಹರಿದಾಸರು, ಜಗದ ಏಳಿಗೆಯನ್ನು ಕನ್ನಡದ ಸಿರಿಗಂಧದ ಕೀರ್ತನೆ ಸಾಹಿತ್ಯದ ಮೂಲಕ ಮಾಡಿದ್ದಾರೆ ಎಂದರು.

ADVERTISEMENT

ಪ್ರೊ. ಬಸವರಾಜ ಬಿರಾದಾರ ಮಾತನಾಡಿ, ಪುರಂದರದಾಸರು ಜನಪದ ಹಾಗೂ ಮಾನವ ಜನಾಂಗದ ಕವಿಗಳು. ಅವರು ತಮ್ಮ ಬಾಳಿನುದ್ದಕ್ಕೂ ಅನುಭವಿಸಿದ್ದನ್ನು ಪ್ರಾಮಾಣಿಕವಾಗಿ ಕೀರ್ತನೆಗಳ ಮೂಲಕ ಹೇಳಿದ್ದಾರೆ. ಡಂಭಾಚಾರ, ಕಂದಾಚಾರ, ಅಪನಂಬಿಕೆಗಳು ಹೋಗಲಾಡಿಸುವ ಶಕ್ತಿಯುತವಾದ ಜೀವನಮೌಲ್ಯಗಳನ್ನು ಸಮಾಜಕ್ಕೆ ನೀಡಿದ್ದಾರೆ ಎಂದು ತಿಳಿಸಿದರು.

ಮುಖ್ಯಶಿಕ್ಷಕ ವಿಜಯಕುಮಾರ ಪಾಟೀಲ, ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ರವೀಂದ್ರ ಲಂಜವಾಡಕರ, ಮೆಹಬೂಬ್ ಉಸ್ತಾದ್‌, ಪ್ರಕಾಶ ಬಿರಾದಾರ, ಮೊಹಮ್ಮದ್‌ ಆರೀಫ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.