
ಹುಲಸೂರ: ಸಮೀಪದ ಭಾಲ್ಕಿ ತಾಲ್ಲೂಕಿನ ಹಲಸಿ ತುಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀಮಾಳಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಸುರಿದ ಅರ್ಧ ಗಂಟೆ ಮಳೆಗೆ ಗ್ರಾಮದ ತುಳಿಸಿರಾಮ ಅರ್ಜುನೆ, ಪಾಂಡುರಂಗ ಅರ್ಜುನೆ ಸೇರಿ ಸುತ್ತಮುತ್ತಲಿನ ಮನೆಗಳಿಗೆ ನೀರು ನುಗ್ಗಿ ಹಾನಿ ಉಂಟಾಗಿದೆ.
‘ಗ್ರಾಮದ ಓಣಿಯಲ್ಲಿ ವಾಸಿಸುವ ತುಳಸಿರಾಮ ಹಾಗೂ ಪಾಂಡುರಂಗ ಅವರಿಗೆ ವಯಸ್ಸಾಗಿದ್ದು, ತಮ್ಮ ಪತ್ನಿಯರೊಂದಿಗೆ ಜಿವನ ನಡೆಸುತ್ತಿದ್ದಾರೆ. ಮಳೆಯ ನೀರು ಮನೆಗೆ ನುಗ್ಗಿದ ಪರಿಣಾಮ ರಾತ್ರಿಯಿಡಿ ಪಾತ್ರೆಯ ಮೂಲಕ ನೀರನ್ನು ಹೊರಹಾಕಲು ಪ್ರಯತ್ನಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಭಾರಿ ಪ್ರಯಾಣದಲ್ಲಿ ನೀರು ನುಗ್ಗಿದ್ದರಿಂದ ಸಂಪೂರ್ಣ ಹೊರಹಾಕಲು ಸಾಧ್ಯವಾಗುವುದಿಲ್ಲ. ಮಳೆಗಾಲದ ಪೂರ್ವಸಿದ್ಧತೆಯಲ್ಲಿ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ಹಾಗೂ ಜೆಜೆಎಂ ಕಳಪೆ ಕಾಮಗಾರಿ ಎದ್ದು ಕಾಣುತ್ತಿದೆ’ ಎಂದು ಗ್ರಾಮಸ್ಥ ಗಣೇಶ್ ಆರೋಪಿಸಿದ್ದಾರೆ.
‘ಜೂನ್ ತಿಂಗಳ ಮೊದಲ ಮಳೆಗೆ ಓಣಿಯ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದ್ದು, ಸದ್ಯಕ್ಕೆ ಓಡಾಡಲು ತೊಂದರೆಯಾಗಿದೆ. ವಿಷಕಾರಿ ಜಂತುಗಳು ಮನೆಗೆ ನುಗ್ಗುವ ಪರಸ್ಥಿತಿ ನಿರ್ಮಾಣವಾಗಿದ್ದು, ಈ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಕ್ರಮ ಕೈಗೊಂಡಿಲ್ಲ’ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳ ಹಾಗೂ ಸದಸ್ಯರ ನಿರ್ಲಕ್ಷ್ಯಕ್ಕೆ ಸ್ಥಳೀಯ ನಿವಾಸಿಗಳು ಆಕ್ರೋಶ ಹೊರಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.