
ಬಸವಕಲ್ಯಾಣ: ನಗರದ ತೇರು ಮೈದಾನದಲ್ಲಿ ಸೋಮವಾರ ಬೆಳಿಗ್ಗೆ ಕಿಕ್ಕಿರಿದು ತುಂಬಿದ್ದ ಭಕ್ತರ ಮಧ್ಯೆ ತೇರು ಎಳೆಯಲಾಯಿತು. ಮಳೆ ಸುರಿದಿದ್ದರಿಂದ ಹಾಗೂ ಮತ್ತಿತರ ಕಾರಣಗಳಿಂದ ಆಮಂತ್ರಣ ಪತ್ರಿಕೆಯಲ್ಲಿನ ನಿಗದಿತ ಸಮಯಕ್ಕೂ ಆರು ಗಂಟೆ ತಡವಾಗಿ ರಥೋತ್ಸವ ನಡೆಯಿತು. ಬಸವ ಜಯಂತಿ ಅಂಗವಾಗಿ ಮೂರು ದಿನಗಳವರೆಗೆ ನಡೆದ ಜಾತ್ರೆ ಸಂಭ್ರಮದಿಂದ ಸಮಾರೋಪಗೊಂಡಿತು.
ಪುಷ್ಪಗಳಿಂದ ಅಲಂಕರಿಸಿ ಕಾರ್ಯಕ್ರಮದ ಕಟ್ಟೆ ಹತ್ತಿರ ನಿಲ್ಲಿಸಿದ್ದ ತೇರನ್ನು ಪೂರ್ವ ದಿಕ್ಕಿನ ಕಡೆಗೆ ಎಳೆದು ಮತ್ತೆ ಮೊದಲಿನ ಸ್ಥಳಕ್ಕೆ ತಂದು ನಿಲ್ಲಿಸಲಾಯಿತು. ಯುವಕರು ತೇರಿಗೆ ಕಟ್ಟಿದ್ದ ಹಗ್ಗವನ್ನು ಹಿಡಿದು ಎಳೆಯುತ್ತಿದ್ದರೆ ‘ಬಸವೇಶ್ವರ ಮಹಾರಾಜ ಕೀ ಜೈ’, ‘ಜೈ ಗುರು ಬಸವ’ ಎಂಬಿತ್ಯಾದಿ ಜಯಘೋಷ ಮೊಳಗಿದವು. ಭಕ್ತರು ನಾಣ್ಯ ಮತ್ತು ಹಣ್ಣುಗಳನ್ನು ಅದರ ಮೇಲೆ ಎಸೆದು ದರ್ಶನ ಪಡೆದರು. ಈ ಸಂದರ್ಭದಲ್ಲಿ ಪಟಾಕಿಯನ್ನೂ ಸಿಡಿಸಲಾಯಿತು.
ಇದಕ್ಕೂ ಮೊದಲು ಇಡೀ ರಾತ್ರಿ ಬಸವೇಶ್ವರ ದೇವಸ್ಥಾನದಿಂದ ತೇರು ಮೈದಾನದವರೆಗೆ ನಂದಿ ಧ್ವಜಗಳ ಮೆರವಣಿಗೆ ನಡೆಯಿತು. ವಿದ್ಯುತ್ ದೀಪ, ಬಣ್ಣ ಬಣ್ಣದ ಪತಾಕೆ ಹಾಗೂ ಹೂವುಗಳಿಂದ ಅಲಂಕರಿಸಿದ್ದ ಐದು ನಂದಿ ಧ್ವಜಗಳನ್ನು ಕೊಂಡೊಯ್ಯಲಾಯಿತು. ಬೆಳ್ಳಿ ಪಲ್ಲಕ್ಕಿ, ಬೆಳ್ಳಿ ತೊಟ್ಟಿಲು, ಶರಣರ ವೇಷಧಾರಿಗಳು, ವಿವಿಧ ವಾದ್ಯ ಮೇಳದವರು ಪಾಲ್ಗೊಂಡಿದ್ದರು. ಮೆರವಣಿಗೆ ಮಾರ್ಗದಲ್ಲಿನ ಭಕ್ತರು ಕುಟುಂಬ ಸಮೇತರಾಗಿ ಪಲ್ಲಕ್ಕಿಗೆ ತೆಂಗು ಹಾಗೂ ಕರ್ಪೂರ ಅರ್ಪಿಸಿದರು.
ಮೆರವಣಿಗೆ ಕೋಟೆ ಹತ್ತಿರ ಬಂದಾಗ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಪೂಜೆ ಸಲ್ಲಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಎಲ್.ಚನ್ನಬಸವಣ್ಣ, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಕೋರಕೆ, ವಿಶ್ವಸ್ಥ ಸಮಿತಿ ಅಧ್ಯಕ್ಷ ಶಶಿಕಾಂತ ದುರ್ಗೆ, ಮಲ್ಲಿಕಾರ್ಜುನ ಚಿರಡೆ, ಶ್ರೀಕಾಂತ ಬಡದಾಳೆ, ವಿವೇಕಾನಂದ ಹೊದಲೂರೆ, ಅನಿಲಕುಮಾರ ರಗಟೆ, ಕಾಶಪ್ಪ ಸಕ್ಕರಬಾವಿ, ಮಲ್ಲಯ್ಯ ಹಿರೇಮಠ, ವೀರಣ್ಣ ಹಲಶೆಟ್ಟೆ, ಅಶೋಕ ನಾಗರಾಳೆ, ಡಾ.ಜಿ.ಎಸ್.ಭುರಳೆ, ಜಗನ್ನಾಥ ಖೂಬಾ, ರೇವಣಪ್ಪ ರಾಯವಾಡೆ, ಗದಗೆಪ್ಪ ಹಲಶೆಟ್ಟೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.