ಬಸವಕಲ್ಯಾಣ: ‘ಸಮ್ಮೇಳನಗಳಿಂದ ವೈಚಾರಿಕತೆ, ಸೌಹಾರ್ದ ಬೆಳೆಯುತ್ತದೆ. ಸಾಮಾಜಿಕ ಹೊಣೆಗಾರಿಕೆಯ ಅರಿವಾ ಗುತ್ತದೆ’ ಎಂದು ಸಾಹಿತಿ ಡಾ.ಕಾಶಿನಾಥ ಅಂಬಲಗೆ ಹೇಳಿದರು.
ಇಲ್ಲಿಗೆ ಸಮೀಪದ ಬೇಲೂರನ ಶರಣ ಉರಿಲಿಂಗ ಪೆದ್ದಿ ಮಠದಲ್ಲಿ ಭಾನುವಾರ ಶಿವಲಿಂಗೇಶ್ವರ ಶಿವಯೋಗಿಗಳ ಪುಣ್ಯ ಸ್ಮರಣೆ ಅಂಗವಾಗಿ ನಡೆದ ಉರಿಲಿಂಗ ಪೆದ್ದಿ ಉತ್ಸವ, ಗ್ರಂಥಾಲಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
‘ಈ ಮಠದಲ್ಲಿ ಬಂಡಾಯ, ಜಾನಪದ ಸಾಹಿತ್ಯ ಸಮ್ಮೇಳನ ಒಳಗೊಂಡು ಅನೇಕ ಸಮ್ಮೇಳನಗಳನ್ನು ಆಯೋಜಿಸಿ ನಾಡು ನುಡಿಯ ಸೇವೆಗೈಯಲಾಗಿದೆ. ಡಿಜಿಟಲ್ ಗ್ರಂಥಾಲಯ ಕ್ರಾಂತಿ ನಡೆಸಿದ ಡಾ.ಸತೀಶಕುಮಾರ ಹೊಸಮನಿ ಅವರ ಅಧ್ಯಕ್ಷತೆಯಲ್ಲಿ ಗ್ರಂಥಾಲಯ ಸಮ್ಮೇಳನ ಆಯೋಜಿಸಿರುವುದು ಉತ್ತಮ ಕಾರ್ಯ. ಪೀಠಾಧಿಪತಿ ಪಂಚಾಕ್ಷರಿ ಸ್ವಾಮೀಜಿ ಅವರು ಮಠದಲ್ಲಿ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಿ ಇತರ ಮಠಗಳಕ್ಕಿಂತ ಭಿನ್ನ ಎಂಬುದನ್ನು ತೋರಿಸಿಕೊಟ್ಟಿದ್ದಾರೆ’ ಎಂದರು.
ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಮಾತನಾಡಿ,‘ಬಸವಣ್ಣನವರು ಸಮಾ ನತೆಗಾಗಿ ಕ್ರಾಂತಿಗೈದರು. ಶರಣ ಉರಿಲಿಂಗ ಪೆದ್ದಿ, ಮಾದಾರ ಚನ್ನಯ್ಯ ಮುಂತಾದ ಶರಣರ ಹೃದಯದಲ್ಲಿ ದೇವರನ್ನು ಕಂಡರು. ಶರಣ ತತ್ವವನ್ನು ಎಲ್ಲರೂ ಪಾಲಿಸಬೇಕು’ ಎಂದರು.
ಸಮ್ಮೇಳನದ ಸರ್ವಾಧ್ಯಕ್ಷ ಡಾ.ಸತೀಶಕುಮಾರ ಹೊಸಮನಿ ಮಾತನಾಡಿ,‘ಗ್ರಂಥಾಲಯಗಳು ವಿವಿಧ ಬಗೆಯ ಜ್ಞಾನದ ಕೇಂದ್ರಗಳಾಗಿವೆ. ಜಗತ್ತನ್ನು ಯಾವುದೇ ಶಕ್ತಿ ಆಳುವುದಿಲ್ಲ. ಆದರೆ, ವೈಚಾರಿಕತೆ ಎಲ್ಲೆಡೆ ಕ್ರಾಂತಿ ತರಬಲ್ಲದು. ಇಂಥ ವೈಚಾರಿಕತೆ ಬಿತ್ತುವ ಪುಸ್ತಕಗಳು ಗ್ರಂಥಾಲಯಗಳಲ್ಲಿ ಮಾತ್ರ ದೊರಕಬಲ್ಲವು’ ಎಂದರು.
‘ದೇಶದಲ್ಲಿಯೇ ಕರ್ನಾಟಕದಲ್ಲಿ ಹೆಚ್ಚಿನ ಗ್ರಂಥಾಲಯಗಳಿವೆ. ಲಕ್ಷಾಂತರ ಪುಸ್ತಕಗಳ ಡಿಜಿಟಲೀಕರಣ ಆಗಿದೆ. ಇದರಿಂದ ಅಂಗೈಯಲ್ಲಿನ ಮೊಬೈಲ್ನಲ್ಲಿಯೇ ಪುಸ್ತಕಗಳನ್ನು ಓದಬಹುದು. ಉರಿಲಿಂಗ ಪೆದ್ದಿಯವರ 358 ವಚನಗಳು ದೊರೆತಿವೆ. ರಾಜ್ಯದಲ್ಲಿನ ಅನೇಕ ಮಠಗಳು ಶಿಕ್ಷಣ ನೀಡುವ ಕೇಂದ್ರಗಳಾಗಿವೆ. ಅನ್ನ ಅರಿವಿನ ಕೇಂದ್ರಗಳಾಗಿವೆ’ ಎಂದರು.
ಡಾ.ಗವಿಸಿದ್ದಪ್ಪ ಪಾಟೀಲ ಮಾತನಾಡಿದರು.
ಪೀಠಾಧಿಪತಿ ಪಂಚಾಕ್ಷರಿ ಸ್ವಾಮೀಜಿ, ತಹಶೀಲ್ದಾರ್ ಶಿವಾನಂದ ಮೇತ್ರೆ, ಮಲ್ಲಿನಾಥ ಹಿರೇಮಠ, ಜಯದೇವಿ ಗಾಯಕವಾಡ, ಸಂಜೀ ವಕುಮಾರ ನಡುಕರ್, ಮಹಾಲಿಂಗ ದೇವರು, ಕರುಣಾದೇವಿ, ಡಾ.ಗಣಪತಿ ಶಿಂಧೆ, ಜಗನ್ನಾಥ ಚಿಲ್ಲಾಬಟ್ಟೆ, ಸುರೇಶ ಕಾನೇಕರ್ ಹಾಗೂ ಸಿದ್ಧಾರ್ಥ ಬಾವಿಕಟ್ಟಿ ಇದ್ದರು. ಸಮ್ಮೇಳನಾಧ್ಯಕ್ಷ ಡಾ.ಸತೀಶಕುಮಾರ ಹೊಸಮನಿ ಅವರನ್ನು ಸಾರೋಟದಲ್ಲಿ ಮೆರವಣಿಗೆ ನಡೆಸಿ ವೇದಿಕೆಗೆ ಕರೆತರಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.