ಔರಾದ್: ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಈಚೆಗೆ ನಡೆದ 19ನೇ ಕಲ್ಯಾಣ ಪರ್ವ ಕಾರ್ಯಕ್ರಮದಲ್ಲಿ ಇಲ್ಲಿಯ ಬಾಲ ಕಲಾವಿದೆ ಶಿವಮಹಿಮಾ ವಚನ ಗಾಯನ ಹಾಡಿ ಗಮನ ಸೆಳೆದರು.
ಈ ಕಲಾವಿದೆಯ ಅದ್ಭತ ಕಂಠಸಿರಿಯಿಂದ ಹೊರ ಬಂದ ವಚನ ಗಾಯನ ಕೇಳಿ ಭಕ್ತರು ಮನಸಾರೆ ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ಉತ್ಸವ ಅಂಗವಾಗಿ ನಡೆದ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಶಿವಮಹಿಮಾಗೆ ಬಸವಧರ್ಮ ಪೀಠದ ಗಂಗಾ ಮಾತೆ ಅವರು ಶಾಲು ಹೊದಿಸಿ ಗೌರವಿಸಿದರು.
ಔರಾದ್ ಪಟ್ಟಣದ ನಿವಾಸಿ ಮನೋಹರ ಕಾಡೋದೆ ಅವರ 12 ವರ್ಷದ ಪುತ್ರಿ ಶಿವಮಹಿಮಾಗೆ ಸಂಗೀತ ಎಂದರೆ ಪಂಚಪ್ರಾಣ. ಕಳೆದ ವರ್ಷ ಬೆಂಗಳೂರಿನ ವಿಶ್ವವಚನ ಫೌಂಡೇಶನ್ ಆಯೋಜಿಸಿದ್ದ ರಾಜ್ಯ ಮಟ್ಟದ ವಚನಗಾಯನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಗಿಟ್ಟಿಸಿಕೊಂಡಿದ್ದಾರೆ.
ಇವರ ಅದ್ಭುತ ಕಂಠಸಿರಿಯಿಂದ ಹೊರ ಹೊಮ್ಮುವ 'ತರವಲ್ಲ ತಂಗಿ ತಂಬೂರಿ' ಎಲ್ಲಾದರೂ ಇರು ಎಂತಾದರೂ ಇರು... ಕೋಡಗನ ಕೋಳಿ ನುಂಗಿತ್ತಾ ತಂಗಿ... ರಾಯರು ಬಂದರು ಮಾವನ ಮನೆಗೆ, ಶ್ರಾವಣ ಬಂತು ನಾಡಿಗೆ.. ಇಂತಹ ಅನೇಕ ಹಾಡುಗಳು ಹಾಡಿ ಸಂಗೀತ ಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲೂ ಉತ್ತಮ ಕಲೆ ಪ್ರದರ್ಶಿಸಿ ಬಹುಮಾನ ಪಡೆದಿದ್ದಾರೆ. ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಬಸವ ಉತ್ಸವದಲ್ಲಿ ಸಂಗೀತ ಕಾರ್ಯಕ್ರಮ ಕೊಟ್ಟಿದ್ದಾರೆ. ಇವರ ಪ್ರತಿಭೆ ಮೆಚ್ಚಿ ಬೀದರ್ನ ದೇಶಪಾಂಡೆ ಫೌಂಡೇಶನ್ ‘ಸರಸ್ವತಿ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.