ಭಾಲ್ಕಿ: ಸುಂದರ ಸಮಾಜ ನಿರ್ಮಾಣಕ್ಕೆ ಸಮಾಜದ ಪ್ರತಿಯೊಬ್ಬರು ಪ್ರತಿನಿತ್ಯ ಸಾಧು ಸಂತರ, ಮಹಾತ್ಮರ, ಸದ್ಗುಣಿಗಳ ಸಂಪರ್ಕದಲ್ಲಿ ಇರಬೇಕು ಎಂದು ಹುಲಸೂರಿನ ಶಿವಾನಂದ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಹಲಬರ್ಗಾ ಗ್ರಾಮ ಸಮೀಪದ ಪಿಯು ಕಾಲೇಜಿನ ಬಳಿಯ ಹನುಮಾನ ದೇವಸ್ಥಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹನುಮಾನ ದೇವರ ಮೊದಲ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಮದಲ್ಲಿ ಮೇಲಿಂದ ಮೇಲೆ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ಸಹಕಾರದ ಗುಣಗಳನ್ನು ಬೆಳೆಸುತ್ತವೆ ಎಂದರು.
ಜೈ ಭಾರತ ಮಾತಾ ಸೇವಾ ಸಮಿತಿಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಹವಾಮಲ್ಲಿನಾಥ ಮಹಾರಾಜರು, ಹಾವಗಿಲಿಂಗೇಶ್ವರ ಶಿವಾಚಾರ್ಯರು, ಮಳಚಾಪೂರಿನ ಸದ್ರೂಪಾನಂದ ಸ್ವಾಮೀಜಿ ಮಾತನಾಡಿದರು.
ಇದಕ್ಕೂ ಮೊದಲು ಗ್ರಾಮದ ಹನುಮಾನ ದೇವಸ್ಥಾನದಿಂದ ಪಿಯು ಕಾಲೇಜಿನ ಬಳಿಯ ಹನುಮಾನ ದೇವಸ್ಥಾನದವರೆಗೆ ಎಲ್ಲ ಪೂಜ್ಯರನ್ನು ತೆರೆದ ವಾಹನಗಳಲ್ಲಿ ಕೂಡಿಸಿಕೊಂಡು ಭವ್ಯ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯಲ್ಲಿ ಕುಂಭ ಕಳಸ ಹೊತ್ತ ಮಹಿಳೆಯರು, ಯುವಕರು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಪ್ರಮುಖರಾದ ಪಪ್ಪು ಪಾಟೀಲ, ಪ್ರಕಾಶ ಪ್ರಭಾ, ಉದಯಕುಮಾರ ಮೂಲಗೆ, ಪಿಂಟು ಠಾಕೂರ್, ರಾಮಸಿಂಗ್ ಠಾಕೂರ್, ಮಲ್ಲಪ್ಪ ತೆಲಂಗ, ರಮೇಶ ತೆಲಂಗ, ಕೃಷ್ಣಾ ತೆಲಂಗ, ಸುಧಾಕರ ಯಡೂರು, ವಿಜಯಕುಮಾರ ಬರದಪುರೆ, ರಾಜಕುಮಾರ ಕಟರ್, ರಾಹುಲ್ ಪಾಟೀಲ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.