ಬೀದರ್: ಹೈದರಾಬಾದ್ ಕರ್ನಾಟಕ ಶಿಕ್ಷಣ (ಎಚ್ಕೆಇ) ಸಂಸ್ಥೆ ಆಡಳಿತ ಮಂಡಳಿ ಸದಸ್ಯರಾಗಿ ಡಾ. ರಜನೀಶ್ ವಾಲಿ ಅವರು ಪುನರಾಯ್ಕೆಯಾದ ಹಿನ್ನೆಲೆಯಲ್ಲಿ ನಗರದಲ್ಲಿ ವಿವಿಧ ಜನಪ್ರತಿನಿಧಿಗಳು, ಸಂಘಟನೆಗಳ ಮುಖಂಡರು ಬುಧವಾರ ಸನ್ಮಾನಿಸಿದರು.
ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ, ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ, ಬೀದರ್ ವಿಶ್ವವಿದ್ಯಾಲಯದ ಡೀನ್ ಜಗನ್ನಾಥ ಹೆಬ್ಬಾಳೆ, ಕಲ್ಯಾಣ ಕರ್ನಾಟಕ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸಂಘದ ಗೌರವ ಅಧ್ಯಕ್ಷ ರೇವಣಸಿದ್ದಪ್ಪ ಜಲಾದೆ, ಪ್ರಮುಖರಾದ ರಾಜಕುಮಾರ ಹೆಬ್ಬಾಳೆ, ವಿರೂಪಾಕ್ಷ ಗಾದಗಿ ಅವರು ರಜನೀಶ್ ವಾಲಿ ಅವರನ್ನು ಸನ್ಮಾನಿಸಿದರು.
ಗೌರವ ಸ್ವೀಕರಿಸಿ ಮಾತನಾಡಿದ ರಜನೀಶ್ ವಾಲಿ,‘ಎಚ್.ಕೆ.ಇ. ಸೊಸೈಟಿ ಸಂಚಾಲಿತ ನಗರದ ಬಿ.ವಿ. ಭೂಮರಡ್ಡಿ ಕಾಲೇಜು ಆವರಣದಲ್ಲಿರುವ ನ್ಯಾಷನಲ್ ಇಂಗ್ಲಿಷ್ ಮಾಧ್ಯಮ ಪಬ್ಲಿಕ್ ಶಾಲೆಯಲ್ಲಿ ಏ. 1ರಿಂದ ಸೈನಿಕ ಶಾಲೆ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಲಿದೆ’ ಎಂದು ಹೇಳಿದರು.
‘ಸದ್ಯ ನ್ಯಾಷನಲ್ ಇಂಗ್ಲಿಷ್ ಮಾಧ್ಯಮ ಪಬ್ಲಿಕ್ ಶಾಲೆ ಕಟ್ಟಡದಲ್ಲೇ ಸೈನಿಕ ಶಾಲೆಯ ಆರನೇ ತರಗತಿ ಶುರುವಾಗಲಿದೆ. ಸದರಿ ಸೈನಿಕ ಶಾಲೆಗೆ 80 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಇರಲಿದೆ. ಎರಡು ವರ್ಷಗಳಲ್ಲಿ ಸೈನಿಕ ಶಾಲೆಯ ಸುಸಜ್ಜಿತ ಕಟ್ಟಡ ನಿರ್ಮಾಣಗೊಳ್ಳಲಿದೆ. ರಕ್ಷಣಾ ಸಚಿವಾಲಯ ಹಾಗೂ ಸೈನಿಕ ಸೊಸೈಟಿ ನಿಯಮಾವಳಿ ಪ್ರಕಾರ ಎಲ್ಲ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗುವುದು’ ಎಂದರು.
ನವದೆಹಲಿಯ ಸಿ.ಬಿ.ಎಸ್.ಇ. ಸಂಯೋಜನೆಯೊಂದಿಗೆ ನ್ಯಾಷನಲ್ ಇಂಗ್ಲಿಷ್ ಮಾಧ್ಯಮ ಪಬ್ಲಿಕ್ ಶಾಲೆ ಆರಂಭಿಸಲಾಗಿದೆ. ಶಾಲೆಯಲ್ಲಿ 746 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಬಿ.ವಿ. ಭೂಮರಡ್ಡಿ ಕಾಲೇಜು ಒಟ್ಟು 52 ಎಕರೆ ಜಮೀನು ಹೊಂದಿದೆ. ಈ ಪೈಕಿ ನಾಲ್ಕು ಎಕರೆ ಕಾಲೇಜು ಹೆಸರಿನಲ್ಲಿ ಇತ್ತು. ಉಳಿದ 48 ಎಕರೆಗೆ ಸಂಬಂಧಿಸಿದಂತೆ ವ್ಯಾಜ್ಯಗಳು ನಡೆದಿದ್ದವು. ಅವೆಲ್ಲವುಗಳನ್ನೂ ಬಗೆಹರಿಸಲಾಗಿದೆ. 52 ಎಕರೆ ಜಮೀನು ಬಿ.ವಿ. ಭೂಮರಡ್ಡಿ ಕಾಲೇಜು ಹೆಸರಿಗೆ ಆಗಿದೆ. ಪಹಣಿಯಲ್ಲೂ ಬಂದಿದೆ ಎಂದು ಹೇಳಿದರು.
ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ ಕೂಡ ಗೌರವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.