ಬಸವಕಲ್ಯಾಣ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬರೆಯಲಿರುವ 5468 ವಿದ್ಯಾರ್ಥಿಗಳಿಗೆ ಮಾಸ್ಕ್ ಕೊಡುಗೆಯಾಗಿ ನೀಡುವುದಕ್ಕೆ ತಾಲ್ಲೂಕು ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆ ಸಿದ್ಧತೆ ನಡೆಸಿದೆ. ಈಗಾಗಲೇ 4,500 ಮಾಸ್ಕ್ಗಳನ್ನು ತಯಾರಿಸಲಾಗಿದೆ.
ಸಂಸ್ಥೆಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಈಗಾಗಲೇ ₹18 ಸಾವಿರ ದೇಣಿಗೆ ಸಂಗ್ರಹಿಸಿ ಕಳುಹಿಸಲಾಗಿದೆ. ಮಾಸ್ಕ್ ತಯಾರಿಕೆಗಾಗಿ ₹30 ಸಾವಿರ ದೇಣಿಗೆ ಸಂಗ್ರಹಿಸಲಾಗಿದೆ. ತಾಲ್ಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಸ್.ಪಿ.ಬಿರಾದಾರ ಅವರು ₹6,000 ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯೆ ಅಮ್ರಪಾಲಿ ವೀರಣ್ಣ ಅವರು ₹2,000 ದೇಣಿಗೆ ನೀಡಿದ್ದಾರೆ.
ಸಂಸ್ಥೆಯ ಜಿಲ್ಲಾ ತರಬೇತಿ ಆಯುಕ್ತ ಬಾಬುರಾವ್ ನಿಂಬೂರೆ ಹಾಗೂ ತಾಲ್ಲೂಕು ಕಾರ್ಯದರ್ಶಿ ಅನಿಲ ಶಾಸ್ತ್ರೀ ಅವರ ನೇತೃತ್ವದಲ್ಲಿ ಮಾಸ್ಕ್ ಸಿದ್ಧಪಡಿಸಲಾಗುತ್ತಿದೆ. ಸ್ವತಃ ಅನಿಲ ಶಾಸ್ತ್ರೀ ಹಾಗೂ ಸ್ಕೌಟ್ ಮತ್ತು ಗೈಡ್ಸ್ ಪ್ರಶಿಕ್ಷಣಾರ್ಥಿಗಳಾದ ಶ್ರೀನಿಧಿ, ಅಮೀತ್, ಶಿವಾನಿ, ನಂದನಿ, ಧನಶ್ರೀ ಅವರು ಹೊಲಿಗೆ ಯಂತ್ರದಿಂದ ಮಾಸ್ಕ್ ಗಳನ್ನು ಹೊಲೆದಿದ್ದಾರೆ. ಸಂಸ್ಥೆಯ ಇತರೆ ಪದಾಧಿಕಾರಿಗಳಾದ ಏಜಾಜ್ ಪಟೇಲ್, ಸಂದೀಪಾನ ಗಾಯಕವಾಡ, ಚಂದ್ರಕಲಾ, ಶಂಕರ, ಶಫಿ ಕೂಡ ಸಹಕರಿಸಿದ್ದಾರೆ. ಕೆಲ ಮಾಸ್ಕ್ಗಳನ್ನು ಟೇಲರ್ಗಳಿಂದಲೂ ಹೊಲಿಸಿಕೊಳ್ಳಲಾಗುತ್ತಿದೆ. ಟೇಲರ್ಗಳು ಪ್ರತಿ ಮಾಸ್ಕ್ಗೆ ₹6 ತೆಗೆದುಕೊಳ್ಳುತ್ತಿದ್ದಾರೆ.
‘ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವವರು ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಸರ್ಕಾರ ತಿಳಿಸಿದೆ. ಆದ್ದರಿಂದ ಎರಡು ತಿಂಗಳುಗಳಿಂದ ಮಾಸ್ಕ್ ಸಿದ್ಧಪಡಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಮಾಸ್ಕ್ ದೊರಕುವುದಿಲ್ಲ. ಅಲ್ಲಿನ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಿ ವಿತರಿಸಲಾಗುತ್ತದೆ’ ಎಂದು ಅನಿಲ ಶಾಸ್ತ್ರೀ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.