ADVERTISEMENT

ಪಾಪ, ಕರ್ಮಗಳಿಗೆ ಸ್ವಾರ್ಥ ಕಾರಣ

- ಶಿವಕುಮಾರ ಸ್ವಾಮೀಜಿ ಸಿದ್ಧಾರೂಢ ಮಠ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 15:51 IST
Last Updated 10 ಆಗಸ್ಟ್ 2020, 15:51 IST
ಶಿವಕುಮಾರ ಸ್ವಾಮೀಜಿ ಸಿದ್ಧಾರೂಢ ಮಠ, ಬೀದರ್
ಶಿವಕುಮಾರ ಸ್ವಾಮೀಜಿ ಸಿದ್ಧಾರೂಢ ಮಠ, ಬೀದರ್   

ಮಾನವ ಜನ್ಮದಿಂದಲೇ ಸ್ವಾರ್ಥಿ. ಅನೇಕ ಪಾಪ, ಕರ್ಮಗಳಿಗೆ ಮೂಲ ಕಾರಣ ಈ ಸ್ವಾರ್ಥ. ಸ್ವಾರ್ಥಕ್ಕಾಗಿಯೇ ಏನೆಲ್ಲವನ್ನು ಮಾಡುತ್ತಾನೆ. ನಾನು- ನನ್ನವರು ಸುಖವಾಗಿರಲೆಂದು ಕಳ್ಳತನಗೈಯುತ್ತಾನೆ. ಕಳ್ಳತನದಿಂದ ಯಾರ ಮನೆಯ ವಸ್ತು ತಂದಿರುತ್ತೇವೆಯೋ ಅವರ ಮನಸ್ಸಿಗೆ ಹಿಂಸೆ ಮಾಡಿದಂತಾಗುವುದು. ಕಳ್ಳತನದಲ್ಲಿ ಹಿಂಸೆ, ಸ್ತೇಯ ಎರಡೂ ಇರುತ್ತವೆ. ಅಂತೆಯೇ ಬಸವೇಶ್ವರರು ಕಳಬೇಡವೆಂದು ತಮ್ಮ ಸಪ್ತ ಸೂತ್ರದಲ್ಲಿ ಮೊದಲಿರಿಸಿದ್ದಾರೆ.

ಅನ್ಯಾಯ ಮೂಲಕ ಪರರ ಸಂಪತ್ತು, ರಾಜ್ಯ, ಧನ ಅಥವಾ ಅಧಿಕಾರ ಅಪಹರಿಸುವುದು ಸ್ತೇಯವಾಗಿದೆ. ಶ್ರೀಮಂತರು ಸಂಗ್ರಹದಲ್ಲಿಯೇ ಸುಖವೆಂದರಿದವರು. ಬಡವರ ರಕ್ತ ಹೀರಿ ಧನ ಗಳಿಸುತ್ತಾರೆ. ಕಾರ್ಖಾನೆ ಮಾಲೀಕರು ಕಡಿಮೆ ವೇತನ ನೀಡಿ ಹೆಚ್ಚು ದುಡಿಸಿಕೊಳ್ಳುವರು. ವ್ಯಾಪಾರಿಗಳು ಅನ್ನ ಮೊದಲಾದ ದಿನಸಿ ಸಾಮಗ್ರಿ ಸಂಗ್ರಹಿಸಿಟ್ಟು ಇಲ್ಲವೆಂದು ಹೇಳಿ ಅದಕ್ಕೆ ಉನ್ನತ ಬೆಲೆ ಬಂದಾಗ ಮಾರುವರು. ಕೆಲವರು ಕಲಬೆರಕೆ ಮಾಡುವರು. ಲಂಚ ತಿನ್ನುವರು. ಅನ್ಯಾಯವನ್ನು ನ್ಯಾಯವೆಂದು ಸಿದ್ಧಪಡಿಸುವುದು ಇವೆ ಮೊದಲಾದ ಸ್ತೇಯಗಳು ದೇಶದಿಂದ ನಾಶವಾದರೆ ರಾಮರಾಜ್ಯ ನಿರ್ಮಾಣವಾಗುವುದೇನಶ್ಚರ್ಯವಲ್ಲ. ಮದ್ಯಪಾನ ಮಾಡದವರು, ಪರಸ್ತ್ರೀ ನೋಡದವರು, ಹಿಂಸಾಚಾರಕ್ಕೆ ತಲೆಬಾಗದವರಿದ್ದ ಕಾಲವೇ ರಾಮರಾಜ್ಯ.

ಬಹುತೇಕ ಜನರು ಕಳ್ಳತನದಲ್ಲಿ ಪಾಲ್ಗೊಳ್ಳುತ್ತಾರೆ. ಪ್ರಪಂಚದ ಪ್ರತಿಯೊಂದು ಪದಾರ್ಥವೂ ಪರಮಾತ್ಮನದೇ. ಆತನೇ ಈ ಸೃಷ್ಟಿ ಮತ್ತು ಸೃಷ್ಟಿಯಲ್ಲಿಯ ಪದಾರ್ಥಗಳನ್ನು ನಿರ್ಮಿಸಿದ್ದಾನೆ. ಅವುಗಳೆಲ್ಲವೂ ಆವನಿಗೆ ಸೇರಿದವುಗಳು. ಅದರಲ್ಲಿ ನಮ್ಮದೆಂದು ಹೇಳುವುದು ವ್ಯರ್ಥಾಭಿಮಾನ. ಸರ್ವವೂ ಈಶ ಪ್ರದತ್ತವೇ ಆಗಿದೆ.

ADVERTISEMENT

- ಶಿವಕುಮಾರ ಸ್ವಾಮೀಜಿ,ಸಿದ್ಧಾರೂಢ ಮಠ, ಬೀದರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.