ಬೀದರ್: ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಜಿಲ್ಲಾ ಆಡಳಿತಕ್ಕೆ ಕೈಜೋಡಿಸುತ್ತ ಬಂದಿರುವ ಇಲ್ಲಿಯ ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯು ಈಗ ಕೋವಿಡ್ಗೆ ಸಂಬಂಧಿಸಿದ ಸೇವೆಗಳಿಗಾಗಿhttp://www.bidarcovidhelpline.com/ ಹೆಸರಿನ ವೆಬ್ಸೈಟ್ ಆರಂಭಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರು ನಗರದ ತಮ್ಮ ಕಚೇರಿಯಲ್ಲಿ ವೆಬ್ಸೈಟ್ಗೆ ಮಂಗಳವಾರ ಚಾಲನೆ ನೀಡಿದರು.
‘ಒಂದೇ ವೇದಿಕೆಯಡಿ ಕೋವಿಡ್ಗೆ ಸಂಬಂಧಿಸಿದ ಹಲವು ಸೇವೆಗಳನ್ನು ಒದಗಿಸಲು ಶಾಹೀನ್ ಶಿಕ್ಷಣ
ಸಮೂಹ ಸಂಸ್ಥೆ ವೆಬ್ಸೈಟ್ ಪ್ರಾರಂಭಿಸಿರುವುದು ಶ್ಲಾಘನೀಯ’ ಎಂದು ಅವರು ಹೇಳಿದರು.
‘ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಬೀದರ್ ಕೋವಿಡ್ ಹೆಲ್ಪ್ಲೈನ್ ಡಾಟ್ ಕಾಂ ಶುರು ಮಾಡಲಾಗಿದೆ. ಇದರಲ್ಲಿ ಕೋವಿಡ್ಗೆ ಸಂಬಂಧಿಸಿದ ವಿವಿಧ ಸೇವೆಗಳು ಹಾಗೂ ಮಾಹಿತಿಗಳು ದೊರೆಯಲಿವೆ’ ಎಂದು ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ತಿಳಿಸಿದರು.
‘ವೆಬ್ಸೈಟ್ ನೆರವಿನಿಂದ ಉಚಿತ ಆನ್ಲೈನ್ ಡಾಕ್ಟರ್ ಕನ್ಸಲ್ಟೆನ್ಸಿ, ಉಚಿತ ಆಂಬುಲನ್ಸ್ ಸೇವೆ, ಮನೆ ಬಾಗಿಲಿಗೆ ಉಚಿತ ಆಹಾರ ಸೇವೆ, ಉಚಿತ ಲಸಿಕೆ ನೋಂದಣಿ ಮಾಡಿಸಿಕೊಳ್ಳಬಹುದು. ಜಿಲ್ಲೆಯ ಆಸ್ಪತ್ರೆಗಳಲ್ಲಿ ಇರುವ ಕೋವಿಡ್ ಹಾಸಿಗೆಗಳ ಮಾಹಿತಿ, ಆಮ್ಲಜನಕ ಸಹಾಯವಾಣಿ, ಬೀದರ್ ಕೋವಿಡ್ ಟಾಸ್ಕ್ಫೋರ್ಸ್, ಕೋವಿಡ್ಗೆ ಸಂಬಂಧಿಸಿದ ಸುದ್ದಿ, ಬೆಳವಣಿಗೆಗಳು, ರೋಗ ನಿರೋಧಕ ಶಕ್ತಿ ವೃದ್ಧಿಸುವ ಪದಾರ್ಥ ಮೊದಲಾದ ಮಾಹಿತಿಗಳನ್ನೂ ಪಡೆಯಬಹುದು’ ಎಂದು ಹೇಳಿದರು.
‘ಶಾಹೀನ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ 60 ನುರಿತ ವೈದ್ಯರು ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದ ಮಾಹಿತಿ ನೀಡಲಿದ್ದಾರೆ. ಮೊಬೈಲ್ ಸಂಖ್ಯೆ 9844169267, 9743291442 ಅಥವಾ 9743291484ಗೆ ಸಂಪರ್ಕಿಸಿ ವೈದ್ಯರ ಸಲಹೆ ಪಡೆಯಬಹುದಾಗಿದೆ’ ಎಂದರು.
‘ಉಚಿತ ಆಂಬುಲನ್ಸ್ ಸೇವೆಗೆ ಮೊಬೈಲ್ ಸಂಖ್ಯೆ 9164447975, 8884794444, ಉಚಿತ ಲಸಿಕೆ ನೋಂದಣಿಗೆ 7259951786, 8105135786, 9743291484, ಮನೆಯಲ್ಲೇ ಕ್ವಾರಂಟೈನ್ ಆದ, ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಆಹಾರ ಸೇವೆಗಾಗಿ ಮೊಬೈಲ್ ಸಂಖ್ಯೆ 8970973758, 81255,53518ಗೆ ಸಂಪರ್ಕಿಸಬಹುದು’ ಎಂದರು.
‘ಕೋವಿಡ್ ಆರಂಭದಲ್ಲಿ ಬಡವರಿಗೆ ಉಚಿತ ಆಹಾರ ಪಾಕೇಟ್, ಸೋಂಕಿತರ ಕ್ವಾರಂಟೈನ್ಗೆ ಕಟ್ಟಡ, ಕಾರ್ಮಿಕರಿಗೆ ಬಸ್ ವ್ಯವಸ್ಥೆ ಮೊದಲಾದ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು. ಇದೀಗ ಸೋಂಕಿತರ ಚಿಕಿತ್ಸೆಗೆ ನೆರವಾಗಲು ಸಂಸ್ಥೆಯ ಎರಡು ಕಟ್ಟಡಗಳನ್ನು ಕೋವಿಡ್ ಕೇರ್ ಸೆಂಟರ್ಗಾಗಿ ಜಿಲ್ಲಾ ಆಡಳಿತಕ್ಕೆ ಕೊಡಲಾಗಿದೆ’ ಎಂದು ತಿಳಿಸಿದರು.
ಮುಖಂಡ ಗುರುನಾಥ ಜ್ಯಾಂತಿಕರ್, ತೌಸಿಫ್ ಮಡಿಕೇರಿ ಇದ್ದರು.
‘ಕೋವಿಡ್ ನಿಯಂತ್ರಣಕ್ಕೆ ಸಹಕರಿಸಿ’
ಜಿಲ್ಲೆಯಲ್ಲಿ ಕೋವಿಡ್ ತಡೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಮನವಿ ಮಾಡಿದರು.
ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಬೀದರ್ ಕೋವಿಡ್ ಹೆಲ್ಪ್ಲೈನ್ ಡಾಟ್ ಕಾಂ ವೆಬ್ಸೈಟ್ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಜನರ ರಕ್ಷಣೆಗಾಗಿ ಲಾಕ್ಡೌನ್ ಜಾರಿಗೊಳಿಸಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಈವರೆಗೆ ಲಾಕ್ಡೌನ್ಗೆ ಉತ್ತಮ ಸ್ಪಂದನೆ ದೊರಕಿದೆ. ಉಳಿದ ಅವಧಿಯಲ್ಲಿ ಕೂಡ ಪ್ರತಿಯೊಬ್ಬರೂ ನಿಯಮ ಪಾಲಿಸಬೇಕು ಎಂದು ಕೋರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.