ಭಾಲ್ಕಿ: ತಾಲ್ಲೂಕಿನ ನಾವದಗಿ ಗ್ರಾಮದ ರೇವಪ್ಪಯ್ಯ ಮಂದಿರದಲ್ಲಿ ಜೂನ್ 17ರಂದು (ಮಂಗಳವಾರ) ಸದ್ಗುರು ರೇವಪ್ಪಯ್ಯ ಶಿವಶರಣರು ತಮ್ಮ ಜೀವಿತ ಕಾಲದಿಂದಲೂ ನಡೆಸಿಕೊಂಡು ಬರುತ್ತಿದ್ದ ಷಣ್ಮುಖಸ್ವಾಮಿ ಬಿನ್ನಹ ಜಾತ್ರೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಸದಸ್ಯರು ತಿಳಿಸಿದ್ದಾರೆ.
ಪ್ರಾರಂಭದಲ್ಲಿ ಗದ್ದುಗೆ ಪೂಜೆ ನೆರವೇರಿಸಿ, ಮುತೈದೆಯರಿಗೆ ಪ್ರಸಾದ ನೀಡಿದ ನಂತರ ಬಿನ್ನಹ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಜಾತ್ರೆ ಎಂದ ತಕ್ಷಣ ತೇರು ಎಳೆಯುವುದು, ಅಗ್ನಿ ಪೂಜೆ ಇತ್ಯಾದಿ ಸಾಮಾನ್ಯ. ಆದರೆ, ಈ ಜಾತ್ರೆಯಲ್ಲಿ ಸಹಸ್ರಾರು ಜನರು ಹೂರಣ ಕಡುಬು– ತುಪ್ಪದ ಪ್ರಸಾದ ಸವಿಯುತ್ತಾರೆ. ಇಲ್ಲಿ ಹೋಳಿಗೆಯ ಹೂರಣ ಕಡುಬಿಗೆ ತುಪ್ಪ ಬಿಟ್ಟು ಬೇರೆ ಯಾವುದೇ ಪದಾರ್ಥ ನೀಡುವುದಿಲ್ಲ. ಈ ಬಿನ್ನಹ ಜಾತ್ರೆಯಲ್ಲಿ ಪ್ರಸಾದ ಸ್ವೀಕರಿಸಿದರೆ ಯಾವುದೇ ರೋಗ ಬರುವುದಿಲ್ಲ ಎನ್ನುವ ವಿಶ್ವಾಸದಿಂದ ರಾಜ್ಯದ ಅನೇಕ ಜಿಲ್ಲೆಗಳು ಸೇರಿದಂತೆ ಆಂಧ್ರಪ್ರದೇಶ, ಮಹಾರಾಷ್ಟ್ರಗಳಿಂದಲೂ ನೂರಾರು ಭಕ್ತಾರು ಬಂದು ಹೋಳಿಗೆ ತುಪ್ಪದ ಬಿನ್ನಹ ಸವಿಯುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.