ಬೀದರ್: ಬಸವಕಲ್ಯಾಣದ ಹಿರಿಯ ಮುಖಂಡ ಶಾಂತಪ್ಪ ಜಿ. ಪಾಟೀಲ ಬಿಜೆಪಿ ತೊರೆದು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ.
ಇಲ್ಲಿಯ ಶಿವನಗರದಲ್ಲಿ ಇರುವ ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಪಕ್ಷದ ಧ್ವಜ ನೀಡಿ ಅವರನ್ನು ಬರಮಾಡಿಕೊಂಡರು.
‘ಶಾಂತಪ್ಪ ಪಾಟೀಲ ಪಕ್ಷಕ್ಕೆ ಹೊಸಬರಲ್ಲ. ಅವರು ಹಿಂದೆ ಕಾಂಗ್ರೆಸ್ನಲ್ಲಿಯೇ ಇದ್ದರು. ಈಗ ಮರಳಿ ಮನೆ ಸೇರಿದ್ದಾರೆ.
ಶಾಂತಪ್ಪ ಅವರ ಸೇರ್ಪಡೆಯಿಂದ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಕ್ಕೆ ಇನ್ನಷ್ಟು ಬಲ ಬಂದಿದೆ’ ಎಂದು ಖಂಡ್ರೆ ಹೇಳಿದರು.
‘ಕಾಂಗ್ರೆಸ್ ಸೇರಿ ನನಗೆ ಖುಷಿಯಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಪಕ್ಷದ ಬಲವರ್ಧನೆಗೆ ಶ್ರಮಿಸಲಿದ್ದೇನೆ. ಯಾವುದೇ ಷರತ್ತು ಇಲ್ಲದೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ’ ಎಂದು ಶಾಂತಪ್ಪ ಪಾಟೀಲ ಹೇಳಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ದತ್ತಾತ್ರಿ ಮೂಲಗೆ, ಎಂ.ಎ. ಸಮಿ, ಹಿರಿಯ ಮುಖಂಡರಾದ ಅಮೃತರಾವ್ ಚಿಮಕೋಡೆ, ಶಿವರಾಜ ಹಾಸನಕರ್, ಶಿವರಾಜ ನರಶೆಟ್ಟಿ, ಬಾಬುರಾವ್ ತುಂಬಾ, ರಾಜಶೇಖರ ಪಾಟೀಲ ಅಷ್ಟೂರ, ನಿಸಾರ್ ಅಹಮ್ಮದ್, ಚಂದ್ರಕಾಂತ ಹಿಪ್ಪಳಗಾಂವ್, ಯುಸೂಫ್, ಶಾಕೀರ್ ಉಲ್ಲಾ ಖಾನ್, ಇರ್ಷಾದ್ ಅಲಿ ಪೈಲ್ವಾನ್, ಪರ್ವೇಜ್ ಕಮಲ್, ನಾಸೀರ್ ಖಾದ್ರಿ, ಅಬ್ದುಲ್ ಸತ್ತಾರ್ ಇದ್ದರು.
ವಿಧಾನಸಭೆಗೆ ಸ್ಪರ್ಧಿಸಿದ್ದ ಪಾಟೀಲ:20 ವರ್ಷಗಳಿಂದ ರಾಜಕಾರಣದಲ್ಲಿ ಇರುವ ಶಾಂತಪ್ಪ ಪಾಟೀಲ 2004 ರಲ್ಲಿ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆಗ ಅವರಿಗೆ 22 ಸಾವಿರ ಮತಗಳು ದೊರಕಿದ್ದವು. ಬಿಜೆಪಿ ಇತರ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಘಟಕದ ಖಜಾಂಚಿಯಾಗಿ ಕಾರ್ಯ ನಿರ್ವಹಿಸಿದ್ದರು.
ಕೋಲಿ ಸಮುದಾಯಕ್ಕೆ ಸೇರಿರುವ ಶಾಂತಪ್ಪ ಅವರು, ಕಲಬುರ್ಗಿ ಜಿಲ್ಲೆಯ ಚಿಂಚೋಳಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ಮಾಜಿ ಸಚಿವ ದಿ. ದೇವೇಂದ್ರಪ್ಪ ಘಾಳೆಪ್ಪ ಅವರ ಸೋದರಳಿಯ ಆಗಿದ್ದಾರೆ. ರಾಜಕೀಯದ ಜತೆಗೆ ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.