ADVERTISEMENT

ಶಿವಕುಮಾರ ಸ್ವಾಮೀಜಿ 80ನೇ ಜಯಂತಿ: ನಾಡಿನ 162 ಮಠಾಧೀಶರು ಭಾಗಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2024, 16:06 IST
Last Updated 10 ಫೆಬ್ರುವರಿ 2024, 16:06 IST
ಶಿವಕುಮಾರ ಸ್ವಾಮೀಜಿ ಜಯಂತಿಗೆ ಬೀದರ್‌ನ ಸಿದ್ದಾರೂಢ ಮಠದ ಆವರಣದಲ್ಲಿ ಸಿದ್ಧತೆಗಳು ಭರದಿಂದ ನಡೆಯುತ್ತಿವೆ
ಶಿವಕುಮಾರ ಸ್ವಾಮೀಜಿ ಜಯಂತಿಗೆ ಬೀದರ್‌ನ ಸಿದ್ದಾರೂಢ ಮಠದ ಆವರಣದಲ್ಲಿ ಸಿದ್ಧತೆಗಳು ಭರದಿಂದ ನಡೆಯುತ್ತಿವೆ   

ಬೀದರ್‌: ನಗರದ ಗುಂಪಾ ಸಮೀಪದ ಸಿದ್ದಾರೂಢ ಮಠದ ಪೀಠಾಧಿಪತಿ ಶಿವಕುಮಾರ ಸ್ವಾಮೀಜಿ ಅವರ 80ನೇ ಜಯಂತಿ ಅಂಗವಾಗಿ ಫೆ.14ರಿಂದ 18ರ ವರೆಗೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ.

ಪ್ರತಿ ದಿನ ಬೆಳಿಗ್ಗೆ 8 ರಿಂದ 9, ಸಂಜೆ 5 ರಿಂದ 6ರವರೆಗೆ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಲಿದೆ. ಬೆಳಿಗ್ಗೆ 9 ರಿಂದ ಮಧ್ಯಾಹ್ನ 12.30, ಸಂಜೆ 6 ರಿಂದ 9 ರವರೆಗೆ ದೇಶದ ವಿವಿಧ ಭಾಗದ ಮಠಾಧೀಶರು ಆಧ್ಯಾತ್ಮಿಕ ಪ್ರವಚನ ನೀಡುವರು ಎಂದು ಸಿದ್ಧಾರೂಢ ಮಠದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಶಿವಕುಮಾರ ಸ್ವಾಮೀಜಿ ಮಾಹಿತಿ ಹಂಚಿಕೊಂಡರು.

ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಇಂಚಲ್‍ನ ಶಿವಾನಂದ ಭಾರತಿ ಸ್ವಾಮೀಜಿ, ಕಾಶಿ ಚಂದ್ರಶೇಖರ ಶಿವಾಚಾರ್ಯ ಭಗತ್ಪಾದರು, ಕನೇರಿಯ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ಮುಂಬೈನ ಮಹಾಮಂಡಲೇಶ್ವರದ ವೀರೇಶ್ವರಾನಂದಗಿರಿಜಿ ಮಹಾರಾಜ್, ಬೆಂಗಳೂರಿನ ಗೋಸಾಯಿ ಮಠದ ಮಂಜುನಾಥ ಭಾರತಿ ಸ್ವಾಮೀಜಿ, ಗೌರಿಗದ್ದೆಯ ವಿನಯ್ ಗುರೂಜಿ, ಆದಿಚುಂಚನಗಿರಿಯ ನಿರ್ಮಲಾನಂದ ಸ್ವಾಮೀಜಿ, ವಿಜಯಪುರದ ನಿರ್ಭಯಾನಂದ ಸ್ವಾಮೀಜಿ ಸೇರಿದಂತೆ ನಾಡಿನ 162 ಮಠಾಧೀಶರು ಭಾಗವಹಿಸುವರು. ಹಿಂದಿ, ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಮಾತನಾಡುವರು. ಬೀದರ್‌ ಜಿಲ್ಲೆಯಲ್ಲಿ ಹಲವು ಭಾಷೆ ಮಾತನಾಡುವ ಜನರಿದ್ದು, ಅವರಿಗೆ ಪ್ರಯೋಜನವಾಗಲಿದೆ ಎಂದು ತಿಳಿಸಿದರು.

ADVERTISEMENT

ಮಠದ ಆವರಣದಲ್ಲಿ ಈಗಾಗಲೇ ಸಿದ್ಧತೆಗಳು ಭರದಿಂದ ನಡೆದಿದೆ. ವೇದಿಕೆ, ಪೆಂಡಾಲ್, ಭಕ್ತರಿಗೆ ದಾಸೋಹ, ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ವಿವಿಧ ಭಾಗಗಳಿಂದ ಸ್ವಯಂ ಸೇವಕರು ಬಂದು ಜವಾಬ್ದಾರಿ ನಿಭಾಯಿಸುವರು ಎಂದು ಹೇಳಿದರು.

ಚಿದಂಬರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಜಿ.ಶೆಟಕಾರ, ಜಿ.ಕೆ.ಫೌಂಡೇಶನ್ ಅಧ್ಯಕ್ಷ ಗುರುನಾಥ ಕೊಳ್ಳೂರ, ಭಾರತೀಯ ಬಸವ ಬಳಗದ ಅಧ್ಯಕ್ಷ ಬಾಬುವಾಲಿ, ಪ್ರಮುಖರಾದ ಉದಯಭಾನು ಹಲವಾಯಿ, ಸಹಜಾನಂದ ಕಂದಗೂಳೆ, ವಿರೂಪಾಕ್ಷ ಗಾದಗಿ, ಗುರುನಾಥ ರಾಜಗೀರಾ, ಚಿದಂಬರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಹಾವಗಿರಾವ್ ಮೈಲಾರೆ ಹಾಜರಿದ್ದರು.

ಶಿವಕುಮಾರ ಸ್ವಾಮೀಜಿ
14ರಂದು ಮೆರವಣಿಗೆ
14ರಂದು ಬೆಳಿಗ್ಗೆ 8ಕ್ಕೆ ಬಿ.ವಿ. ಭೂಮರಡ್ಡಿ ಕಾಲೇಜಿನಿಂದ ಗುಂಪಾ ವರೆಗೆ ಪೂರ್ಣಕುಂಭ ಹೊತ್ತ ಮಹಿಳೆಯರಿಗೆ ಮೆರವಣಿಗೆ ನಡೆಯಲಿದೆ. ಕರ್ನಾಟಕ ಮಹಾರಾಷ್ಟ್ರ ತೆಲಂಗಾಣ ಆಂಧ್ರಪ್ರದೇಶ ಗೋವಾ ಸೇರಿದಂತೆ ದೇಶದ ವಿವಿಧ ಭಾಗಗಳ 25 ಸಾವಿರದಿಂದ 30 ಸಾವಿರು ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು. ನಗರದ ಸಿದ್ಧಾರೂಢ ಧರ್ಮಾರ್ಥ ಆಸ್ಪತ್ರೆಯಲ್ಲಿ ಫೆ. 18 ರ ವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ನೇತ್ರ ತಪಾಸಣೆ ಮಧುಮೇಹ ಕೀಲು ನೋವು ಸೇರಿದಂತೆ ಇತರೆ ರೋಗಗಳಿಗೆ ತಪಾಸಣೆ ಮಾಡಿಕೊಂಡು ಚಿಕಿತ್ಸೆ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.