ADVERTISEMENT

ಬೀದರ್: ಹಾವು ಕಚ್ಚಿ ತಂದೆ ಎದುರೇ ಬಾಲಕ ಸಾವು!

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2022, 14:12 IST
Last Updated 16 ಡಿಸೆಂಬರ್ 2022, 14:12 IST
ರಾಮದಾಸ ಮಾಧವ್
ರಾಮದಾಸ ಮಾಧವ್   

ಔರಾದ್ (ಬೀದರ್): ತನ್ನ ಎಂಟು ವರ್ಷದ ಮಗನ ದೇಹಕ್ಕೆ ಸುತ್ತಿಕೊಂಡಿದ್ದ ಕೊಳಕ ಮಂಡಲ ಹಾವನ್ನು ತೆಗೆಯಲು ತಂದೆ ಜೀವದ ಹಂಗು ತೊರೆದು ಸೆಣಸಾಡಿದರೂ ಮಗ ಬದುಕುಳಿಯದೇ ಇರುವ ಘಟನೆ ತಾಲ್ಲೂಕಿನ ಭಂಡಾರಕುಮಟಾ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.

ಈ ಘಟನೆಯಲ್ಲಿ ರಾಮದಾಸ ಮಾಧವ್ ವಾಗ್ದರಿ (8) ಹಾವು ಕಡಿದು ಮೃತಪಟ್ಟ ಬಾಲಕ. ರಾತ್ರಿ ತಂದೆ–ತಾಯಿ ಜತೆ ಮಲಗಿದ ಮಗುವನ್ನು ಸುಮಾರು 5 ಅಡಿ ಉದ್ದದ ಹಾವು ಸುತ್ತಿಕೊಂಡಿದೆ. ಮಗು ಅಳುವುದನ್ನು ಗಮನಿಸಿದ ತಂದೆ–ತಾಯಿ ಸುಮಾರು ಅರ್ಧ ಗಂಟೆ ತನಕ ಹಾವಿನ ಜೊತೆ ಸೆಣಸಾಡಿ ಹಾವನ್ನು ಕೊಂದು ಮಗುವಿನ ರಕ್ಷಣೆ ಮಾಡಿದ್ದಾರೆ. ಬಳಿಕ ಮಗುವಿನ ದೇಹದ ಎರಡು ಕಡೆ ಹಾವು ಕಡಿದಿರುವುದನ್ನು ಗಮನಿಸಿ ಸತ್ತ ಹಾವಿನೊಂದಿಗೆ ಪಕ್ಕದ ಉದಗೀರ್ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿದರೂ ಮಗು ಉಳಿಯಲಿಲ್ಲ.

ರೈತ ಮಾಧವ್ ವಾಗ್ದರಿ ದಂಪತಿ ಇರುವ ಒಬ್ಬ ಮಗನನ್ನು ಕಳೆದುಕೊಂಡು ದುಃಖದಲ್ಲಿ ಮುಳುಗಿದ್ದಾರೆ. ಇಡೀ ಗ್ರಾಮ ಮಗನ ರಕ್ಷಣೆಗೆ ತಂದೆ ಹಾವಿನೊಂದಿಗೆ ನಡೆಸಿದ ಸೆಣೆಸಾಟ ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಅದೇ ಊರಿನ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ರಾಮದಾಸನ ಸಹಪಾಠಿ ವಿದ್ಯಾರ್ಥಿಗಳು, ಶಿಕ್ಷಕರು ದುಃಖದಲ್ಲಿ ಮುಳುಗಿದ್ದಾರೆ. ಗುರುವಾರ ಸಂಜೆ ನಡೆದ ಬಾಲಕನ ಅಂತ್ಯಕ್ರಿಯೆಯಲ್ಲೂ ಇಡೀ ಊರಿಗೆ ಊರೇ ನೆರೆದು ಕಂಬನಿ ಮಿಡಿಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.