ADVERTISEMENT

ಸೋಯಾ ಮಾರಾಟದ ಅವಧಿ ವಿಸ್ತರಣೆಗೆ ಸರ್ಕಾರಕ್ಕೆ ಪತ್ರ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 15:40 IST
Last Updated 22 ಅಕ್ಟೋಬರ್ 2024, 15:40 IST
ಶಿಲ್ಪಾ ಶರ್ಮಾ
ಶಿಲ್ಪಾ ಶರ್ಮಾ   

ಬೀದರ್‌: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಸೋಯಾಬೀನ್‌ ಖರೀದಿಸಲು ಇರುವ ಅವಧಿ ಈಗಾಗಲೇ ಕೊನೆಗೊಂಡಿದ್ದು, ಅದನ್ನು ವಿಸ್ತರಿಸುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಸೋಯಾಬೀನ್‌ ಖರೀದಿಗೆ ರಾಜ್ಯ ಸರ್ಕಾರವು ಸೆಪ್ಟೆಂಬರ್‌ 5ರಂದು ಆದೇಶ ಹೊರಡಿಸಿತ್ತು. ಅಕ್ಟೋಬರ್‌ 20ರವರೆಗೆ ಮಾರಾಟಕ್ಕೆ ರೈತರು ಹೆಸರು ನೋಂದಣಿಗೆ ಅವಕಾಶ ಕಲ್ಪಿಸಲಾಗಿತ್ತು. ಮುಂಗಾರು ಹಂಗಾಮಿನ ಸೋಯಾಬೀನ್ ಬೆಳೆಯ ಕಟಾವು ಮತ್ತು ರಾಶಿ ಜಿಲ್ಲೆಯಾದ್ಯಂತ ಈಗ ಭರದಿಂದ ಸಾಗುತ್ತಿದೆ. ಜಿಲ್ಲೆಯ ಒಟ್ಟು ರೈತರಲ್ಲಿ ಕೆಲವೇ ರೈತರು ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ. ಇನ್ನೂ ಅನೇಕ ರೈತರು ಬೆಂಬಲ ಬೆಲೆ ಯೋಜನೆಯ ಅಡಿಯಲ್ಲಿ ಸೋಯಾಬೀನ್‌ ಮಾರಾಟ ಮಾಡಲು ಆಸಕ್ತಿ ಹೊಂದಿದ್ದಾರೆ ಎಂದು ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೋಯಾಬೀನ್ ಖರೀದಿಗೆ ಜಿಲ್ಲೆಯಾದ್ಯಂತ ಒಟ್ಟು 80 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಟ್ಟು 2,25,020 ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬೀನ್‌ ಬಿತ್ತನೆ ಮಾಡಲಾಗಿದೆ. ಸದರಿ ಬೆಳೆಯಿಂದ ಒಟ್ಟು 28,12,750 ಕ್ವಿಂಟಲ್‌‌ ಅಂದಾಜು ಉತ್ಪಾದನೆ ನಿರೀಕ್ಷಿಸಲಾಗಿದೆ. ಆದರೆ, ಬೀದರ್‌ ಜಿಲ್ಲೆಯಾದ್ಯಂತ ಇದುವರೆಗೆ ಕೇವಲ 1,851 ರೈತರು, ಒಟ್ಟು 21,765 ಕ್ವಿಂಟಲ್‌ಗೆ ಸೋಯಾಬೀನ್ ಮಾರಾಟ ಮಾಡಲು ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ವಿವರಿಸಿದ್ದಾರೆ.

ADVERTISEMENT

ಕೃಷಿ ಭಾಗ್ಯ ಯೋಜನೆಗೆ ಅರ್ಜಿ ಆಹ್ವಾನ

ಬೀದರ್‌: ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ಆರು ಘಟಕಗಳಿಗೆ ನೀಡಲಾಗುವ ಸೌಲಭ್ಯಗಳಿಗೆ ಹಾಗೂ ಸಹಾಯ ಧನಕ್ಕಾಗಿ ಅರ್ಹ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕ್ಷೇತ್ರ ಬದು ನಿರ್ಮಾಣ ನೀರು ಸಂಗ್ರಹಣಾ ರಚನೆ (ಕೃಷಿ ಹೊಂಡ) ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ ಕೃಷಿ ಹೊಂಡದ ಸುತ್ತ ತಂತಿ ಬೇಲಿ ಹೊಂಡದಿಂದ ನೀರು ಎತ್ತಲು ಡೀಸೆಲ್/ಪೆಟ್ರೋಲ್/ಸೋಲಾರ್‌ ಪಂಪ್‌ಸೆಟ್ ಹಾಗೂ ನೀರು ಬೆಳೆಗೆ ಹಾಯಿಸಲು ಸೂಕ್ಷ್ಮ ನೀರಾವರಿ ಸೌಲಭ್ಯಕ್ಕೆ ಧನ ಸಹಾಯ ಮಾಡಲಾಗುವುದು. ಆಸಕ್ತ ರೈತರು ಅ. 30ರೊಳಗೆ ಆಯಾ ರೈತ ಸಂಪರ್ಕ ಕೇಂದ್ರಗಳಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ಇಲಾಖೆಯ ಕೃಷಿ ಇಲಾಖೆಯ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.