ಭಾಲ್ಕಿಯ ಮಹಾತ್ಮ ಗಾಂಧಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಭಾಲ್ಕಿ: ಐಪಿಎಲ್ನಲ್ಲಿ ಚಾಂಪಿಯನ್ ಆದ ಆರ್ಸಿಬಿ ವಿಜಯೋತ್ಸವ ಆಚರಣೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಘಟನೆ ಖಂಡಿಸಿ ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
‘ಸರ್ಕಾರ ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಿ 11 ಜನರ ಬಲಿ ಪಡೆದಿದೆ. ತಮ್ಮ ಈ ವೈಫಲ್ಯ ಮುಚ್ಚಿಕೊಳ್ಳಲು ಸರ್ಕಾರ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದು ಸರಿಯಲ್ಲ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
‘ಈ ಘಟನೆಗೆ ಕಾರಣರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹಸಚಿವ ಪರಮೇಶ್ವರ್ ರಾಜೀನಾಮೆ ನೀಡಬೇಕು. ಕಾಲ್ತುಳಿತದ ದುರಂತದಲ್ಲಿ ಮೃತಪಟ್ಟವರ ಪರಿವಾರದವರಿಗೆ ₹2 ಕೋಟಿ ಪರಿಹಾರ ನೀಡಬೇಕು. ಜೊತೆಗೆ ಅವರ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು. ಪೊಲೀಸ್ ಅಧಿಕಾರಿಗಳ ಅಮಾನತು ಆದೇಶ ಹಿಂಪಡೆದು ಗೌರವಯುತವಾಗಿ ಅವರಿಗೆ ಅವರ ಮೂಲಹುದ್ದೆ ನೀಡಬೇಕು’ ಎಂದು ಆಗ್ರಹಿಸಿದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ವೀರಣ್ಣ ಕಾರಬಾರಿ, ಪ್ರಮುಖರಾದ ಗೋವಿಂದರಾವ್ ಬಿರಾದಾರ, ಉತ್ತಮ ಪೂರಿ, ಸುರೇಶ, ಹುಬ್ಳಿಕರ್, ಸಂಗಮೇಶ ಕಾರಾಮುಂಗೆ, ಕಿರಣ ಖಂಡ್ರೆ, ಪಂಡರಿ ಮೇತ್ರೆ, ಶಾಹುರಾಜ್ ಪವಾರ್, ಸಂತೋಷ ಪಾಟೀಲ, ಪಾಂಡುರಂಗ ಕನ್ಸೆ, ದೀಪಕ ಸಿಂಧಿ, ಮನ್ಮಥ ಸ್ವಾಮಿ, ಲಕ್ಷ್ಮಣ ಮುದಾಳೆ, ದಿಲೀಪ್ ತೆಲಂಗ, ಗಣಪತಿ ಮಾಟೆ, ಸಂಜೀವ ಸಿಂಧೆ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.