ಬಸವಕಲ್ಯಾಣ: ‘ನನ್ನ ಚುನಾವಣಾ ಪ್ರಚಾರಕ್ಕಾಗಿ ಬ್ಯಾನರ್ ಅಳವಡಿಸಿದ್ದ ವಾಹನದ ಮೇಲೆ ಹುಲಸೂರ ಬಳಿ ಬಿಜೆಪಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದು ಗಾಜು ಒಡೆದಿದ್ದಾರೆ’ ಎಂದು ಉಪ ಚುನಾವಣೆಯ ಪಕ್ಷೇತರ ಅಭ್ಯರ್ಥಿಯಾದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಆರೋಪಿಸಿದರು.
ನಗರದ ಅವರ ನಿವಾಸದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಬಗ್ಗೆ ಠಾಣೆಗೆ ದೂರು ನೀಡಿದ್ದೇನೆ’ ತಿಳಿಸಿದರು.
‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಏಪ್ರಿಲ್ 12ಕ್ಕೆ ಪ್ರಚಾರ ಸಭೆಗೆ ಇಲ್ಲಿಗೆ ಬರುತ್ತಿದ್ದು, ಅವರ ಸಭೆಗೆ ನುಗ್ಗಿ ನ್ಯಾಯ ಕೇಳಲಿದ್ದೇನೆ. ಸ್ಥಳೀಯರನ್ನು ಕಡೆಗಣಿಸಿ ಹೊರಗಿನವರಿಗೆ ಟಿಕೆಟ್ ಕೊಡಲು ಕಾರಣವೇನು ಎಂದೂ ಪ್ರಶ್ನಿಸುತ್ತೇನೆ’ ಎಂದು ಹೇಳಿದರು.
‘ಅನ್ಯ ಪಕ್ಷಗಳ ಕಾರ್ಯಕರ್ತರ ಮೇಲೆ ಬಿಜೆಪಿಯಿಂದ ದಬ್ಬಾಳಿಕೆ ನಡೆಸಲಾಗುತ್ತಿದೆ. ಬೆದರಿಕೆ ಕರೆ ಮಾಡಲಾಗುತ್ತಿದೆ. ನಗರದ 6 ಸ್ಥಳಗಳಲ್ಲಿ ರಾಜಾರೋಷವಾಗಿ ಮತದಾರರಿಗೆ ಹಣ ಹಂಚಲಾಗುತ್ತಿದೆ. ಇದಲ್ಲದೆ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಹಾಗೂ ತಹಶೀಲ್ದಾರ್ ಆಗಿರುವ ಅವರ ಪತ್ನಿ ಸಾವಿತ್ರಿ ಸಲಗರ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಮೂರು ಸ್ಥಳಗಳಲ್ಲಿ ಇವೆ’ ಎಂದು ಆರೋಪಿಸಿದರು.
‘ಕಲಬುರ್ಗಿಯ ಮತದಾರರ ಪಟ್ಟಿಯಲ್ಲಿ ಹಾಗೂ ಬಸವಕಲ್ಯಾಣದ ಜೈಶಂಕರ ಕಾಲೊನಿಯ ಸುಗೂರೆ ನಿವಾಸದ ಕುಟುಂಬವೊಂದರ ಮತದಾರರ ಪಟ್ಟಿಯಲ್ಲಿ ಈ ಹೆಸರುಗಳು ಇವೆ. ಆ ಕುಟುಂಬದವರು ಇವರು ಅಲ್ಲದಿದ್ದರೂ ಅವರ ಸದಸ್ಯರ ಮಧ್ಯದಲ್ಲಿ ಹೆಸರು ಸೇರಿಸಲಾಗಿದೆ’ ಎಂದರು.
‘ಒಂದಕ್ಕಿಂತ ಹೆಚ್ಚಿನ ಕಡೆ ಪತದಾರರ ಪಟ್ಟಿಯಲ್ಲಿ ಹೆಸರು ಇದ್ದರೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಕಾನೂನು ಹೇಳುತ್ತದೆ. ಆದರೆ ಇವರ ಹೆಸರು ಮೂರು ಸ್ಥಳಗಳಲ್ಲಿ ಇರುವುದರಿಂದ ಈ ಬಗ್ಗೆ ಸಂಬಂಧಿತರಿಗೆ ದೂರು ಸಲ್ಲಿಸಲಾಗುವುದು. ಇದಲ್ಲದೆ ಅಭ್ಯರ್ಥಿಯ ಸಹೋದರ ಹಾಗೂ ಆಪ್ತ ಸಹಾಯಕನೊಬ್ಬನ ಅಶ್ಲೀಲ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆಯೂ ಕ್ರಮಕ್ಕೆ ಆಗ್ರಹಿಸಲಾಗುವುದು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.