ADVERTISEMENT

ಭಾಲ್ಕಿ: ಬಸ್ ಸೌಲಭ್ಯಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 4:36 IST
Last Updated 30 ನವೆಂಬರ್ 2021, 4:36 IST
ಭಾಲ್ಕಿಯ ಬಸ್ ನಿಲ್ದಾಣದಲ್ಲಿ ತಾಲ್ಲೂಕಿನ ವಿವಿಧೆಡೆ ಸಕಾಲಕ್ಕೆ ಬಸ್ ಓಡಿಸಲು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಭಾಲ್ಕಿಯ ಬಸ್ ನಿಲ್ದಾಣದಲ್ಲಿ ತಾಲ್ಲೂಕಿನ ವಿವಿಧೆಡೆ ಸಕಾಲಕ್ಕೆ ಬಸ್ ಓಡಿಸಲು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಭಾಲ್ಕಿ: ಇಲ್ಲಿಯ ಬಸ್ ನಿಲ್ದಾಣದಲ್ಲಿ ತಾಲ್ಲೂಕಿನ ವಿವಿಧೆಡೆ ಸಕಾಲಕ್ಕೆ ಬಸ್ ಓಡಿಸಲು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ರೇವಣಸಿದ್ದ ಜಾಡರ್ ನೇತೃತ್ವದಲ್ಲಿ ಸೋಮವಾರ ಸಂಜೆ ದಿಢೀರ್ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಅಂಬೇಸಾಂಗವಿ, ಡಾವರಗಾಂವ, ಬರದಾಪೂರ, ಮಾಸಿಮಾಡ, ಬೀರಿ(ಬಿ), ಗೋರ ಚಿಂಚೋಳಿ, ನಿಡೇಬಾನ್, ಸಾಯಂಗಾವ ಮೇಹಕರ್, ಮದಕಟ್ಟಿ, ನಾವದಗಿ, ಎಕಲಾಸಪೂರ ವಾಡಿ, ಕಾಕನಾಳ, ಶಿವಣಿ, ಭಾತಂಬ್ರಾ, ಕಣಜಿ, ಸಿದ್ದೇಶ್ವರ ಸೇರಿದಂತೆ ಬಹುತೇಕ ಹಳ್ಳಿಗಳಿಗೆ ಸಕಾಲಕ್ಕೆ ಬಸ್ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಸಮಯಕ್ಕೆ ಸರಿಯಾಗಿ ಬಸ್ ಸಂಚಾರ ಆಗದಿರುವುದರಿಂದ ವಿದ್ಯಾರ್ಥಿಗಳು ತರಗತಿ ಹಾಗೂ ಮನೆಗೆ ತಲುಪಲು ತಡವಾಗುತ್ತಿದೆ ಎಂದು ಪ್ರತಿಭಟನಾನಿರತರು ದೂರಿದರು.

ಸಂಜೆ ತಾಲ್ಲೂಕಿನ 95 ಮಾರ್ಗಗಳ ಪೈಕಿ ಕೇವಲ 65 ಮಾರ್ಗಗಳಿಗೆ ಮಾತ್ರ ಬಸ್‌ಗಳು ಓಡುತ್ತಿವೆ. ಇದರಿಂದ ಬಹುತೇಕ ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ವಂಚಿತರಾಗಿದ್ದಾರೆ ಎಂದು ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರೇವಣಸಿದ್ದ ಜಾಡರ್ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಶೀಘ್ರದಲ್ಲಿ ಎಲ್ಲ ಮಾರ್ಗಗಳಿಗೆ ಬಸ್ ಓಡಿಸಿ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲವಾದಲ್ಲಿ ಮುಂಬ ರುವ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದಿದ್ದಾರೆ.

ಪ್ರಮುಖರಾದ ಈಶ್ವರ ರುಮ್ಮಾ, ವಿಶಾಲ ಬೀರಾದರ, ಪ್ರಣವ ಚಿಲಶೆಟ್ಟಿ, ಶರಣು, ಪವನ, ನಾಗರಾಜ, ಸುನಿಲ್, ಗೀತಾ, ಪವಿತ್ರಾ, ರೂಪಾ, ಭಾರತಿ ಇದ್ದರು.

ಭಾಟಸಾಂಗವಿಗೆ ಬಸ್ ಓಡಿಸಲು ಸೂಚನೆ

ಭಾಲ್ಕಿ: ವಿದ್ಯಾರ್ಥಿಗಳ ಜತೆ ಶಾಸಕ ಈಶ್ವರ ಖಂಡ್ರೆ ಅವರು ಬಸ್ ಡಿಪೋಗೆ ಭೇಟಿ ನೀಡಿ,ಗಡಿ ಭಾಗದ ಭಾಟಸಾಂಗವಿ ಗ್ರಾಮಕ್ಕೆ ಬಸ್ ಸೇವೆ ಒದಗಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಸ್ ಕಲ್ಪಿಸುವಂತೆ ವಿದ್ಯಾರ್ಥಿಗಳು ಹಲವು ಬಾರಿಸಾರಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನ ಆಗಿಲ್ಲ. ಸೋಮವಾರ ಹಲವು ವಿದ್ಯಾರ್ಥಿಗಳು ಬಸ್ ಡಿಪೋ ಅಧಿಕಾರಿಗಳ ಭೇಟಿಗೆ ಬಂದಿದ್ದರು. ಅದೇ ಮಾರ್ಗದಿಂದ ಕಾಕನಾಳಗೆ ತೆರಳುತ್ತಿದ್ದ ಶಾಸಕರು, ವಿದ್ಯಾರ್ಥಿಗಳನ್ನು ವಿಚಾರಿಸಿ ಅವರೊಂದಿಗೆ ಬಸ್ ಡಿಪೋಗೆ ತೆರಳಿದರು.

ಘಟಕದ ಅಧಿಕಾರಿ ಸೇರಿ ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿ ಜತೆಗೆ ದೂರವಾಣಿಯಲ್ಲಿ ಮಾತನಾಡಿ, ‘ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಪದೇಪದೇ ಬಸ್ ಸಮಸ್ಯೆ ಆಗುತ್ತಿದೆ. ಸಕಾಲಕ್ಕೆ ಬಸ್ ಸಂಚರಿಸುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದೆ. ತಕ್ಷಣವೇ ಬಸ್ ಸೇವೆ ಆರಂಭಿಸಬೇಕು ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.