ADVERTISEMENT

ಬಿತ್ತನೆ ಬೀಜ ಖರೀದಿಗೆ ನೂಕುನುಗ್ಗಲು

ರೈತರ ಮೊಗವರಳಿಸಿದ ಮಳೆ: ನೆರಳು, ನೀರಿನ ವ್ಯವಸ್ಥೆ ಮಾಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 11:20 IST
Last Updated 2 ಜೂನ್ 2020, 11:20 IST
ಚಿಟಗುಪ್ಪ ತಾಲ್ಲೂಕಿನ ಬೇಮಳಖೇಡಾ ಗ್ರಾಮದ ರೈತ ಸಂಪರ್ಕ ಕೇಂದ್ರದ ಮುಂದೆ ರೈತರು ಜಮಾಯಿಸಿರುವುದು
ಚಿಟಗುಪ್ಪ ತಾಲ್ಲೂಕಿನ ಬೇಮಳಖೇಡಾ ಗ್ರಾಮದ ರೈತ ಸಂಪರ್ಕ ಕೇಂದ್ರದ ಮುಂದೆ ರೈತರು ಜಮಾಯಿಸಿರುವುದು   

ಚಿಟಗುಪ್ಪ: ಸೋಮವಾರ ಮಧ್ಯರಾತ್ರಿ ಉತ್ತಮ ಮಳೆ ಸುರಿದಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ತಾಲ್ಲೂಕಿನ ಬೇಮಳಖೇಡಾದ ರೈತ ಸಂಪರ್ಕ ಕೇಂದ್ರದ ಮುಂದೆ ರೈತರು ಬಿತ್ತನೆ ಬೀಜ ಖರೀದಿಸಲು ಮಂಗಳವಾರ ಸಾಲುಗಟ್ಟಿ ನಿಂತಿದ್ದರು.

‘ಸರತಿ ಬರಲು ತುಂಬಾ ಸಮಯ ತೆಗೆದುಕೊಳ್ಳುತ್ತಿದೆ. ಸುಡು ಬಿಸಿಲಿನಲ್ಲಿಯೇ ಕಾಯಬೇಕು. ಕುಡಿಯಲು ನೀರೂ ಇಲ್ಲ’ ಎಂದು ರೈತ ಪವನ್ ತಿಳಿಸಿದರು.

ADVERTISEMENT

‘ರೈತ ಸಂಪರ್ಕ ಕೇಂದ್ರಕ್ಕೆ ಸುತ್ತಲಿನ ಉಡಬನಳ್ಳಿ, ಚಾಂಗಲೇರಾ, ಕರಕನಳ್ಳಿ, ಕಾರಪಾಕಪಳ್ಳಿ, ದೇವಗಿರಿ ತಾಂಡಾ, ವಿಠಲಪುರ ಸೇರಿದಂತೆ ಇತರ ಗ್ರಾಮಗಳಿಂದ ರೈತರು ಬರುತ್ತಾರೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಸರತಿಯಲ್ಲಿ ಕಾಯುತ್ತಾರೆ. ಹೀಗಾಗಿ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಗಳಲ್ಲಿ ನೆರಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ರೈತರು ಅಂತರ ಕಾಯ್ದುಕೊಳ್ಳುವಂತೆ ಎಚ್ಚರ ವಹಿಸಬೇಕು. ಒಂದು ದಿನ ಮುಂಚಿತ ರೈತರಿಗೆ ಚೀಟಿಯನ್ನು ವಿತರಿಸಬೇಕು’ ಎಂದು ರೈತ ರಾಮಣ್ಣ ಒತ್ತಾಯಿಸಿದರು.

ಇಲಾಖೆಯ ಉದಾಸೀನತೆಯಿಂದ ಅವ್ಯವಸ್ಥೆ ಉಂಟಾಗಿದೆ. ರೈತರು ಪೊಲೀಸರ ಲಾಠಿ ರುಚಿ ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗುವ ಮುನ್ನ ಎಲ್ಲರೂ ಎಚ್ಚೆತ್ತು ಸುಧಾರಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಯುವ ರೈತ ಶಂಕರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.