
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅಧ್ಯಕ್ಷತೆಯಲ್ಲಿ ಬೀದರ್ನಲ್ಲಿ ಮಂಗಳವಾರ ಕಬ್ಬು ಬೆಳೆಗಾರರ ಸಭೆ ನಡೆಯಿತು
ಬೀದರ್: ಕಬ್ಬಿಗೆ ಬೆಲೆ ನಿಗದಿಪಡಿಸುವ ಸಂಬಂಧ ಜಿಲ್ಲಾಡಳಿತವು ನಗರದಲ್ಲಿ ಮಂಗಳವಾರ ಕಬ್ಬು ಬೆಳೆಗಾರರೊಂದಿಗೆ ನಡೆಸಿದ ಸಭೆ ಯಾವುದೇ ನಿರ್ಧಾರಕ್ಕೆ ಬರದೇ ವಿಫಲಗೊಂಡಿತು.
ಜಿಲ್ಲಾಡಳಿತ ತನ್ನ ನಿಲುವಿಗೆ ಅಂಟಿಕೊಂಡರೆ, ಕಬ್ಬು ಬೆಳೆಗಾರರು ತಮ್ಮ ಬೇಡಿಕೆ ಈಡೇರಿಸಬೇಕೆಂದು ಸಭೆಯಲ್ಲಿ ಪಟ್ಟು ಹಿಡಿದರು. ಇದರ ಪರಿಣಾಮ ಸಭೆ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು. ಪ್ರತಿ ಟನ್ ಕಬ್ಬಿಗೆ ₹2,750 ನೀಡಲಾಗುವುದು. ಇದರೊಂದಿಗೆ ಈಗಾಗಲೇ ಮುಖ್ಯಮಂತ್ರಿ ಅವರು ಘೋಷಿಸಿದ ₹50 ಹೆಚ್ಚುವರಿಯೊಂದಿಗೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಂದ ₹50 ಹೆಚ್ಚುವರಿ ಕೊಡಿಸಲಾಗುವುದು ಎಂದು ಶಿಲ್ಪಾ ಶರ್ಮಾ ಹೇಳಿದರು. ಆದರೆ, ಕಬ್ಬು ಬೆಳೆಗಾರರು ಇದನ್ನು ಒಪ್ಪಲಿಲ್ಲ. ಹೀಗಾಗಿ ಸಭೆ ಯಾವುದೇ ತೀರ್ಮಾನಕ್ಕೆ ಬರಲಿಲ್ಲ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ನ. 12ರಂದು ಹೆದ್ದಾರಿ ತಡೆ ಚಳವಳಿ
‘ಪ್ರತಿ ಟನ್ ಕಬ್ಬಿಗೆ ₹2,850 ಕೊಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ. ನಮ್ಮ ಬೇಡಿಕೆ ಕನಿಷ್ಠ ₹3,000 ಕೊಡಬೇಕೆನ್ನುವುದು ಇದೆ. ಆದರೆ, ಜಿಲ್ಲಾಡಳಿತ ನಮ್ಮ ಬೇಡಿಕೆ ಒಪ್ಪಿಕೊಂಡಿಲ್ಲ. ಬೇರೆ ಕಡೆಗಳಲ್ಲಿ ಕಬ್ಬಿನ ರಿಕವರಿ ಪ್ರಮಾಣ ಹೆಚ್ಚಿರುವುದರಿಂದ ಅಲ್ಲಿ ಹೆಚ್ಚು ದರ ನಿಗದಿಪಡಿಸಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಕಬ್ಬಿನ ರಿಕವರಿ ಪ್ರಮಾಣ ಕಡಿಮೆ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ನಾವು ಅವರ ವಾದ ಒಪ್ಪಿಲ್ಲ. ನಮ್ಮ ಬೇಡಿಕೆ ಈಡೇರದ ಕಾರಣ ಬುಧವಾರ (ನ.12) ಹುಮನಾಬಾದ್ ಪಟ್ಟಣದಿಂದ ಹಾದು ಹೋಗಿರುವ ಹೈದರಾಬಾದ್–ಮುಂಬೈ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.