ಹುಲಸೂರ: ‘ಮಠದ ಸ್ವಾಮೀಜಿಗಳು ಭಕ್ತರ ಸಂಕಷ್ಟ ಪರಿಹರಿಸುವ ಕೆಲಸ ಮಾಡಬೇಕು’ ಎಂದು ಬೈಲೂರು ಮಠದ ನಿಜಗುಣಾನಂದ ಸ್ವಾಮೀಜಿ ಹೇಳಿದರು.
ಪಟ್ಟಣ ಹೊರವಲಯದ ಜಗದ್ಗುರು ಅಲ್ಲಮಪ್ರಭು ದೇವರ ಶೂನ್ಯಪೀಠ ಅನುಭವ ಮಂಟಪದಲ್ಲಿ ಶರಣ ಸಂಸ್ಕೃತಿ ಉತ್ಸವ ಹಾಗೂ ವಚನ ರಥೋತ್ಸವದ ಅಂಗವಾಗಿ ನಡೆಯುತ್ತಿರುವ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾಮೀಜಿಗಳು ಧರ್ಮ ಹಾಗೂ ದೇವರನ್ನು ಬಿಟ್ಟು ಮನುಷ್ಯರ ಜೀವನದ ಕುರಿತು ಚಿಂತನೆ ಮಾಡುವ ಕೆಲಸ ಮಾಡಬೇಕು. ಮನುಷ್ಯನ ಕುರಿತು 12ನೇ ಶತಮಾನದಲ್ಲಿ ಬಸವಣ್ಣನವರು ಸೇರಿ ಎಲ್ಲ ಶರಣರು ವಚನಗಳಲ್ಲಿ ಚಿಂತನೆ ಮಾಡಿದ್ದಾರೆ. ಮನುಷ್ಯನ ಎಲ್ಲ ಸಮಸ್ಯೆಗಳಿಗೆ ವಚನಗಳಲ್ಲಿ ಪರಿಹಾರ ಇದೆ ಎಂದರು.
ಧಾರವಾಡದ ಶಿವಯೋಗ ಆಶ್ರಮದ ಬಸವಾನಂದ ಸ್ವಾಮೀಜಿ ಮಾತನಾಡಿ,‘ಬಸವಾದಿ ಶರಣರ ವಚನಗಳೆಂದರೆ ಅಮೃತವಿದ್ದಂತೆ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇವುಗಳಿಂದ ಮಾನಸಿಕ ವೈಕಲ್ಯ ಹೋಗುವುದು’ ಎಂದು ತಿಳಿಸಿದರು.
ಗುರು ಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ಸಾಯಗಾಂವ ವಿರಕ್ತ ಮಠದ ಶಿವಾನಂದ ದೇವರು, ಉಸ್ತೂರಿ ವಿರಕ್ತ ಮಠದ ಕೋರಣೇಶ್ವರ ಸ್ವಾಮಿ ಮಾತನಾಡಿದರು.
ಗದಗದ ವೀರೇಶ್ವರ ಪುಣ್ಯಾಶ್ರಮದ ಜಗದೀಶ ಸೂಲ್ತಾನಪುರೆ ಸಂಗೀತ ಸೇವೆ ನೀಡಿದರು. ಶೇಖರ್ ಇಮ್ಮಡಿ ತಬಲಾ ಸಾಥ್ ನೀಡಿದರು.
ರಾಜಕುಮಾರ ನಿಡೋದೆ ನಿರೂಪಿಸಿದರು. ಗಂಗಮ್ಮ ನಾಗಣ್ಣ ಖಫಲೆ ಪ್ರಸಾದ ಸೇವೆ ಮಾಡಿದರು.
ಶಿವಾನಂದ ಶಿವಯೋಗಿಗಳ ಟ್ರಸ್ಟ್ ಅಧ್ಯಕ್ಷ ಬಸವರಾಜ ಮುಕ್ತಾ, ಗುರು ಬಸವೇಶ್ವರ ಅಕ್ಕನ ಬಳಗದ ಅಧ್ಯಕ್ಷೆ ಶಶಿಕಲಾ ಓಂಕಾರ ಪಟ್ಟೆ, ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷೆ ಶ್ರೀದೇವಿ ನಿಡೋದೆ, ಜಾನಪದ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜ ಖಫಲೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.