ADVERTISEMENT

ಆಯುಷ್ಮತಿ ಕ್ಲಿನಿಕ್‌ನ ಸದುಪಯೋಗ ಪಡೆದುಕೊಳ್ಳಿ

ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಸಲಹೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 11:32 IST
Last Updated 28 ಮಾರ್ಚ್ 2023, 11:32 IST
ಬೀದರ್‌ನ ಬಿದ್ರಿ ಕಾಲೊನಿಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೂತನ ಆಯುಷ್ಮತಿ ಕ್ಲಿನಿಕ್ ಅನ್ನು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಉದ್ಘಾಟಿಸಿದರು. ಡಾ.ರತಿಕಾಂತ ಸ್ವಾಮಿ, ಡಾ. ರಾಜಶೇಖರ ಪಾಟೀಲ, ಡಾ.ಶರಣಯ್ಯ ಸ್ವಾಮಿ ಇದ್ದಾರೆ
ಬೀದರ್‌ನ ಬಿದ್ರಿ ಕಾಲೊನಿಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೂತನ ಆಯುಷ್ಮತಿ ಕ್ಲಿನಿಕ್ ಅನ್ನು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಉದ್ಘಾಟಿಸಿದರು. ಡಾ.ರತಿಕಾಂತ ಸ್ವಾಮಿ, ಡಾ. ರಾಜಶೇಖರ ಪಾಟೀಲ, ಡಾ.ಶರಣಯ್ಯ ಸ್ವಾಮಿ ಇದ್ದಾರೆ   

ಬೀದರ್: ಆಯುಷ್ಮತಿ ಕ್ಲಿನಿಕ್ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಕಾರ್ಯಕ್ರಮವಾಗಿದೆ. ವಿಶೇಷವಾಗಿ ಮಹಿಳೆಯರು ಇದರ ಪೂರ್ಣ ಲಾಭ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೇಳಿದರು.

ನಗರದ ಬಿದ್ರಿ ಕಾಲೊನಿಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೂತನ ಆಯುಷ್ಮತಿ ಕ್ಲಿನಿಕ್ ಉದ್ಘಾಟಿಸಿ ಅವರು ಮಾತನಾಡಿದರು.

ಆಯುಷ್ಮತಿ ಕ್ಲಿನಿಕ್‌ನಲ್ಲಿ ಪ್ರತಿ ದಿನ ಒಬ್ಬರಂತೆ ಬೇರೆ ಬೇರೆ ತಜ್ಞ ವೈದ್ಯರಿಂದ ಸೇವೆ ನೀಡಲಾಗುತ್ತಿದ್ದು, ಇದರಿಂದ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ADVERTISEMENT

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರತಿಕಾಂತ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಮಹಿಳೆಯರ ವಿಶೇಷ ಆರೋಗ್ಯ ತಪಾಸಣೆಗಾಗಿ ಆಯುಷ್ಮತಿ ಕ್ಲಿನಿಕ್ ಪ್ರಾರಂಭಿಸಲಾಗಿದೆ. ಸ್ವಸ್ಥ ಮಹಿಳೆಯರು ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ತಜ್ಞ ವೈದ್ಯರಿಂದ ಪ್ರತಿದಿನ ಮಹಿಳೆಯರ ಆರೋಗ್ಯ ತಪಾಸಣೆ ಮಾಡಲಿದ್ದಾರೆ’ ಎಂದು ಹೇಳಿದರು.

‘ಪ್ರತಿ ಸೋಮವಾರ ಫಿಸಿಷಿಯನ್, ಮಂಗಳವಾರ ಮೂಳೆ ಮತ್ತು ಕೀಲು ತಜ್ಞರು, ಬುಧವಾರ ಶಸ್ತ್ರ ಚಿಕಿತ್ಸಾ ತಜ್ಞರು, ಗುರುವಾರ ಮಕ್ಕಳ ತಜ್ಞರು, ಶುಕ್ರವಾರ ಸ್ತ್ರೀರೋಗ ತಜ್ಞರು, ಶನಿವಾರ ಇತರೆ (ಕಿವಿ, ಮೂಗು ಮತ್ತು ಗಂಟಲು, ನೇತ್ರ, ಚರ್ಮರೋಗ, ಮಾನಸಿಕ ರೋಗ) ತಜ್ಞರು ಸೇವೆ ನೀಡುತ್ತಾರೆ’ ಎಂದರು.

’ಕ್ಲಿನಿಕ್‌ನಲ್ಲಿ ಮಹಿಳೆಯರಿಗೆ ಆಪ್ತ ಸಮಾಲೋಚನೆ, ಲ್ಯಾಬ್ ಪರೀಕ್ಷೆ, ಔಷಧಿ, ಕ್ಷೇಮ ಚಟುವಟಿಕೆಗಳಾದ ಯೋಗ ಮತ್ತು ಧ್ಯಾನ ಹಾಗೂ ರೆಫರಲ್ ಸೇವೆಗಳನ್ನು ನೀಡಲಾಗುವುದು’ ಎಂದು ಹೇಳಿದರು.

‘ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ರಾಜಶೇಖರ ಪಾಟೀಲ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶಿವಶಂಕರ ಭತಮುರ್ಗೆ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಶರಣಯ್ಯ ಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಂಕರೆಪ್ಪ ಬೊಮ್ಮಾ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಕಿರಣ ಪಾಟೀಲ, ಬೀದರ್ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಸಂಗಾರೆಡ್ಡಿ, ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸತೀಷ ಪಾಟೀಲ, ಎಲ್ಲ ತಜ್ಞ ವೈದ್ಯರು, ನಗರ ಕಾರ್ಯಕ್ರಮ ವ್ಯವಸ್ಥಾಪಕ ರವಿ ಶೆಂಬೆಳ್ಳಿ, ಓಂಕಾರ ಮಲ್ಲಿಗೆ, ಅಶೋಕ, ಆರೋಗ್ಯ ಕೇಂದ್ರದ ಸಿಬ್ಬಂದಿ, ಶುಶ್ರೂಷಕಿಯರು, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಇದ್ದರು. ವೀರಶೆಟ್ಟಿ ಚನಶೆಟ್ಟಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.