ಔರಾದ್: ಶಾಲಾ ಮಕ್ಕಳ ಬಗ್ಗೆ ಅಪಾರ ಕಾಳಜಿ ಹೊಂದಿದ ಬೋರ್ಗಿ (ಜೆ) ಸರ್ಕಾರಿ ಶಾಲೆ ಶಿಕ್ಷಕ ಮುತ್ತಣ್ಣ ಬಡ ಪಾಲಕರಿಗೆ ನೆರವಿನ ಹಸ್ತ ಚಾಚಿದ್ದಾರೆ.
ಪಟ್ಟಣ ಪ್ರದೇಶಗಳಿಗೆ ಕೂಲಿ ಕೆಲಸ ಅರಸಿ ಹೋಗಿ ವಾಪಸ್ ಬಂದ ಬೋರ್ಗಿ ಗ್ರಾಮದ 11 ಕಾರ್ಮಿಕ ಕುಟುಂಬಗಳಿಗೆ ಒಂದು ತಿಂಗಳಿಗೆ ಸಾಕಾಗುವಷ್ಟು ಆಹಾರ ಕೊಟ್ಟು ಮಾನವೀಯತೆ ಮೆರೆದಿದ್ದಾರೆ.
‘10 ಕೆ.ಜಿ ಅಕ್ಕಿ, 5 ಕೆ.ಜಿ ಗೋದಿ ಹಿಟ್ಟು, ಎರಡು ಪ್ಯಾಕೇಟ್ ಸಿಹಿ ಎಣ್ಣೆ, 2 ಕೆ.ಜಿ ರವಾ, 2 ಕೆ.ಜಿ ಅವಲಕ್ಕಿ, 2 ಕೆ.ಜಿ ಸಕ್ಕರೆ, 2 ಕೆ.ಜಿ ಬೇಳೆ ಸೇರಿದಂತೆ ಒಟ್ಟು 25 ಕೆ.ಜಿ.ಯ ಸಾಮಗ್ರಿಗಳ ಕಿಟ್ ಆ ಎಲ್ಲ 11 ಕುಟುಂಬಗಳಿಗೆ ಹೋಗಿ ವಿತರಿಸಲಾಗಿದೆ’ ಬೋರ್ಗಿ ಗ್ರಾಮದ ಯುವಕ ಉಮಾಕಾಂತ ವಿಳಾಸಪುರೆ ತಿಳಿಸಿದ್ದಾರೆ.
‘ಶಿಕ್ಷಕ ಮುತ್ತಣ್ಣ ಶಾಲೆ ಮಕ್ಕಳ ಬಗ್ಗೆ ಪ್ರೀತಿ ಮತ್ತು ಅಷ್ಟೇ ಕಳಕಳಿ ಹೊಂದಿದ್ದಾರೆ. ಅವರ ಪಾಲಕರು ಸಂಕಷ್ಟದಲ್ಲಿರುವುದನ್ನು ಅರಿತು ಅವರ ನೆರವಿಗೆ ಬಂದಿದ್ದು ತುಂಬಾ ಸಂತಸದ ಸಂಗತಿ’ ಎಂದು ಗ್ರಾಮದ ಗುರುನಾಥ ಕೌಟಗೆ, ಜೈಪ್ರಕಾಶ ಅಷ್ಟುರೆ ಸಂತಸ ವ್ಯಕ್ತಪಡಿಸಿದ್ದಾರೆ.
‘ನಾನು ಪ್ರಚಾರಕ್ಕಾಗಿ ಆಗಲಿ ಅಥವಾ ಯಾರೋ ಹೇಳಿದ್ದಾರೆಂದು ಈ ಕೆಲಸ ಮಾಡಿಲ್ಲ. ಮನಸಾರೆಯಾಗಿ ಬಡವರಿಗೆ ಒಂದಿಷ್ಟು ಅನುಕೂಲವಾಗಲಿ ಎಂಬ ಕಾರಣದಿಂದ ಅಲ್ಪ ಆಹಾರ ಸಾಮಗ್ರಿ ಕೊಟ್ಟಿದ್ದೇನೆ. ಅದೇನು ಮಹಾ ಸಹಾಯವೂ ಅಲ್ಲ’ ಎಂದು ಶಿಕ್ಷಕ ಮುತ್ತಣ್ಣ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.