ADVERTISEMENT

ಸಮಗ್ರ ಕೃಷಿಯ ಅವಿಭಾಜ್ಯ ಅಂಗ ಹೈನುಗಾರಿಕೆ: ಉಷಾ ರಾಜೇಂದ್ರ ನಿಟ್ಟೂರಕರ್

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2018, 12:34 IST
Last Updated 15 ಡಿಸೆಂಬರ್ 2018, 12:34 IST
ಬೀದರ್‌ನ ಡಿ.ಸಿ.ಸಿ ಬ್ಯಾಂಕಿನ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಿದ್ದ ತಾಂತ್ರಿಕ ಸಮಾವೇಶವನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಉಷಾ ನಿಟ್ಟೂರಕರ್ ಉದ್ಘಾಟಿಸಿದರು. ಸುಬ್ರಹ್ಮಣ್ಯ ಪ್ರಭು, ರವಿಕುಮಾರ ಭೂರೆ ಹಾಗೂ ನರಸಪ್ಪ ಇದ್ದಾರೆ
ಬೀದರ್‌ನ ಡಿ.ಸಿ.ಸಿ ಬ್ಯಾಂಕಿನ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಿದ್ದ ತಾಂತ್ರಿಕ ಸಮಾವೇಶವನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಉಷಾ ನಿಟ್ಟೂರಕರ್ ಉದ್ಘಾಟಿಸಿದರು. ಸುಬ್ರಹ್ಮಣ್ಯ ಪ್ರಭು, ರವಿಕುಮಾರ ಭೂರೆ ಹಾಗೂ ನರಸಪ್ಪ ಇದ್ದಾರೆ   

ಬೀದರ್: ‘ಹೈನುಗಾರಿಕೆಯು ಸಮಗ್ರ ಕೃಷಿಯ ಅವಿಭಾಜ್ಯ ಅಂಗವಾಗಿದೆ. ಕೃಷಿ ಮತ್ತು ಹೈನುಗಾರಿಕೆ ಜತೆಯಾಗಿದ್ದರೆ ಕೃಷಿ ಸಹಜವಾಗಿಯೇ ಲಾಭದಾಯಕವಾಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ನಿಟ್ಟೂರ್‌ ಕ್ಷೇತ್ರದ ಸದಸ್ಯೆ ಉಷಾ ರಾಜೇಂದ್ರ ನಿಟ್ಟೂರಕರ್ ಅಭಿಪ್ರಾಯಪಟ್ಟರು.

ಡಿ.ಸಿ.ಸಿ ಬ್ಯಾಂಕಿನ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ವತಿಯಿಂದ ಪಶು ವೈದ್ಯಾಧಿಕಾರಿಗಳಿಗೆ ವಿಸ್ತೀರ್ಣ ಚಟುವಟಿಕೆಗಳ ಬಲಪಡಿಸುವಿಕೆ ಕಾರ್ಯಕ್ರಮದ ಅಡಿಯಲ್ಲಿ ಆಯೋಜಿಸಿದ್ದ ತಾಂತ್ರಿಕ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೃಷಿ ಹಾಗೂ ಹೈನುಗಾರಿಕೆ ಅವಿಭಕ್ತ ಕುಟುಂಬ ಇದ್ದಂತೆ. ಕೃಷಿಯಿಂದ ಜಾನುವಾರುಗಳಿಗೆ ಮೇವು ದೊರೆತರೆ, ದನಗಳಿಂದ ಗೊಬ್ಬರ ಲಭಿಸುತ್ತದೆ’ ಎಂದು ತಿಳಿಸಿದರು.

ADVERTISEMENT

‘ಹೈನುಗಾರಿಕೆಯಲ್ಲಿ ಪಶುಗಳ ಬಗೆಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಪಶು ವೈದ್ಯರು ಸಹ ಜಾನುವಾರುಗಳಿಗೆ ಸಕಾಲದಲ್ಲಿ ಚಿಕಿತ್ಸೆ ಹಾಗೂ ರೋಗ ನಿರೋಧಕ ಲಸಿಕೆ ಹಾಗೂ ಚುಚ್ಚುಮದ್ದುಗಳನ್ನು ಕೊಡುತ್ತಿದ್ದರೆ ಅನುಕೂಲವಾಗುತ್ತದೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಬರಗಾಲ ಪರಿಸ್ಥಿತಿ ಇದೆ. ಬೇಸಿಗೆ ಬರುವ ಮುನ್ನ ಜಾನುವಾರುಗಳಿಗೆ ಮೇವಿನ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ರವಿಕುಮಾರ ಭೂರೆ ಮಾತನಾಡಿ, ‘ ಮೇವು ಬೆಳೆಸುವವರನ್ನು ಗುರುತಿಸಿ ಅವರಿಂದ ಮೇವು ಖರೀದಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಪಶು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.

ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಮಾತನಾಡಿ, ‘ವಿದ್ಯಾಭ್ಯಾಸ ಪೂರ್ಣಗೊಳಿಸಿರುವ ಯುವಕರು ಸಣ್ಣ ವರಮಾನದ ಉದ್ಯೋಗದ ಆಸೆಗಾಗಿ ನಗರಗಳಿಗೆ ವಲಸೆ ಹೋಗುವ ಬದಲು ಹಳ್ಳಿಗಳಲ್ಲೇ ಸ್ವಯಂ ಕೃಷಿ ಮಾಡಿಕೊಂಡು ಆತ್ಮಾಭಿಮಾನದಿಂದ ಬದುಕು ನಡೆಸುವ ಅಗತ್ಯವಿದೆ’ ಎಂದರು.

ನಬಾರ್ಡ ವ್ಯವಸ್ಥಾಪಕ ರಾಮರಾವ್ ಉಪಸತ್ಥಿತರಿದ್ದರು. ಸಹಾಯಕ ನಿರ್ದೇಶಕ ಡಾ.ನರಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು, ಡಾ ನಾಗರಾಜ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.