ADVERTISEMENT

ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 19:45 IST
Last Updated 2 ಡಿಸೆಂಬರ್ 2019, 19:45 IST
ಹುಮನಾಬಾದ್‍ನ ಶಕುಂತಲಾ ಪಾಟೀಲ ಡಿ.ಇಡಿ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಟಿಇಟಿ ಪರೀಕ್ಷಾ ತರಬೇತಿ ಕೇಂದ್ರದ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ತಹಶೀಲ್ದಾರ್ ನಾಗಯ್ಯ ಸ್ವಾಮಿ ಹಿರೇಮಠ ಉದ್ಘಾಟಿಸಿದರು
ಹುಮನಾಬಾದ್‍ನ ಶಕುಂತಲಾ ಪಾಟೀಲ ಡಿ.ಇಡಿ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಟಿಇಟಿ ಪರೀಕ್ಷಾ ತರಬೇತಿ ಕೇಂದ್ರದ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ತಹಶೀಲ್ದಾರ್ ನಾಗಯ್ಯ ಸ್ವಾಮಿ ಹಿರೇಮಠ ಉದ್ಘಾಟಿಸಿದರು   

ಹುಮನಾಬಾದ್: ‘ನಿರಂತರ ಅಧ್ಯಯನದಿಂದ ಮಾತ್ರ ಯಶಸ್ಸು ಸಾಧ್ಯ’ ಎಂದು ತಹಶೀಲ್ದಾರ್ ನಾಗಯ್ಯ ಸ್ವಾಮಿ ಹಿರೇಮಠ ಅಭಿಪ್ರಾಯಪಟ್ಟರು.

ಪಟ್ಟಣದ ಶಕುಂತಲಾ ಪಾಟೀಲ ಡಿ.ಇಡಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ‘ಉಚಿತ ಟಿಇಟಿ ಪರೀಕ್ಷಾ ತರಬೇತಿ ಕೇಂದ್ರದ ಪ್ರಾರಂಭೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಪಠ್ಯಕ್ರಮವನ್ನು ಸರಿಯಾಗಿ ಓದಬೇಕು. ವಿಷಯಕ್ಕೆ ಅನುಸಾರವಾಗಿ ಪಠ್ಯಪುಸ್ತಕ ಸಂಗ್ರಹಿಸಿಕೊಂಡು ಸಮಯ ಪಾಲನೆ ಮತ್ತು ಸತತ ಪರಿಶ್ರಮ ಪಟ್ಟು ಓದಿದಾಗ ಗುರಿ ಮುಟ್ಟಬಹುದು ಎಂದು ಹೇಳಿದರು.

ADVERTISEMENT

ಅಧ್ಯಯನ ಮಾಡುವಾಗ ವಿದ್ಯಾರ್ಥಿಗಳಲ್ಲಿ ತಾಳ್ಮೆ ಇರಬೇಕು. ಮಕ್ಕಳು ಓದಿನ ಸಮಯದಲ್ಲಿ ಮೊಬೈಲ್, ಟಿವಿ, ಧಾರವಾಹಿಗಳ ಕಡೆ ಗಮನಹರಿಸದೆ ಪಠ್ಯಕ್ಕೆ ಹೆಚ್ಚಿನ ಮಹತ್ವ ನೀಡುವುದರ ಜತೆಗೆ ಸಾಮಾಜಿಕ ಜಾಲತಾಣವನ್ನು ಒಳ್ಳೆಯದ್ದಕ್ಕಾಗಿ ಉಪಯೋಗಿಸಿಕೊಳ್ಳಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಚಪ್ಪ ವಾಲಿ ಮಾತನಾಡಿ,‘ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೂಡಬೇಕು. ಮಕ್ಕಳು ಶಿಕ್ಷಕರು ಹೇಳುವ ಪಾಠವನ್ನು ಸಮಚಿತ್ತದಿಂದ ಆಲಿಸಬೇಕು’ ಎಂದರು.

ರಾಜ್ಯದಲ್ಲಿ 600 ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು 300 ಪ್ರೌಢ ಶಾಲಾ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಸರ್ಕಾರ ಅವುಗಳನ್ನು ಸಿಇಟಿ ಮತ್ತು ಟಿಇಟಿ ಪರೀಕ್ಷೆಯ ಮುಖಾಂತರ ಭರ್ತಿ ಮಾಡಿಕೊಳ್ಳುತ್ತಿದೆ. ವಿದ್ಯಾರ್ಥಿಗಳಿಗೆ ಅನೂಕುಲವಾಗುವ ನಿಟ್ಟಿನಲ್ಲಿ ಸರ್ಕಾರ ಟಿಇಟಿ ಪರೀಕ್ಷಾ ಕೇಂದ್ರದ ಮೂಲಕ ಉಚಿತ ತರಬೇತಿ ನೀಡುತ್ತಿದೆ ಎಂದರು.
ಟಿಇಟಿ ಪರೀಕ್ಷಾ ಕೇಂದ್ರದಲ್ಲಿ ಡಿ,2 ರಿಂದ 22ರವರೆಗೆ ತಾಲ್ಲೂಕಿನ ಡಿ.ಇಡಿ, ಬಿ.ಇಡಿ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುತ್ತಿದೆ. ಇಲ್ಲಿಯವರೆಗೆ ಒಟ್ಟು 200 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಸಂಜೆ 4,30 ರಿಂದ 7 ಗಂಟೆಯವರೆಗೆ ತರಬೇತಿ ನಡೆಯಲಿದೆ ಎಂದರು.

ವಿದ್ಯಾರ್ಥಿಗಳಿಗಾಗಿ ತರಬೇತಿ ಕೇಂದ್ರದಿಂದ ಬಸ್ ನಿಲ್ದಾಣದವರೆಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ತರಬೇತಿ ಸದುಪಯೋಗ ಪಡೆದುಕೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಬೀದರ್ ಸಾರ್ವಜನಿಕ ಶಿಕ್ಷಣ ಇಲಾಖೆ ಅಭಿವೃದ್ದಿ ಉಪನಿರ್ದೇಶಕ ಶಶಿಧರ ವರ್ತುಲ, ಶಕುಂತಲಾ ಪಾಟೀಲ ಡಿ.ಇಡಿ ಕಾಲೇಜು ಪ್ರಾಂಶುಪಾಲ ಡಾ.ಅರವಿಂದ ರಾಠೋಡ ಹಾಗೂ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶಿವಕುಮಾರ ಪಾರಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.