ADVERTISEMENT

ಬೀದರ್: ರಾಜ್ಯದಲ್ಲಿ ಪಂಚಾಯತ್‍ರಾಜ್ ಬಲ ಕುಗ್ಗಿಸುವ ಯತ್ನ -ನಾರಾಯಣ ಸ್ವಾಮಿ ಆರೋಪ

ಪಂಚಾಯತ್‍ರಾಜ್ ಸಂಘಟನೆ ಸಮಾವೇಶ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 16:06 IST
Last Updated 17 ಸೆಪ್ಟೆಂಬರ್ 2021, 16:06 IST
ಬೀದರ್‌ನ ಶಿವಾ ಇಂಟರ್‌ನ್ಯಾಷನಲ್‍ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್‍ನ ರಾಜೀವ್ ಗಾಂಧಿ ಪಂಚಾಯತ್‍ರಾಜ್ ಸಂಘಟನೆಯ ಜಿಲ್ಲಾಮಟ್ಟದ ಸಮಾವೇಶವನ್ನು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಸಿ. ನಾರಾಯಣ ಸ್ವಾಮಿ ಉದ್ಘಾಟಿಸಿದರು. ದತ್ತಾತ್ರಿ ಮೂಲಗೆ, ಬಸವರಾಜ ಜಾಬಶೆಟ್ಟಿ, ವಿಜಯಸಿಂಗ್, ನರಸಿಂಗರಾವ್ ಸೂರ್ಯವಂಶಿ, ವಿ.ವೈ ಘೋರ್ಪಡೆ, ರಹೀಂಖಾನ್, ಶೌಕತ್ ಅಲಿ ಆಲೂರ್, ರೋಹಿದಾಸ ಘೋಡೆ ಇದ್ದರು
ಬೀದರ್‌ನ ಶಿವಾ ಇಂಟರ್‌ನ್ಯಾಷನಲ್‍ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್‍ನ ರಾಜೀವ್ ಗಾಂಧಿ ಪಂಚಾಯತ್‍ರಾಜ್ ಸಂಘಟನೆಯ ಜಿಲ್ಲಾಮಟ್ಟದ ಸಮಾವೇಶವನ್ನು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಸಿ. ನಾರಾಯಣ ಸ್ವಾಮಿ ಉದ್ಘಾಟಿಸಿದರು. ದತ್ತಾತ್ರಿ ಮೂಲಗೆ, ಬಸವರಾಜ ಜಾಬಶೆಟ್ಟಿ, ವಿಜಯಸಿಂಗ್, ನರಸಿಂಗರಾವ್ ಸೂರ್ಯವಂಶಿ, ವಿ.ವೈ ಘೋರ್ಪಡೆ, ರಹೀಂಖಾನ್, ಶೌಕತ್ ಅಲಿ ಆಲೂರ್, ರೋಹಿದಾಸ ಘೋಡೆ ಇದ್ದರು   

ಬೀದರ್: ರಾಜ್ಯ ಬಿಜೆಪಿ ಸರ್ಕಾರವು ಪಂಚಾಯತ್‍ರಾಜ್ ವ್ಯವಸ್ಥೆ ಬಲ ಕುಗ್ಗಿಸಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್‍ನ ರಾಜೀವ್ ಗಾಂಧಿ ಪಂಚಾಯತ್‍ರಾಜ್ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಸಿ. ನಾರಾಯಣ ಸ್ವಾಮಿ ಆರೋಪಿಸಿದರು.

ನಗರದ ಶಿವಾ ಇಂಟರ್‌ನ್ಯಾಷನಲ್‍ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್‍ನ ರಾಜೀವ್ ಗಾಂಧಿ ಪಂಚಾಯತ್‍ರಾಜ್ ಸಂಘಟನೆಯ ಜಿಲ್ಲಾ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಮೀಸಲಾತಿ ನೆಪದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಮಂದೂಡಲು ಹೊರಟಿದೆ ಎಂದು ಟೀಕಿಸಿದರು.

ADVERTISEMENT

ಹಿಂದೆ ಗ್ರಾಮ ಪಂಚಾಯಿತಿ ಚುನಾವಣೆಯನ್ನೂ ಮುಂದೂಡಲು ಮುಂದಾಗಿತ್ತು. ಆದರೆ, ಕಾಂಗ್ರೆಸ್ ನ್ಯಾಯಾಲಯದ ಮೊರೆ ಹೋದ ಕಾರಣ ಚುನಾವಣೆ ನಡೆಸಬೇಕಾಯಿತು ಎಂದು ಹೇಳಿದರು.

ಎರಡು-ಮೂರು ವರ್ಷಗಳಿಂದ ಗ್ರಾಮ ಪಂಚಾಯಿತಿಗಳಿಗೆ ಮನೆ ಹಂಚಿಕೆ ಮಾಡಿಲ್ಲ. ಕೆಲ ಹಣಕಾಸು ನೆರವು ಕೂಡ ನೀಡದೆ ಮಲತಾಯಿ ಧೋರಣೆ ತೋರುತ್ತಿದೆ. ಸದಸ್ಯರ ಹಕ್ಕುಗಳನ್ನು ಕಸಿಯಲು ಪ್ರಯತ್ನಿಸುತ್ತಿದೆ ಎಂದು ಆಪಾದಿಸಿದರು.

ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರು ಪಂಚಾಯತ್‍ರಾಜ್ ವ್ಯವಸ್ಥೆಯನ್ನು ಜಾರಿಗೊಳಿಸಿದ್ದರು. ಪಂಚಾಯತ್‍ರಾಜ್ ಬಲವರ್ಧನೆಗಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಭೆ, ಸಮಾವೇಶಗಳನ್ನು ನಡೆಸಲಾಗುತ್ತಿದೆ. ಮುಂಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ಶಾಸಕ ರಹೀಂಖಾನ್, ಸಂಘಟನೆಯ ರಾಷ್ಟ್ರೀಯ ಸಲಹೆಗಾರರಾದ ಡಿ.ಆರ್. ಪಾಟೀಲ, ವಿ.ವೈ. ಘೋರ್ಪಡೆ, ರಾಜ್ಯ ಸಂಚಾಲಕ ವಿಜಯಸಿಂಗ್, ಸಹ ಸಂಚಾಲಕ ಶೌಕತ್ ಅಲಿ ಆಲೂರ, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಮುಖಂಡರಾದ ಅಮೃತರಾವ್ ಚಿಮಕೋಡೆ, ರೋಹಿದಾಸ್ ಘೋಡೆ, ಶಂಕರ ದೊಡ್ಡಿ, ಫರಿದ್‍ಖಾನ್, ನಿಸಾರ್ ಅಹಮ್ಮದ್, ಬಾಬುರಾವ್ ತುಂಬಾ, ಅಜ್ಮತ್ ಪಟೇಲ್, ಸಂಜುಕುಮಾರ ಡಿ.ಕೆ, ರಾಜಶೇಖರ ಪಾಟೀಲ ಅಷ್ಟೂರ ಇದ್ದರು.

ಕಾರ್ಯಕ್ರಮಕ್ಕೆ ಮುನ್ನ ಎರಡು ನಿಮಿಷಗಳ ಮೌನ ಆಚರಿಸಿ ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.