ADVERTISEMENT

ಕೋಹಿರ್- ಬೀದರ್ ರೈಲು ಮಾರ್ಗ ವಿದ್ಯುದ್ದೀಕರಣ: ಜೂನ್ ಅಂತ್ಯದೊಳಗೆ ಕಾಮಗಾರಿ ಪೂರ್ಣ

​ಪ್ರಜಾವಾಣಿ ವಾರ್ತೆ
Published 7 ಮೇ 2021, 5:17 IST
Last Updated 7 ಮೇ 2021, 5:17 IST
ಖೂಬಾ
ಖೂಬಾ   

ಬೀದರ್: ಕೋಹಿರ್‌ನಿಂದ ಬೀದರ್‌ ವರೆಗಿನ ರೈಲು ಮಾರ್ಗ ವಿದ್ಯುದ್ದೀಕರಣ ಕಾಮಗಾರಿ ಜೂನ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ.

ವಿಕಾರಾಬಾದ್‍ನಿಂದ ಪರಳಿ ವೈಜಿನಾಥವರೆಗೆ 269 ಕಿ.ಮೀ. ರೈಲು ಮಾರ್ಗ ವಿದ್ಯುದ್ದೀಕರಣಕ್ಕೆ ₹262.12 ಕೋಟಿ ಮಂಜೂರಾಗಿದೆ. ಮೊದಲ ಕಂತಾಗಿ ₹90 ಕೋಟಿ ಬಿಡುಗಡೆಯೂ ಆಗಿದೆ ಎಂದು ಹೇಳಿದ್ದಾರೆ.

ವಿಕಾರಾಬಾದ್‍ನಿಂದ ಕೋಹಿರ್‌ ವರೆಗಿನ ರೈಲು ಮಾರ್ಗ ವಿದ್ಯುದ್ದೀಕರ ಣದ ಮೊದಲ ಹಂತದ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಪ್ರಾಯೋಗಿಕ ಕಾರ್ಯಾಚರಣೆ ಕೂಡ ನಡೆದಿದೆ ಎಂದು ತಿಳಿಸಿದ್ದಾರೆ.

ADVERTISEMENT

ಕೋಹಿರ್‌ನಿಂದ ಬೀದರ್‌ವರೆಗಿನ ಎರಡನೇ ಹಂತದ ಕಾಮಗಾರಿ ಮುಕ್ತಾ ಯದ ನಂತರ ಪ್ರಾಯೋಗಿಕ ಕಾರ್ಯಾ ಚರಣೆ ನಡೆಯಲಿದೆ. ಬಳಿಕ ಹಂತ ಹಂತವಾಗಿ ಮುಂದಿನ ಕಾಮಗಾರಿಗಳು ನಡೆಯಲಿವೆ ಎಂದು ಹೇಳಿದ್ದಾರೆ.

ಬರುವ ಕೆಲವೇ ತಿಂಗಳಲ್ಲಿ ವಿಕಾರಾಬಾದ್‍ನಿಂದ ಜಹೀರಾಬಾದ್- ಬೀದರ್- ಖಾನಾಪುರ, ಭಾಲ್ಕಿ- ಕಮಲನಗರ- ಉದಗಿರ- ಲಾತೂರ್ ರಸ್ತೆ- ಪಣಗಾಂವ ಮಾರ್ಗವಾಗಿ ಪರಳಿ ವೈಜಿನಾಥವರೆಗೆ ವಿದ್ಯುತ್ ಚಾಲಿತ ರೈಲು ಓಡಲಿದೆ. ಇದು, ಜಿಲ್ಲೆಯ ಅಭಿವೃದ್ಧಿಗೆ ಹೊಸ ಆಯಾಮ ನೀಡಲಿದೆ. ಮುಂದೆಯೂ ಈ ರೀತಿಯ ಅಭಿವೃದ್ಧಿ ಕಾರ್ಯಗಳು ಆಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2014 ರಿಂದ ರೈಲ್ವೆ ಇಲಾಖೆಯಿಂದ ಬೀದರ್ ಜಿಲ್ಲೆಗೆ ಅನೇಕ ಕೊಡುಗೆಗಳು ಸಿಕ್ಕಿವೆ. ಬೀದರ್-ಕಲಬುರ್ಗಿ, ಬೆಂಗಳೂರು, ಮುಂಬೈ, ತಿರುಪತಿ, ಶಿರಡಿ, ಪಂಢರಾಪುರ, ಕೋಲ್ಹಾಪುರ, ಮಚಲಿಪಟ್ನಂ ಸೇರಿ ಅನೇಕ ಕಡೆಗಳಲ್ಲಿ ರೈಲು ಸೇವೆ ಆರಂಭಿಸಲಾಗಿದೆ. ರೈಲು ನಿಲ್ದಾಣಗಳ ಸೌಂದರ್ಯೀಕರಣ, ಶುಚಿತ್ವ, ಮೂಲಸೌಕರ್ಯಕ್ಕೆ ಒತ್ತು ಕೊಟ್ಟು ಜನರಿಗೆ ಅನುಕೂಲ ಮಾಡಿ ಕೊಡಲಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.