ಕಮಲನಗರ: ‘12ನೇ ಶತಮಾನದ ಬಸವಾದಿ ಶರಣರ ಚಿಂತನೆಗಳು ಎಲ್ಲೆಡೆ ಪ್ರಸಾರವಾದಲ್ಲಿ ಮನುಷ್ಯನ ಬದುಕಿನಲ್ಲಿ ಸರ್ವತೋಮುಖ ಬೆಳವಣಿಗೆ ಸಾಧ್ಯ’ ಎಂದು ಹೂವಿನಶಿಗ್ಲಿ ಮತ್ತು ಸೋನಾಳಶ್ರೀಮಠದ ಪೀಠಾಧ್ಯಕ್ಷ ಚನ್ನವೀರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಗುರು ಕುಮಾರೇಶ ಜಯಂತಿ ಪ್ರಯುಕ್ತ ತಾಲ್ಲೂಕಿನ ಸೋನಾಳ ಗ್ರಾಮದ ನಿರಂಜನ ಮಹಾಸ್ವಾಮಿ ವಿರಕ್ತಮಠದಲ್ಲಿ ನಡೆದ ತೊಟ್ಟಿಲು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಸವೇಶ್ವರರ ತತ್ವಗಳು ಭರತ ಖಂಡಕ್ಕೆ ಅಂದಿನಿಂದ ಇಂದಿನವರೆಗೂ ಅತ್ಯಗತ್ಯ. ಅಂದಿನ ಸಾಮಾಜಿಕ, ಅಸಮಾನತೆ, ಶೋಷಣೆ, ಧಾರ್ಮಿಕ ಮೌಢ್ಯತೆ, ಸ್ತ್ರೀ ಸ್ವಾತಂತ್ರ್ಯ ಹರಣದ ವಿರುದ್ಧ ಶರಣರು ಕ್ರಾಂತಿ ಮಾಡಿ, ಕಾಯಕ, ದಾಸೋಹ, ನಂಬಿಕೆ, ಸಮಾನತೆ ಸಹೋದರತೆ ದೇಶದ ಉದ್ದಗಲಕ್ಕೂ ಬಿತ್ತಿ ಮಾನವೀಯ ಮೌಲ್ಯಗಳ ತತ್ವಗಳನ್ನು ಎಲ್ಲರ ಹೃದಯದಲ್ಲಿ ನೆಲೆಸುವಂತೆ ಮಾಡಿದ್ದಾರೆ ಎಂದು ತಿಳಿಸಿದರು.
ಪ್ರವಚನಕಾರ ಶಶಿಧರ ಶಾಸ್ತ್ರೀ ಮಾತನಾಡಿ,‘ನಿನ್ನೆ ಎಂಬುದು ರದ್ದಿ ಪೇಪರ್ನಂತೆ, ನಾಳೆ ಎಂಬುದು ಪ್ರಶ್ನೆಪತ್ರಿಕೆ ಇದ್ದಂತೆ’ ಎಂದರು.
ಕುಮಾರೇಶ್ವರ ಶಿವಯೋಗಿಗಳ ಜೀವನ ಮತ್ತು ಅವರ ಸಂದೇಶ ಕುರಿತು ಅನುಭಾವ ನೀಡಿದರು.
ಮುಖ್ಯಶಿಕ್ಷಕ ಗುಂಡಪ್ಪ ಬಾರ್ಕಿ ಮಾತನಾಡಿ,‘ಸೋನಾಳದಲ್ಲಿ ಡಿಸೆಂಬರ್ 20, 21 ರಂದು ನಡೆಯಲಿರುವ ಲಿಂಗೈಕ್ಯ ನಿರಂಜನ ಮಹಾಸ್ವಾಮಿಗಳವರ 10ನೇ ಪುಣ್ಯಸ್ಮರಣೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕು’ ಎಂದು ಕೋರಿದರು.
ಸುಗಲಮ್ಮ ಪ್ರಭು ಮತ್ತು ಶಾಂತಮ್ಮ ದೇವಪ್ಪ ಹಾಗೂ ಗ್ರಾಪಂ ಸದಸ್ಯೆ ಶಕುಂತಲಾ ಗುಣವಂತ ನೇತೃತ್ವದಲ್ಲಿ ಗುರು ಕುಮಾರೇಶ್ವರ ತೊಟ್ಟಿಲು ಕಾರ್ಯಕ್ರಮವನ್ನು ಮಹಿಳೆಯರು ನೆರವೇರಿಸಿದರು.
ಮುಖಂಡ ಕಲ್ಯಾಣರಾವ ಬಿರಾದಾರ, ಶಾಂತಪ್ಪ ದೇವಪ್ಪ, ಕಾಶಯ್ಯ ಸ್ವಾಮಿ, ಪ್ರೇಮಕುಮಾರ ಘಾಳೆ, ನೆಹರೂ ಬಿರಾದಾರ, ಗ್ರಾಪಂ ಸದಸ್ಯ ಗಣಪತಿ ಬಿರಾದಾರ, ಅಂಕುಶ ಹಣಮಶೆಟ್ಟಿ, ಶಿವಕುಮಾರ ಕೌಡಗಾಂವೆ, ಬಸವರಾಜ ಈಸರಣ್ಣ, ರಾಜಕುಮಾರ ಅಲವಿದೆ, ಶರಣಪ್ಪ ಕೌಡಗಾಂವೆ, ಶ್ರೀಕಾಂತ ಬಿರಗೆ, ಅರುಣ ಈಸರಣ್ಣ, ಪರಮೇಶ್ವರ ಬಿರಾದಾರ, ಮಹೇಶ ಬಿರಾದಾರ, ನಾಗರಾಜ ಹಾಗೂ ಗ್ರಾಮಸ್ಥರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.