ADVERTISEMENT

‘ಮಾಲಿನ್ಯ ನಿಯಂತ್ರಣಕ್ಕೆ ಪ್ರಯತ್ನಿಸಿ’

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 12:19 IST
Last Updated 20 ನವೆಂಬರ್ 2019, 12:19 IST
ಚಿಟಗುಪ್ಪ ತಾಲ್ಲೂಕಿನ ನಿರ್ಣಾ ಗ್ರಾಮದಲ್ಲಿ ಮಂಗಳವಾರ ನಡೆದ ವಾಯು ಮಾಲಿನ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮೋಟಾರ್ ವಾಹನ ನಿರೀಕ್ಷಕರಾದ ಎಂ.ಡಿ.ಜಾಫರ್ ಸಾದೀಕ್‌ ವಾಹನ ಚಾಲಕರಿಗೆ ಸಸಿ ವಿತರಿಸಿದರು
ಚಿಟಗುಪ್ಪ ತಾಲ್ಲೂಕಿನ ನಿರ್ಣಾ ಗ್ರಾಮದಲ್ಲಿ ಮಂಗಳವಾರ ನಡೆದ ವಾಯು ಮಾಲಿನ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮೋಟಾರ್ ವಾಹನ ನಿರೀಕ್ಷಕರಾದ ಎಂ.ಡಿ.ಜಾಫರ್ ಸಾದೀಕ್‌ ವಾಹನ ಚಾಲಕರಿಗೆ ಸಸಿ ವಿತರಿಸಿದರು   

ಚಿಟಗುಪ್ಪ: ‘ಪರಿಸರ ಮಾಲಿನ್ಯ ನಿಯಂತ್ರಿಸಲು ನಾಗರಿಕರು ಶ್ರಮಿಸಬೇಕು. ಸ್ವಯಂ ಜಾಗೃತರಾಗಬೇಕು ಅಂದಾಗಲೇ ಮುಂದಿನ ಪೀಳಿಗೆಗೆ ಶುದ್ಧ ಆರೋಗ್ಯಪೂರ್ಣ ಪರಿಸರ ಕೊಡಲು ಸಾಧ್ಯ’ ಎಂದು ಮೋಟಾರ್ ವಾಹನ ನಿರೀಕ್ಷಕರಾದ ಎಂ.ಡಿ.ಜಾಫರ್ ಸಾದೀಕ್‌ ಹೇಳಿದರು.

ತಾಲ್ಲೂಕಿನ ನಿರ್ಣಾ ಗ್ರಾಮದಲ್ಲಿ ಭಾಲ್ಕಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ, ಗುರುಬಸವ ಮೋಟಾರ್ಸ್‌ ಆಶ್ರಯದಲ್ಲಿ ವಾಯು ಮಾಲಿನ್ಯ ಜಾಗೃತಿ ಮಾಸಾಚರಣೆ (ಮಾಲಿನ್ಯ ಅಳಿಸಿ ಜೀವ ಉಳಿಸಿ) ಕಾರ್ಯಕ್ರಮದ ಅಡಿಯಲ್ಲಿ ನಡೆದ ವಾಯುಮಾಲಿನ್ಯ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಸೀದಿ, ದೇವಸ್ಥಾನಗಳಿಗೆ ಹೋಗುವಾಗ ವಾಹನಗಳನ್ನು ಬಳಕೆ ಮಾಡುವುದರ ಮೇಲೆ ಕಡಿವಾಣ ಹಾಕುವ ಮೂಲಕ ಪರಿಸರಕ್ಕೆ ಕೊಡುಗೆ ನೀಡಬೇಕು. ವಾಹನಗಳಿಂದ ಹೊರಬರುವ ಮಾಲಿನ್ಯದಿಂದ ಮಕ್ಕಳ ಆರೋಗ್ಯ ಕೆಡುತ್ತಿದೆ. ಈ ಬಗ್ಗೆ ಎಚ್ಚರ ವಹಿಸಬೇಕು’ ಎಂದು ತಿಳಿಸಿದರು.

ADVERTISEMENT

‘ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೇಟ್ ಬಳಕೆ ಮಾಡಬೇಕು. ಗೃಹ ಪ್ರವೇಶ, ಜನ್ಮದಿನ, ಮದುವೆ ಶುಭ ಸಮಾರಂಭಗಳಲ್ಲಿ ಉಡುಗೊರೆಯಾಗಿ ಸಸಿಗಳನ್ನು ನೀಡುವ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.

ಗುರುಬಸವ ಮೋಟಾರ್ಸ್ ಮಾಲೀಕ ಕುಪೇಂದ್ರ ನೀಡಗುಂದೆ ಮಾತನಾಡಿ, ‘ನಾಗರಿಕರು ದ್ವೀಚಕ್ರ ವಾಹಾನದ ಎಂಜಿನ್ ಆಯಿಲ್ 4,000 ಕಿ.ಮೀಗೆ ಒಂದು ಬಾರಿ ಬದಲಾಯಿಸಬೇಕು’ ಎಂದು ಸಲಹೆ ನೀಡಿದರು.

ಶಿವರಾಜ್ ಜಮಾದಾರ್, ಅನೀಲಕುಮಾರ ಬೇಮಳಖೇಡಾ, ವೀರಪ್ಪಾ ಮುದನಾಳ, ಬಸವರಾಜ ತಾಳಮಡಗಿ, ಚನ್ನಪ್ಪ ಸ್ವಾಮಿ, ಅಶೋಕ ಕಾಗೆನೋರ್ ಇತರರು ಇದ್ದರು. ಕಾರ್ಯಕ್ರಮದಲ್ಲಿ ಹಲವು ವಾಹನ ಚಾಲಕರಿಗೆ ಸಸಿಗಳು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.