ಬೀದರ್: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಅಡಿಯಲ್ಲಿ ನಗರದಲ್ಲಿ ಕೈಗೊಳ್ಳಲಾದ ಕಾಮಗಾರಿಗಳನ್ನು ಶಾಸಕ ರಹೀಂ ಖಾನ್ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದರು.
ದೇವದೇವ ವನಕ್ಕೆ ಭೇಟಿ ನೀಡಿ ಉದ್ಯಾನದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಇದನ್ನು ಉತ್ತಮ ರೀತಿಯಲ್ಲಿ ಕಾಯ್ದುಕೊಂಡು ಹೋಗಬೇಕು. ಉದ್ಯಾನಕ್ಕೆ ಬರುವವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿ ಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಶಹಾಪುರ ಗೇಟ್ ಸಮೀಪದ ಅರಣ್ಯ ಇಲಾಖೆಯ ಮಕ್ಕಳ ಉದ್ಯಾನದಲ್ಲಿ ಕೆಲ ಸಮಯ ಸಂಚರಿಸಿದರು. ಅಲ್ಲಿದ್ದ ಔಷಧೀಯ ಸಸ್ಯಗಳ ಉಪಯೋಗದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಉದ್ಯಾನದಲ್ಲಿರುವ ನಳದಲ್ಲಿನ ನೀರು ಕುಡಿದು ಪರೀಕ್ಷಿಸಿದರು. ಉದ್ಯಾನದಲ್ಲಿ ಹೈಮಾಸ್ಟ್ ಅಳವಡಿಕೆಗೆ ಶಾಸಕರ ನಿಧಿಯಿಂದ ಅನುದಾನ ನೀಡಲಾಗುವುದು. ತಕ್ಷಣ ಒಂದು ಪತ್ರ ಬರೆದುಕೊಟ್ಟು ಅನುಮತಿ ಪಡೆದುಕೊಳ್ಳುವಂತೆ ಸೂಚನೆ ನೀಡಿದರು.
ಹಳ್ಳದಕೇರಿ ಟ್ರೀ ಪಾರ್ಕ್ಗೆ ಭೇಟಿ ಕೊಟ್ಟು ಪರಿಶೀಲಿಸಲಾಗಿದೆ. 25 ಎಕರೆ ಪ್ರದೇಶದಲ್ಲಿರುವ ಉದ್ಯಾನದಲ್ಲಿ ಮಕ್ಕಳು ಆಟವಾಡಲು ಅನುಕೂಲವಾಗುವಂತೆ ಆಟಿಕೆ ಸಾಮಗ್ರಿಗಳನ್ನು ಅಳವಡಿಸಲಾಗಿದೆ. ವಾಯು ವಿಹಾರಕ್ಕೆ ಪಾದಚಾರಿ ರಸ್ತೆಯನ್ನೂ ನಿರ್ಮಿಸಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.
ರೈತರಿಗೆ ಕೊಡಲು ಶ್ರೀಗಂಧ, ಹೆಬ್ಬೇವು, ಕರಿಬೇವು, ಲಿಂಬೆ ಇತರೆ ಜಾತಿಯ ಗಿಡಗಳನ್ನು ಬೆಳೆಸಲಾಗಿದೆ ಎಂದು ವಲಯ ಅರಣ್ಯ ಅಧಿಕಾರಿ ಪ್ರವೀಣಕುಮಾರ ಮೋರೆ ಮಾಹಿತಿ ನೀಡಿದರು.
‘ನರ್ಸರಿಯಲ್ಲಿ ಸಸಿಗಳು ಮಾರಾಟಕ್ಕೆ ಲಭ್ಯವಿರುವ ಬಗ್ಗೆ ಸಾರ್ವಜನಿಕರಿಗೆ ಇರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಬೇಕು. ನಗರದಲ್ಲಿ ಒಟ್ಟು ಏಳು ಬಡಾವಣೆಗಳಿವೆ. ಜನರಿಗೆ ನೆರಳು ದೊರಕುವಂತಾಗಲು ಅಲ್ಲಲ್ಲಿ ಕಡ್ಡಾಯ ಸಸಿಗಳನ್ನು ನೆಡಬೇಕು ಎಂದು ಶಾಸಕರು ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅರಣ್ಯ ಇಲಾಖೆಯ ಸದಾನಂದ ಮತ್ತು ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.