ADVERTISEMENT

ಶರಣತತ್ವ ತಿಳಿದರೆ ಧರ್ಮಾಂತರ ತಡೆ ಸಾಧ್ಯ: ಶಿವಾನಂದ ಹೈಬತಪುರೆ

ಕಂಧಾರ-ಕಲ್ಯಾಣ ಸಮತಾ ಸಂದೇಶ ಪಾದಯಾತ್ರೆಯಲ್ಲಿ ಶಿವಾನಂದ ಹೈಬತಪುರೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 6:18 IST
Last Updated 2 ಜನವರಿ 2026, 6:18 IST
ಬಸವಕಲ್ಯಾಣದಲ್ಲಿ ಗುರುವಾರ ನಡೆದ ಸಮತಾ ಸಂದೇಶ ಪಾದಯಾತ್ರೆಯ ಸಮಾರೋಪದಲ್ಲಿ ಬಸವಭಾರತಿ ಅನುಭವ ಮಂಟಪ ಸಮಿತಿ ಮಹಾರಾಷ್ಟ್ರದ ಅಧ್ಯಕ್ಷ ಶಿವಾನಂದ ಹೈಬತಪುರೆ ಅವರು ಸಾಧಕರನ್ನು ಸನ್ಮಾನಿಸಿದರು
ಬಸವಕಲ್ಯಾಣದಲ್ಲಿ ಗುರುವಾರ ನಡೆದ ಸಮತಾ ಸಂದೇಶ ಪಾದಯಾತ್ರೆಯ ಸಮಾರೋಪದಲ್ಲಿ ಬಸವಭಾರತಿ ಅನುಭವ ಮಂಟಪ ಸಮಿತಿ ಮಹಾರಾಷ್ಟ್ರದ ಅಧ್ಯಕ್ಷ ಶಿವಾನಂದ ಹೈಬತಪುರೆ ಅವರು ಸಾಧಕರನ್ನು ಸನ್ಮಾನಿಸಿದರು   

ಬಸವಕಲ್ಯಾಣ: ‘ಸಮಾನತೆ, ಸಹೋದರತ್ವ ಸಾರುವ ಲಿಂಗಾಯತ ಧರ್ಮ ಜನರಿಗೆ ಸಂಪೂರ್ಣವಾಗಿ ತಿಳಿದರೆ ಧರ್ಮಾಂತರ ತಡೆಯಬಹುದಾಗಿದೆ’ ಎಂದು ಬಸವಭಾರತಿ ಅನುಭವ ಮಂಟಪ ಸಮಿತಿ ಮಹಾರಾಷ್ಟ್ರದ ಅಧ್ಯಕ್ಷ ಶಿವಾನಂದ ಹೈಬತಪುರೆ ಹೇಳಿದ್ದಾರೆ.

ನಗರದ ಅನುಭವ ಮಂಟಪದಲ್ಲಿ ಗುರುವಾರ ನಡೆದ ಬಸವಭಾರತಿ ಅನುಭವ ಮಂಟಪ ಸಮಿತಿ ಮಹಾರಾಷ್ಟ್ರ ವತಿಯಿಂದ ಶರಣ ಉರಿಲಿಂಗ ಪೆದ್ದಿ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಂಧಾರ-ಕಲ್ಯಾಣ ಸಮತಾ ಸಂದೇಶ ಪಾದಯಾತ್ರೆಯ ಸಮಾರೋಪದಲ್ಲಿ ಅವರು ಮಾತನಾಡಿದರು.

‘ನಾಂದೇಡ ಜಿಲ್ಲೆಯ ಕಂಧಾರ ಶರಣ ಉರಿಲಿಂಗ ಪೆದ್ದಿ ಮತ್ತು ಅವರ ಗುರು ಉರಿಲಿಂಗ ದೇವರ ಕಾರ್ಯಕ್ಷೇತ್ರ ಆಗಿತ್ತು. ಅಲ್ಲಿ ಅವರ ಮಂದಿರ ನಿರ್ಮಿಸಲಾಗುತ್ತಿದೆ. ಅವರು ಅನೇಕ ವಚನಗಳನ್ನು ಬರೆದು ಸಮಾಜಕ್ಕೆ ಮಾರ್ಗದರ್ಶನ ಮಾಡಿದ್ದು, ಅವುಗಳ ಪ್ರಚಾರ ಹಾಗೂ ಬಸವತತ್ವ ತಿಳಿಸುವ ಸದುದ್ದೇಶದಿಂದ ಯಾತ್ರೆ ಆಯೋಜಿಸಲಾಗುತ್ತಿದೆ. ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಇದಕ್ಕೆ ಸರ್ವ ರೀತಿಯಿಂದ ಸಹಕರಿಸುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

ಬಸವ ಕೇಂದ್ರದ ಅಧ್ಯಕ್ಷ ಆಕಾಶ ಖಂಡಾಳೆ ಮಾತನಾಡಿ, ‘ಸಮಾನತೆ, ಕಾಯಕ, ದಾಸೋಹ ತತ್ವದ ಪ್ರಸಾರಕ್ಕಾಗಿ ಸಂಕಲ್ಪತೊಟ್ಟು ಪಾದಯಾತ್ರೆ ನಡೆಸುತ್ತಿರುವುದು ಅತ್ಯಂತ ಉತ್ತಮ ಕಾರ್ಯವಾಗಿದೆ. ಸಮಿತಿಯು ಮುಂದಿನ ದಿನಗಳಲ್ಲಿ ಒಂದು ಲಕ್ಷ ಜನರೊಂದಿಗೆ ಯಾತ್ರೆ ಹಮ್ಮಿಕೊಳ್ಳುವ ಉದ್ದೇಶ ಹೊಂದಿದ್ದು, ಅದಕ್ಕೆ ಸರ್ವ ರೀತಿಯಿಂದ ಸಹಕಾರ ನೀಡಲಾಗುವುದು. ಬಸವತತ್ವದವರು ಬರೀ ಮಾತು ಆಡುವುದಕ್ಕಿಂತ ಅವರ ಸಂದೇಶದ ಪಾಲನೆ ಮಾಡುವುದು ಅತ್ಯಂತ ಅವಶ್ಯವಾಗಿದೆ’ ಎಂದು ಹೇಳಿದರು.

ಸಾಹಿತಿ ರಾಜಶೇಖರ ಸೊಲಪುರೆ, ನೀಲಕಂಠ ಪಾಟೀಲ ಸಾತಬಿಡಕರ, ಬಸವರಾಜ ಗುಡಪೆ, ಸಂಗೀತಾತಾಯಿ ಬೇಂದ್ರೆಕರ ಮಾತನಾಡಿದರು. ಬಸವದೇವರು, ಬಸವರಾಜ ಕಣಜೆ, ಹಣಮಂತ ಔರಾದೆ, ಪಂಚಯ್ಯ ಸ್ವಾಮಿ, ಸಂಜೀವಕುಮಾರ ಭೈರೆ, ಸಂತೋಷ ಮಲಶೆಟ್ಟಿ, ನಾಗೇಶ ಜೀವಣೆ ಉಪಸ್ಥಿತರಿದ್ದರು.

12 ವರ್ಷಗಳಿಂದ ಪಾದಯಾತ್ರೆ

ಶರಣಶ್ರೇಷ್ಠ ಉರಿಲಿಂಗ ಪೆದ್ದಿ ಅವರ ಜಯಂತಿ ಅಂಗವಾಗಿ ಅವರ ಕಾರ್ಯಕ್ಷೇತ್ರವಾದ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಕಂಧಾರ ಪಟ್ಟಣದಿಂದ ಶರಣ ಕ್ಷೇತ್ರ ಬಸವಕಲ್ಯಾಣದವರೆಗೆ 12 ವರ್ಷಗಳಿಂದ ಪ್ರತಿವರ್ಷ ಪಾದಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ. ಮಹಾರಾಷ್ಟ್ರದಿಂದ ಹುಲಸೂರ ಬೇಲೂರ ಬೆಟಬಾಲ್ಕುಂದಾ ಮಾರ್ಗವಾಗಿ ಯಾತ್ರೆ ಬಂತು. ಬಸವಭಾರತಿ ಅನುಭವ ಮಂಟಪ ಸಮಿತಿ ಮಹಾರಾಷ್ಟ್ರದ ಅಧ್ಯಕ್ಷ ಶಿವಾನಂದ ಹೈಬತಪುರೆ ನೇತೃತ್ವದಲ್ಲಿ ನಡೆದ ಈ ಯಾತ್ರೆಯಲ್ಲಿ 180 ಮಹಿಳೆಯರು ಒಳಗೊಂಡು 340 ಜನರು ಪಾಲ್ಗೊಂಡಿದ್ದರು. ಯಾತ್ರೆಯಲ್ಲಿ ಪಾಲ್ಗೊಂಡಿರುವ ಹಾಗೂ ವಿವಿಧ ಕ್ಷೇತ್ರದ 18 ಜನ ಸಾಧಕರಿಗೆ ಬಸವ ಪ್ರಬೋಧನಕಾರ ಬಸವರತ್ನ ಮತ್ತು ಬಸವಭೂಷಣ ಪ್ರಶಸ್ತಿ ನೀಡಲಾಯಿತು.