ADVERTISEMENT

ಬೀದರ್: ಶರಣರ ತ್ಯಾಗ ಸ್ಮರಣೆಗೆ ‘ವಚನ ವಿಜಯೋತ್ಸವ’

ಬಸವಗಿರಿಯಲ್ಲಿ ಜ. 30ರಿಂದ ಮೂರು ದಿನ ಕಾರ್ಯಕ್ರಮ; ವಚನ ಸಾಹಿತ್ಯಕ್ಕೆ ಪಟ್ಟಾಭಿಷೇಕ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 7:18 IST
Last Updated 28 ಜನವರಿ 2026, 7:18 IST
ಬೀದರ್‌ನಲ್ಲಿ ಮಂಗಳವಾರ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಗಂಗಾಂಬಿಕಾ ಅಕ್ಕ ಹಾಗೂ ಪ್ರಮುಖರು ವಚನ ವಿಜಯೋತ್ಸವದ ಪೋಸ್ಟರ್‌ ಬಿಡುಗಡೆಗೊಳಿಸಿದರು
ಬೀದರ್‌ನಲ್ಲಿ ಮಂಗಳವಾರ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಗಂಗಾಂಬಿಕಾ ಅಕ್ಕ ಹಾಗೂ ಪ್ರಮುಖರು ವಚನ ವಿಜಯೋತ್ಸವದ ಪೋಸ್ಟರ್‌ ಬಿಡುಗಡೆಗೊಳಿಸಿದರು   

ಬೀದರ್‌: ‘ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ನಗರದ ಬಸವಗಿರಿಯಲ್ಲಿ ಜ. 30ರಿಂದ ಫೆಬ್ರುವರಿ 1ರ ವರೆಗೆ 24ನೇ ವಚನ ವಿಜಯೋತ್ಸವ ಹಮ್ಮಿಕೊಳ್ಳಲಾಗಿದೆ. ವಚನ ಸಾಹಿತ್ಯದ ಸಂರಕ್ಷಣೆಗೆ ಬಸವಾದಿ ಶರಣರು ಮಾಡಿದ ತ್ಯಾಗದ ಸ್ಮರಣೆಗೆ ಪ್ರತಿ ವರ್ಷ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ’ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಗಂಗಾಂಬಿಕಾ ಅಕ್ಕ ತಿಳಿಸಿದರು.

‘ಬಸವಾದಿ ಶರಣ ವಚನಗಳು, ಮನುಷ್ಯನ ಬದುಕಿನ ದಾರಿಯಲ್ಲಿ ಹಚ್ಚಿಟ್ಟ ದೀಪಗಳು. ಸಮಾನತೆ, ಸಹಕಾರ, ಸಹಬಾಳ್ವೆ, ಸಾಮಾಜಿಕ ನ್ಯಾಯ ಹಾಗೂ ಮಾನವೀಯತೆಯ ಧರ್ಮದ ನುಡಿ ರಚನೆಗಳು. 12ನೇ ಶತಮಾನದ ಶರಣರ ಸ್ವಾನುಭಾವದಿಂದ ಮೂಡಿ ಬಂದಿರುವ ಈ ಶ್ರೇಷ್ಠ ನುಡಿಗಳು ಇಂದು ನಮಗೆ ಉಳಿದು ಬಂದಿದ್ದೇ ರೋಚಕ ಸಂಗತಿ. ಶರಣರ ಬಲಿದಾನ ಹಾಗೂ ವೀರಗಾಥೆಯ ಕಾರ್ಯಗಳಿಂದ ಉಳಿದು ಬಂದಿರುವ ‘ವಚನ ಸಾಹಿತ್ಯ ಸಂರಕ್ಷಣೆ’ಯ ತ್ಯಾಗ ಮೆಲುಕು ಹಾಕುವುದು ನಮ್ಮೆಲ್ಲರ ಕರ್ತವ್ಯ’ ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ಕಾರ್ಯಕ್ರಮ ನಡೆಯಲಿರುವ ಪ್ರಧಾನ ಕಾರ್ಯಕ್ರಮದ ಮಹಾಮಂಟಪಕ್ಕೆ ಇತ್ತೀಚೆಗೆ ನಿಧನರಾದ ಮಾಜಿ ಸಚಿವಭೀಮಣ್ಣ ಖಂಡ್ರೆಯವರ ಹೆಸರಿಡಲಾಗಿದೆ. ಹತ್ತು ಸಾವಿರ ಜನರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ನಿರಂತರವಾಗಿ ದಾಸೋಹ ನಡೆಯಲಿದೆ ಎಂದು ವಿವರಿಸಿದರು.

ADVERTISEMENT

ಜ. 30ರಂದು ಬೆಳಿಗ್ಗೆ 8ಕ್ಕೆ ಸಾಮೂಹಿಕ ಇಷ್ಟಲಿಂಗ ಪೂಜಾಯೋಗ ಜರುಗುವುದು. ಅಂದು ಬೆಳಿಗ್ಗೆ 11ಕ್ಕೆ ನಡೆಯಲಿರುವ ಕಾರ್ಯಕ್ರಮವನ್ನು ತೆಲಂಗಾಣದ ವಾರಂಗಲಿನ ಪಾಲಕುರಿಕೆ ಸೋಮನಾಥ ಕಲಾ ಪೀಠದ ಅಧ್ಯಕ್ಷ ರೂಪಾಲು ಸತ್ಯನಾರಾಯಣ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿಗಳಾದ ಎಸ್‌.ಜಿ. ಸಿದ್ದರಾಮಯ್ಯ ಹಾಗೂ ಬಸವರಾಜ ಸಬರದ ವಿಚಾರ ವ್ಯಕ್ತಪಡಿಸುವರು. ಮಧ್ಯಾಹ್ನ 3ಕ್ಕೆ ಸ್ತ್ರೀ ಶಕ್ತಿ ಸಮಾವೇಶ ನಡೆಯಲಿದ್ದು, ವೈದ್ಯೆ ಡಾ. ವಿಜಯಲಕ್ಷ್ಮಿ ದೇಶಮಾನೆ ಉದ್ಘಾಟಿಸುವರು. ಚಿತ್ರದುರ್ಗದ ಬಸವತತ್ವ ಚಿಂತಕಿ ಡಿ.ಶಬ್ರಿನಾ ಅನುಭಾವ ನೀಡುವರು. ಸಂಜೆ 6ಕ್ಕೆ ‘ಶಿವಯೋಗಿ ಸಿದ್ದರಾಮೇಶ್ವರ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.

ಜ.31 ರಂದು ಬೆಳಿಗ್ಗೆ 8ಕ್ಕೆ ಸಾಮೂಹಿಕ ವಚನ ಪಾರಾಯಣ ನಡೆಯಲಿದೆ. ವಿವಿಧ ಶಾಲೆಗಳ 1,008 ಮಕ್ಕಳು ಭಾಗವಹಿಸುವರು. ಮಧ್ಯಾಹ್ನ 2.30ಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗೌರವಿಸಲಾಗುವುದು. ಮಧ್ಯಾಹ್ನ 3ಕ್ಕೆ ಧರ್ಮ ಚಿಂತನಗೋಷ್ಠಿ ಜರುಗಲಿದೆ. ಸಂಜೆ 6ಕ್ಕೆ ಕಲಾ ವೈಭವ–ವಚನ ನೃತ್ಯೋತ್ಸವ, ಯಕ್ಷಗಾನ ನಡೆಯಲಿದೆ ಎಂದರು.

ಫೆ. 1ರಂದು ಬೆಳಿಗ್ಗೆ 9ಕ್ಕೆ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ವಚನ ಸಾಹಿತ್ಯಕ್ಕೆ ಪಟ್ಟಾಭಿಷೇಕ ನಡೆಯಲಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್‌ ಉದ್ಘಾಟಿಸುವರು. ಮಾರ್ಕಂಡೇಯ ದೊಡಮನಿ, ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಸಿ.ಸೋಮಶೇಖರ ಅವರಿಗೆ ಗುರುಬಸವ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ ಎಂದು ಹೇಳಿದರು.

ವಚನ ವಿಜಯೋತ್ಸವದ ಅಂಗವಾಗಿಯ ಮಹಿಳಾ ವಚನಾ ಭಜನಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಲ್ಲಿ 18 ಭಜನಾ ತಂಡಗಳ 300 ಜನ ಪಾಲ್ಗೊಂಡಿದ್ದರು. ಗುಂಪಾ ಅಲ್ಲಮಪ್ರಭು ಭಜನಾ ತಂಡ ಪ್ರಥಮ, ಧ್ಯಾನ ಮಂದಿರ ಸತ್ಸಂಗ ಭಜನಾ ತಂಡ ದ್ವಿತೀಯ ಹಾಗೂ ಹುಲಸೂರು ಅಕ್ಕನ ಬಳಗ ತಂಡ ತೃತೀಯ ಬಹುಮಾನ ಪಡೆದಿದೆ. ಕ್ರಮವಾಗಿ ₹15, ₹10 ಹಾಗೂ ₹5 ಸಾವಿರ ನಗದು ಬಹುಮಾನ, ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಗುವುದು ಎಂದರು.

ಹಿರಿಯ ಚಿಂತಕ ಸಿದ್ದಣ್ಣ ಲಂಗೋಟಿ, ಪ್ರಮುಖರಾದ ಬಸವರಾಜ ಬುಳ್ಳಾ, ಸೋಮಶೇಖರ ಪಾಟೀಲ ಗಾದಗಿ, ರಾಜೇಂದ್ರಕುಮಾರ ಗಂದಗೆ, ಶರಣಪ್ಪ ಮಿಠಾರೆ, ಚಂದ್ರಕಾಂತ ಮಿರ್ಚೆ, ಸುರೇಶ ಚನಶೆಟ್ಟಿ, ಬಾಬು ವಾಲಿ, ರಾಜಕುಮಾರ ಟಿಳ್ಳೆಕರ್, ಆದೀಶ ವಾಲಿ, ವಿಶ್ವನಾಥ ಕಾಜಿ, ಜಯರಾಜ ಖಂಡ್ರೆ, ವಿಜಯಲಕ್ಷ್ಮೀ ಸುಲೇಪೇಟ್, ಶಿವಶಂಕರ ಟೋಕರೆ ಹಾಜರಿದ್ದರು.

ವಚನ ವಿಜಯೋತ್ಸವ ಇದು ಬೀದರ್‌ ಹಬ್ಬ. ಬಸವ ಸೇವಾ ಪ್ರತಿಷ್ಠಾನದ ನೇತೃತ್ವದಲ್ಲಿ ಎಲ್ಲ ಬಸವಪರ ಸಂಘಟನೆಗಳು ಸೇರಿ ಆಯೋಜಿಸಿವೆ.
– ಬಸವರಾಜ ಬುಳ್ಳಾ, ಮುಖಂಡ
ವಚನಗಳು ಸಾಹಿತ್ಯಕ್ಕೆ ಸೀಮಿತವಲ್ಲ. ಅವುಗಳಲ್ಲಿ ಜೀವನದ ಮೌಲ್ಯಗಳಿವೆ. ಜಾತಿ ಮತ ಪಂಥದ ಭೇದವಿಲ್ಲ. ವಚನಗಳಲ್ಲಿ ಬದುಕಿನ ಶೋಧ ಇದೆ.
– ಶರಣಪ್ಪ ಮಿಠಾರೆ, ಅಧ್ಯಕ್ಷ ಬಸವ ಕೇಂದ್ರ

ಇಂದು ಕಾರು ರ್‍ಯಾಲಿ; ಫೆ. 1ಕ್ಕೆ ವಚನ

ಸಾಹಿತ್ಯದ ಮೆರವಣಿಗೆ ವಚನ ವಿಜಯೋತ್ಸವದ ಅಂಗವಾಗಿ ಬುಧವಾರ (ಜ.28) ಬೆಳಿಗ್ಗೆ 9ಕ್ಕೆ ನಗರದ ಮನ್ನಳ್ಳಿ ರಸ್ತೆಯ ಚಿದಂಬರಾಶ್ರಮದಿಂದ ಬಸವಗಿರಿ ವರೆಗೆ ಕಾರುಗಳ ರ್‍ಯಾಲಿ ಜರುಗಲಿದೆ ಎಂದು ಮೆರವಣಿಗೆ ಸಮಿತಿ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ತಿಳಿಸಿದರು. ಫೆಬ್ರುವರಿ 1ರಂದು ಬೆಳಿಗ್ಗೆ 9ಕ್ಕೆ ನಗರದ ಬಸವೇಶ್ವರ ವೃತ್ತದಿಂದ ಬಸವಗಿರಿವರೆಗೆ ಲಿಂಗಾಯತ ಧರ್ಮ ವಚನ ಸಾಹಿತ್ಯ ಹಾಗೂ 11 ಅಡಿ ಎತ್ತರದ ಬಸವೇಶ್ವರರ ಪುತ್ಥಳಿ ಮೆರವಣಿಗೆ ನಡೆಯಲಿದೆ. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮೆರವಣಿಗೆಗೆ ಚಾಲನೆ ನೀಡುವರು. ಶರಣ–ಶರಣೆಯರು ಮೆರವಣಿಗೆಯಲ್ಲಿ ಗುರುವಚನ ತಲೆ ಮೇಲೆ ಹೊತ್ತು ಹೆಜ್ಜೆ ಹಾಕುವರು. ಪುಣೆ ಕೊಲ್ಲಾಪುರ ಸೇರಿದಂತೆ ವಿವಿಧ ಕಡೆಗಳಿಂದ ಕಲಾ ತಂಡಗಳನ್ನು ಕರೆಸಲಾಗುತ್ತಿದೆ ಎಂದು ವಿವರಿಸಿದರು.

ವಿಶ್ವಕಲ್ಯಾಣ ಯುವ ಪರಿಷತ್‌ಗೆ ಚಾಲನೆ

ಜ. 31ರಂದು ಬೆಳಿಗ್ಗೆ 11ಕ್ಕೆ ಯುವ ಶಕ್ತಿ ಸಮಾವೇಶ ಹಾಗೂ ವಿಶ್ವಕಲ್ಯಾಣ ಯುವ ಪರಿಷತ್‌ ಉದ್ಘಾಟನೆಯನ್ನು ಸಂಸದ ಸಾಗರ ಖಂಡ್ರೆ ನೆರವೇರಿಸುವರು. ಬೆ. 11ಕ್ಕೆ ಯುವ ಶಕ್ತಿ ಸಮಾವೇಶ ಜರುಗಲಿದ್ದು ಸಂಸದ ಸಾಗರ ಖಂಡ್ರೆ ಉದ್ಘಾಟಿಸುವರು. ಇಸ್ರೋ ಉಪನಿರ್ದೇಶಕಿ ಕೆ.ಎಲ್.ಶಿವಾನಿ ಇವರಿಗೆ ‘ಶರಣ ವಿಜ್ಞಾನಿ’ ಪುರಸ್ಕಾರ ಪ್ರದಾನ ಮಾಡಲಾಗುವುದು. ಶರಣರ ಸಂದೇಶಗಳನ್ನು ಯುವಜನತೆಯಲ್ಲಿ ಬಿತ್ತುವುದಕ್ಕಾಗಿ ಯುವಕರ ಸಂಘಟನೆಗೆ ವಿಶ್ವಕಲ್ಯಾಣ ಯುವ ಪರಿಷತ್‌ ಸ್ಥಾಪಿಸಲಾಗುತ್ತಿದೆ ಎಂದು ಗಂಗಾಂಬಿಕಾ ಅಕ್ಕ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.