ಹುಮನಾಬಾದ್: ಪಟ್ಟಣದ ವೀರಭದ್ರೇಶ್ವರ ದೇವಸ್ಥಾನ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ದುಷ್ಟರ ಸಂಹಾರಕ, ಶಿಷ್ಟರ ಪರಿಪಾಲಕನಾದ ವೀರಭದ್ರೇಶ್ವರ ದೇವರು ನೆಲೆನಿಂತ ಈ ಸ್ಥಳ ಪಾವನ ಪುಣ್ಯಕ್ಷೇತ್ರವಾಗಿ ರೂಪಗೊಂಡಿದೆ. ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಹೊರ ರಾಜ್ಯಗಳ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ವೀರಶೈವ ಲಿಂಗಾಯತ ಸಮುದಾಯದ ಬಹುಪಾಲು ಜನ ವೀರಭದ್ರೇಶ್ವರ ದೇವರನ್ನು ಸ್ಮರಿಸುತ್ತಾರೆ.
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಡೆಯುತ್ತದೆ. ಆದರೆ, ಇಲ್ಲಿನ ಜನರಿಗೆ ವೀರಭದ್ರೇಶ್ವರ ಜಾತ್ರೆ ಎಂದರೆ ನೆನಪಾಗುವುದು ಹುಮನಾಬಾದ್ ಪಟ್ಟಣ ಮಾತ್ರ. ವಿಜಯನಗರ ಅರಸರ ಕಾಲದಲ್ಲೂ ವೀರಭದ್ರೇಶ್ವರರನ್ನು ಯುದ್ಧದ ಆದಿ ದೇವರನ್ನಾಗಿ ಪೂಜಿಸಲಾಗುತ್ತಿತ್ತು ಎಂಬುದಕ್ಕೆ ಇತಿಹಾಸದಲ್ಲಿ ಉಲ್ಲೇಖವಿದೆ.
ಈಗಲೂ ಹಂಪಿಯಲ್ಲಿ ಉದ್ದಾನ ವೀರಭದ್ರ ಎಂಬ ಪ್ರಸಿದ್ಧ ದೇವಾಲಯವಿದೆ. ಅನಾದಿಕಾಲದಿಂದಲೂ ವೀರಭದ್ರ ಕೋಟಿ ಕೋಟಿ ಭಕ್ತರ ಪಾಲಿಗೆ ಆರಾಧ್ಯ ದೇವರಾಗಿ ಭಕ್ತರ ಇಷ್ಟಾರ್ಥ ನೆರವೇರಿಸುವ ಕಲ್ಪವೃಕ್ಷವಾಗಿದ್ದಾನೆ. 108 ಮಠಗಳ ಐತಿಹಾಸಿಕ ಹಿನ್ನೆಲೆ ಹೊಂದಿರುವ ಅಂದಿನ ಜಯಸಿಂಹ ನಗರವೇ ಇಂದಿನ ಹುಮನಾಬಾದ್ ಪಟ್ಟಣ. ರಾಜ್ಯದಲ್ಲಿಯೇ 108 ಮಠ ಹೊಂದಿದ ಏಕೈಕ ಪಟ್ಟಣ ಎಂದು ಅನೇಕ ಇತಿಹಾಸಕಾರರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.