ಬೀದರ್: ನಗರದ ಹಲವು ಸಂಘ ಸಂಸ್ಥೆ, ಶಾಲಾ–ಕಾಲೇಜುಗಳಲ್ಲಿ ಗುರುವಾರ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಸಸಿಗಳನ್ನು ನೆಟ್ಟು, ನೀರೆರೆದು ಅವುಗಳನ್ನು ಪೋಷಿಸಿ ಬೆಳೆಸುವ ಸಂಕಲ್ಪ ಮಾಡಿದರು. ಸಸಿಗಳನ್ನು ವಿತರಿಸಿದರು. ವಿವಿಧ ಕಡೆ ನಡೆದ ಪರಿಸರ ದಿನಾಚರಣೆಯ ವಿವರ ಕೆಳಗಿನಂತಿದೆ.
ಕವಿರತ್ನ ಕಾಳಿದಾಸ ಪ್ರಥಮ ದರ್ಜೆ ಕಾಲೇಜು:
ಡಿ.ದೇವರಾಜ ಅರಸು ಶಿಕ್ಷಕರ ತರಬೇತಿ ಕೇಂದ್ರದ ಸೂಪರಿಟೆಂಡೆಂಟ್ ವೈಜಿನಾಥ ಬಿರಾದಾರ ಉದ್ಘಾಟಿಸಿ, ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ಎಲ್ಲರೂ ಪರಿಸರ ರಕ್ಷಣೆಗೆ ಪಣ ತೊಡಬೇಕು ಎಂದರು.
ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ರಾಜಕುಮಾರ ರಾಠೋಡ್, ಪ್ರಾಂಶುಪಾಲ ಗಿರಿರಾವ್ ಕುಲಕರ್ಣಿ, ಗ್ರಂಥಪಾಲಕ ವೈಜಿನಾಥ ಎಮ್.ಗೌಡನಗುರು, ದೈಹಿಕ ನಿರ್ದೇಶಕ ಓಂಕಾರ ಮಾಶೆಟ್ಟಿ ಹಾಜರಿದ್ದರು.
ಬಸವೇಶ್ವರ ಶಿಕ್ಷಣ ಕಾಲೇಜು:
ಪ್ರಾಚಾರ್ಯ ಮಲ್ಲಿಕಾರ್ಜುನ ಚ. ಕನಕಟ್ಟೆ ಮಾತನಾಡಿ, ಪರಿಸರ ಉತ್ತಮವಾಗಿದ್ದರೆ ಆರೋಗ್ಯಕರ ಜೀವನ ಸಾಗಿಸಬಹುದು. ಪ್ರಾಣಿ, ಪಕ್ಷಿಗಳು ಸೇರಿದಂತೆ ಪ್ರತಿಯೊಂದು ಜೀವ ಸಂಕುಲ ಆಹಾರ, ಗಾಳಿ, ನೀರು ಇತರೆ ಅಗತ್ಯೆಗಳಿಗಾಗಿ ಪರಿಸರ ಅವಲಂಬಿಸಿದೆ. ಪ್ಲಾಸ್ಟಿಕ್ ಮಾಲಿನ್ಯ ದೂರವಾಗಿಸಿ ಪರಿಸರವನ್ನು ರಕ್ಷಿಸಬೇಕು ಎಂದರು.
ಸಹಾಯಕ ಪ್ರಾಧ್ಯಾಪಕ ವೀಣಾ ಎಸ್. ಜಲಾದೆ, ಪ್ರಾಧ್ಯಾಪಕರಾದ ಸಂತೋಷಕುಮಾರ ಸಜ್ಜನ್, ಶಿಲ್ಪಾ ಹಿಪ್ಪರಗಿ, ರಾಜಕುಮಾರ ಸಿಂಧೆ, ಸಿದ್ದರಾಮ ಎಸ್. ನೆಂಗಾ, ಪಾಂಡುರಂಗ ಕುಂಬಾರ, ಸಿಬ್ಬಂದಿ ಸಂಗೀತಾ ಪಾಟೀಲ, ಸುವರ್ಣಾ ಪಾಟೀಲ, ಪುಷ್ಪಾವತಿ, ರೇವಣಪ್ಪ ಹಾಜರಿದ್ದರು.
ವಿದ್ಯಾರಣ್ಯ ಪ್ರೌಢ ಶಾಲೆ:
ವಲಯ ಅರಣ್ಯ ಅಧಿಕಾರಿ ಶಿವಕುಮಾರ ರಾಠೋಡ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ಕನಿಷ್ಠ ಒಂದು ಸಸಿ ನೆಟ್ಟು, ಅದನ್ನು ಪೋಷಿಸಬೇಕು. ಭಾರತದಲ್ಲಿ ಶೇ 33ರಷ್ಟು ಅರಣ್ಯ ಪ್ರದೇಶ ಇರಬೇಕು. ಆದರೆ, ಶೇ 21ರಷ್ಟಿದೆ ಎಂದರು.
ವಿದ್ಯಾರ್ಥಿ ಶಿವಾನಂದ ಗಾದಗಿ ವಿಶ್ವ ಪರಿಸರ ದಿನಾಚರಣೆಯ ಮಹತ್ವ ಕುರಿತು ಭಾಷಣ ಮಾಡಿದ. ಸಂಸ್ಥೆಯ ಅಧ್ಯಕ್ಷ ಪ್ರೊ. ಎಸ್.ಬಿ.ಸಜ್ಜನಶೆಟ್ಟಿ, ಸಂಸ್ಥೆಯ ಉಪಾಧ್ಯಕ್ಷೆ ನಾಗೇಶರೆಡ್ಡಿ, ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ವೀಣಾ ಜಲಾದೆ, ಮುಖ್ಯಶಿಕ್ಷಕಿ ಪ್ರತಿಭಾ ಚಾಮಾ, ಪುಷ್ಪಕ ಜಾಧವ, ಶಿವಪುತ್ರ ನೇಳಗೆ, ಬಾಲಾಜಿ ರಾಠೋಡ್ ಪಾಲ್ಗೊಂಡಿದ್ದರು.
ಎಫ್ಪಿಎಐ, ಜಾಯ್ ಪಬ್ಲಿಕ್ ಶಾಲೆ:
ಉದ್ಘಾಟನೆ ನೆರವೇರಿಸಿದ ಎಫ್ಪಿಎಐ ಸಂಸ್ಥೆಯ ಸದಸ್ಯೆ ಡಾ. ನೀತಾ ಬೆಲ್ದಾಳೆ ಮಾತನಾಡಿ, ಪರಿಸರವೇ ಸಕಲ ಜೀವಿಗಳಿಗೆ ಜೀವನಾಧಾರ. ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಇಂದಿನ ಮಕ್ಕಳಿಗೆ ಪರಿಸರ ಸಂರಕ್ಷಣೆ ಮಹತ್ವ ಹಾಗೂ ಪ್ಲಾಸ್ಟಿಕ್ ಬಳಸದಂತೆ ತಿಳಿವಳಿಕೆ ಮೂಡಿಸಬೇಕು ಎಂದರು.
ಪೊಲೀಸ್ ಅಧಿಕಾರಿ ಅಮೋಲ್ ಕಾಳೆ, ಎಫ್ಪಿಎಐ ಕಾರ್ಯಕಾರಿಣಿ ಸದಸ್ಯ ಸುಬ್ರಹ್ಮಣ್ಯ ಪ್ರಭು, ಶಾಖಾ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ, ಜಾಯ್ ಪಬ್ಲಿಕ್ ಶಾಲೆಯ ಅಧ್ಯಕ್ಷೆ ಸಂಧ್ಯಾರಾಣಿ ಪಾಟೀಲ, ಆರತಿ ಕುಲಕರ್ಣಿ ಮತ್ತಿತರರು ಹಾಜರಿದ್ದರು.
ಸರ್ಕಾರಿ ಪಾಲಿಟೆಕ್ನಿಕ್:
ಪ್ರಾಚಾರ್ಯ ವಿಜಯಕುಮಾರ್ ಜಾಧವ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ಅದನ್ನು ಸಂರಕ್ಷಿಸುವುದು ಕೂಡ ಅಷ್ಟೇ ಮುಖ್ಯ ಎಂದು ಪ್ರಾಚಾರ್ಯ ವಿಜಯಕುಮಾರ ಜಾಧವ ಹೇಳಿದರು.
ಕಮರ್ಷಿಯಲ್ ಪ್ರ್ಯಾಕ್ಟೀಸ್ ವಿಭಾಗದ ಮುಖ್ಯಸ್ಥ ಬಕ್ಕಪ್ಪ ನಿರ್ಣಾಕರ, ಸಂಸ್ಥೆಯ ಸಿಬ್ಬಂದಿ ಶೈಲಜಾ ಶಾಮರಾವ್, ಶಿವಕುಮಾರ ಕಟ್ಟೆ, ಸಂತೋಷ, ಮಹೇಶ ಶೇಗೆದಾರ, ಎನ್.ಎಸ್.ಎಸ್.ಅಧಿಕಾರಿ ಅರುಣ್ ಮೊಕಾಶಿ, ತಾನಾಜಿ ಬಿರಾದಾರ, ವಕೀಲ್ ಪಟೇಲ್, ಸಂಜುಕುಮಾರ, ಭಗವಾನ ಮತ್ತಿತರರು ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಬೀದರ ನ್ಯೂ ಸೆಂಚುರಿ, ಬಸವಗಿರಿ:
ಸಿಂಗಪೂರ ಚೆರ್ರಿ ಸಸಿಗಳನ್ನು ನೆಟ್ಟು ಮಾತನಾಡಿದ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಮಾನವನ ಸ್ವಾರ್ಥದಿಂದ ಪರಿಸರ ಅಳಿವಿನಂಚಿಗೆ ಹೋಗುತ್ತಿದೆ. ಇದೇ ರೀತಿ ಮುಂದುವರೆದರೆ ಮುಂದಿನ ಪೀಳಿಗೆ ನಮಗೆ ಕ್ಷಮಿಸಲಾರದು ಎಂದರು.
ರೋಟರಿ ಕ್ಲಬ್ ಬೀದರ್ ನ್ಯೂ ಸೆಂಚುರಿ ಅಧ್ಯಕ್ಷ ಶಿವಕುಮಾರ ಪಾಖಾಲ, ಮಹಾಗನಿ, ಅರಳೆ, ಹಲಸು, ನೇರಳೆ, ಪೇರಲ, ನಿಂಬೆ ಸೇರಿದಂತೆ 100 ಸಸಿಗಳನ್ನು ಬಸಗಿರಿಯಲ್ಲಿ ನೆಡಲಾಗುತ್ತಿದೆ ಎಂದರು.
ರೋಟರಿ ಕಲ್ಯಾಣ ವಲಯದ ಸಹಾಯಕ ಗವರ್ನರ್ ಸೂರ್ಯಕಾಂತ ರಾಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಮೇಶ ಮಠಪತಿ, ಮಾಣಿಕಪ್ಪ ಗೋನಾಳೆ, ಅಶೋಕ ಎಲಿ, ಸಿ.ಎಸ್. ಗಣಾಚಾರಿ, ಪ್ರಕಾಶ ಮಠಪತಿ, ರವಿ, ರಾಹುಲ ಅಟ್ಟಲ್, ಚನ್ನಬಸವಣ್ಣ, ಪ್ರಭು ತಟಪಟ್ಟಿ ಹಾಜರಿದ್ದರು.
ಮಡಿವಾಳೇಶ್ವರ ಪ್ರೌಢ ಶಾಲೆ:
ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಂಚಾಲಿತ ಶಾಲೆಯಲ್ಲಿ ಸಸಿಗಳನ್ನು ನೆಟ್ಟು ಪರಿಸರ ದಿನ ಆಚರಿಸಲಾಯಿತು.
ಸಹಾಯಕ ತೋಟಗಾರಿಕೆ ಅಧಿಕಾರಿ ಸೇವಂತಿ, ಸಂಸ್ಥೆಯ ಕಾರ್ಯದರ್ಶಿ ಹನುಮಂತರಾವ್ ಪಾಟೀಲ, ಪ್ರೌಢ ಶಾಲೆ ಮುಖ್ಯಶಿಕ್ಷಕಿ ಶರಣು ಪಾಟೀಲ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಅರ್ಚನಾ ಶಿರಗಿರೆ, ತ್ರೀಶಾ ಸಿದ್ದೇಶ್ವರ, ವೈಷ್ಣವಿ ರಾಜೇಂದ್ರ ಪ್ರಸಾದ್, ಶ್ರದ್ಧಾ ನೀಲಕಂಠ ಪಾಲ್ಗೊಂಡಿದ್ದರು.
ಅಂಚೆ ಕಚೇರಿ:
ನಗರದ ಅಂಚೆ ಇಲಾಖೆಯ ಕಚೇರಿಯಲ್ಲಿ ಸಿಬ್ಬಂದಿಗೆ ಉಚಿತವಾಗಿ ಸಸಿಗಳನ್ನು ವಿತರಿಸಲಾಯಿತು.
ಅಂಚೆ ಸೂಪರಿಟೆಂಡೆಂಟ್ ವಿ.ಎಲ್. ಚಿತಕೋಟೆ ಸಿಬ್ಬಂದಿಗೆ ಸಸಿ ವಿತರಿಸಿದರು. ಕಚೇರಿ ಆವರಣದಲ್ಲಿ ಸಸಿಗಳನ್ನು ನೆಟ್ಟರು. ಅಂಚೆ ಸಿಬ್ಬಂದಿ ಪರಿಸರ ಸ್ನೇಹಿಯಾಗಿ ಬದುಕು ಸಾಗಿಸಬೇಕು. ತಮ್ಮ ಮನೆ ಪರಿಸರದಲ್ಲಿ ತಲಾ ಒಂದು ಸಸಿ ನೆಡಬೇಕು ಎಂದು ವಿ.ಎಲ್. ಚಿತಕೋಟೆ ಸಲಹೆ ಮಾಡಿದರು.
ಲೆಫ್ಟಿನೆಂಟ್ ಕರ್ನಲ್ ನಾಗರಾಜ, ಪ್ರಧಾನ ಅಂಚೆ ಪಾಲಕ ರಾಜೇಂದ್ರ ವಗ್ಗೆ, ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಗಲಾ ಭಾಗವತ್, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ವಿಜಯಕುಮಾರ ಫುಲೆ ಉಪಸ್ಥಿತರಿದ್ದರು.
ಕರ್ನಟಕ ಪದವಿ ಪೂರ್ವ ಕಾಲೇಜು:
ಪರಿಸರ ಸಂರಕ್ಷಣೆ ವರ್ಷಕ್ಕೊಮ್ಮೆ ಆಚರಿಸುವ ವಿಶ್ವ ಪರಿಸರ ದಿನಕ್ಕೆ ಸೀಮಿತವಾಗದೆ ನಿತ್ಯ ಪರಿಸರ ದಿನವಾಗಿ ಆಚರಿಸಬೇಕು ಎಂದು ಪ್ರಾಚಾರ್ಯ ಬಸವರಾಜ ಬಲ್ಲೂರ ಹೇಳಿದರು.
ಉಪ ಪ್ರಾಚಾರ್ಯೆ ರಾಜೇಶ್ವರಿ ಪಾಟೀಲ, ಉಪನ್ಯಾಸಕರಾದ ಗಣೇಶ ಥೋರೆ, ಸಚಿನ ವಿಶ್ವಕರ್ಮ, ಮಹೇಶ ಬಿರಾದಾರ ಹಾಜರಿದ್ದರು.
ರಾಣಿ ಕಿತ್ತೂರು ಚನ್ನಮ್ಮ ಪ್ರಾಥಮಿಕ ಶಾಲೆ:
ಪಶು ವಿವಿ ನಿವೃತ್ತ ನೌಕರರ ಒಕ್ಕೂಟದ ವೀರಭದ್ರಪ್ಪ ಉಪ್ಪಿನ ಅವರು ಮಕ್ಕಳಿಗೆ ಪರಿಸರದ ಮಹತ್ವ ವಿವರಿಸಿ ಪ್ರತಿಜ್ಞಾ ವಿಧಿ ಬೋಧಿಸಿದರು.
ರಮೇಶ ಕಪಲಾಪುರ, ಮುಖ್ಯ ಶಿಕ್ಷಕ ಸಂಗ್ರಾಮ ಚಾಮಾ, ಶಿಕ್ಷಕಿಯರಾದ ಮಾಲಾಶ್ರೀ ಹೆಡಗಾಪುರೆ, ಸುಜಾತ, ಭುವನೇಶ್ವರಿ, ಸುನೀತಾ, ಲಕ್ಷ್ಮಿ, ಮಹಾನಂದಾ, ಶಿವಪ್ರಿಯಾ ಉಪಸ್ಥಿತರಿದ್ದರು.
ಬಿ.ವಿ. ಭೂಮರಡ್ಡಿ ಕಾಲೇಜು:
ಕಾಲೇಜು ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ. ರಜನೀಶ್ ವಾಲಿ ಸಸಿಗೆ ನೀರೆರೆದು ಉದ್ಘಾಟಿಸಿ, ಮುಂದಿನ ಪೀಳಿಗೆಗೆ ಸ್ವಚ್ಛ, ಸುರಕ್ಷಿತ ಪ್ರಕೃತಿಯನ್ನು ತಲುಪಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಜಿಲ್ಲಾ ವಿಜ್ಞಾನ ಸಮಿತಿ ಅಧ್ಯಕ್ಷ ಬಾಬುರಾವ್ ದಾನಿ, ಪ್ರಾಧ್ಯಾಪಕರಾದ ಅನಿಲಕುಮಾರ ಅಣದೂರೆ, ಪೂಜಾ ಸೂರ್ಯವಂಶಿ, ಪಿ. ವಿಠ್ಠಲ ರೆಡ್ದಿ, ನ್ಯಾಷನಲ್ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆ ಹಾಗೂ ಸೈನಿಕ ಶಾಲೆಯ ಪ್ರಾಂಶುಪಾಲೆ ಡಾ. ಶ್ರೀಲತಾ ಜಿ. ಸ್ವಾಮಿ, ಮಲ್ಲಿಕಾರ್ಜುನ ಕೋಟೆ, ಪೃಥ್ವಿ ಸಾಲಿಮಠ, ಮಾರುತಿ ಭೀಮಣ್ಣ ಹಾಜರಿದ್ದರು. 60 ಸಸಿಗಳನ್ನು ಕಾಲೇಜು ಆವರಣದಲ್ಲಿ ನೆಡಲಾಯಿತು. 100 ಸಸಿಗಳನ್ನು ವಿದ್ಯಾರ್ಥಗಳಿಗೆ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.