ADVERTISEMENT

ಲೇಔಟ್‍ಗೆ ಯಡಿಯೂರಪ್ಪ ಹೆಸರು: ಆಕ್ಷೇಪ

ಬುಡಾ ಆಯುಕ್ತರಿಂದ ತಪ್ಪು ಮಾಹಿತಿ: ಅರವಿಂದಕುಮಾರ ಅರಳಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 17:07 IST
Last Updated 18 ಜೂನ್ 2021, 17:07 IST
ಅರವಿಂದಕುಮಾರ ಅರಳಿ
ಅರವಿಂದಕುಮಾರ ಅರಳಿ   

ಬೀದರ್: ಇಲ್ಲಿಯ ಗೋರನಳ್ಳಿಯ ಸರ್ವೇ ಸಂಖ್ಯೆ 22/1 ರ ಲೇಔಟ್‍ಗೆ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಅಭಯಕುಮಾರ ಅವರು ಬಿ.ಎಸ್. ಯಡಿಯೂರಪ್ಪ ಬಡಾವಣೆ ಎಂದು ಉಲ್ಲೇಖಿಸಿದ್ದಕ್ಕೆ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆಯುಕ್ತರು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಚರ್ಚೆಯಾದ ವಿಷಯ ಬಿಟ್ಟು ಜನತೆಗೆ ತಪ್ಪು ಮಾಹಿತಿ ಕೊಡುತ್ತಿರುವುದು ಖಂಡನಾರ್ಹ ಎಂದು ಹೇಳಿದ್ದಾರೆ.

ಸಭೆಯಲ್ಲಿ ಗೋರನಳ್ಳಿಯ ಸರ್ವೇ ಸಂಖ್ಯೆ 22/1 ರ ವಸತಿ ವಿನ್ಯಾಸದಲ್ಲಿ ಗಣೇಶ ವಿಸರ್ಜನೆಗೆ ಹೊಂಡ ನಿರ್ಮಾಣ ಮಾಡಲು ನಿರ್ಧಾರ ತೆಗೆದುಕೊಂಡಿರುವುದು ಸರಿಯಾಗಿದೆ. ಆದರೆ, ಜನವರಿ 4 ರಂದು ನಡೆದಿದ್ದ ಸಭೆಯಲ್ಲಿ ನಾನು ಹಾಗೂ ಶಾಸಕ ರಹೀಂಖಾನ್ ಲೇಔಟ್‍ಗೆ ಯಡಿಯೂರಪ್ಪ ಅವರ ಹೆಸರು ಇಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದೇವು. ಅದಾಗಿಯೂ ಪ್ರೊಸಿಡಿಂಗ್‍ನಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಬರೆಯಲಾಗಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ADVERTISEMENT

ಜೂನ್ 17 ರಂದು ನಡೆದ ಸಭೆಯಲ್ಲೂ ನಾನು ಹಾಗೂ ರಹೀಂಖಾನ್ ಏಕೆ ಈ ರೀತಿ ಪ್ರೊಸಿಡಿಂಗ್ ಮಾಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದೇವು. ವಿಷಯವನ್ನು ಮುಂದಿನ ಸಭೆಯಲ್ಲಿ ಚರ್ಚಿಸಲು ನಿರ್ಣಯಿಸಲಾಗಿತ್ತು. ಆದರೆ, ಆಯುಕ್ತರು ಪತ್ರಿಕಾ ಹೇಳಿಕೆಯಲ್ಲಿ ಬಿ.ಎಸ್. ಯಡಿಯೂರಪ್ಪ ಬಡಾವಣೆ ಎಂದು ಉಲ್ಲೇಖಿಸಿ ಅಧಿಕಾರ ದುರುಪಯೋಗ ಪಡೆಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸಭೆಯಲ್ಲಿ ಪಾಪನಾಶ ಕೆರೆ ಅಭಿವೃದ್ಧಿ ಜತೆಗೆ ಹಳ್ಳದಕೇರಿ(ಶಾಹೀನ್ ಕಾಲೇಜು ಎದುರುಗಡೆ)ಯ ಕೆರೆಯನ್ನೂ ಅಭಿವೃದ್ಧಿಪಡಿಸಲು ಪುನರ್ ಸರ್ವೇಗೆ ನಿರ್ಧರಿಸಲಾಗಿದೆ. ಆಯುಕ್ತರು ಅಭಿವೃದ್ಧಿ ವಿಷಯ ಬಿಟ್ಟು ರಾಜಕಾರಣ ಮಾಡಲು ಹೊರಟಿರುವುದು ವಿಷಾದನೀಯ. ಸಂಬಂಧಪಟ್ಟವರು ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.