ಕೃಷಿ ವಿಜ್ಞಾನಿಗಳು ಹುಮನಾಬಾದ್ ತಾಲ್ಲೂಕಿನ ನಂದಗಾಂವ್ ಗ್ರಾಮಕ್ಕೆ ಭೇಟಿ ನೀಡಿ ಉದ್ದು ಮತ್ತು ಹೆಸರು ಬೆಳೆಗಳಲ್ಲಿ ಕಾಣಿಸಿಕೊಂಡಿರುವ ಹಳದಿ ನಂಜು ರೋಗವನ್ನು ಪರಿಶೀಲಿಸಿದರು
ಬೀದರ್: ಉದ್ದು, ಹೆಸರು ಬೆಳೆಗಳಿಗೆ ಹಳದಿ ನಂಜು ರೋಗ ಬಾಧೆ ಕಂಡು ಬಂದಿರುವುದನ್ನು ಪತ್ತೆ ಹಚ್ಚಿರುವ ಐಸಿಎಆರ್–ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಅದನ್ನು ತಡೆಯಲು ರೈತರಿಗೆ ಕೆಲವು ಸಲಹೆ ನೀಡಿದ್ದಾರೆ.
ಹುಮನಾಬಾದ್ ತಾಲ್ಲೂಕಿನ ನಂದಗಾಂವ್ ಗ್ರಾಮಕ್ಕೆ ಭೇಟಿ ನೀಡಿ ಉದ್ದು ಮತ್ತು ಹೆಸರು ಬೆಳೆಗಳಲ್ಲಿ ಹಳದಿ ನಂಜು ರೋಗ ಇರುವುದು ಗುರುತಿಸಿದ್ದಾರೆ. ಹಳದಿ ನಂಜು ರೋಗ ಪಸರಿಸಲು ಬಿಳಿ ನೊಣ (ಬೆಮೆಸಿಯೊ ಟೇಬ್ಯಾಸಿ) ಕಾರಣವಾಗಿದೆ. ಈ ಕೀಟದ ಪ್ರೌಢ ಮತ್ತು ಅಪ್ಸರೆ ಕೀಟಗಳು ಗಿಡಗಳ ಎಲೆಗಳಿಂದ ಹಾಗೂ ಇತರೆ ಭಾಗಗಳಿಂದ ರಸ ಹೀರಿ ನೇರವಾಗಿ ಹಾಗೂ ತನ್ನ ಜೊಲ್ಲಿನ ಮೂಲಕ ಹಳದಿ ನಂಜು ರೋಗದ ವೈರಸ್ ನಂಜನವನ್ನು ಗಿಡದಲ್ಲಿ ಸೇರಿಸಿ ಪರೋಕ್ಷವಾಗಿ ಬಾಧೆ ಉಂಟುಮಾಡುತ್ತವೆ ಎಂದು ತಿಳಿಸಿದ್ದಾರೆ.
ಹಳದಿ ನಂಜು ರೋಗ ಬಾಧಿತ ಗಿಡಗಳನ್ನು ಹೊಲದಿಂದ ಕಿತ್ತು ಸುಟ್ಟು ನಾಶಪಡಿಸಿ ಹೊಲದಲ್ಲಿ ಪ್ರತಿ ಎಕರೆಗೆ 8 ರಿಂದ 10 ಹಳದಿ ಅಂಟು ಬಲೆಗಳನ್ನು ಬೆಳೆಗಳಿಗಿಂತ ಒಂದು ಅಡಿ ಮೇಲೆ ಇರುವಂತೆ ಹಾಕಬೇಕು. ಸಿಂಪರಣೆಗಾಗಿ ಅಂತರವ್ಯಾಪಿ ಕೀಟನಾಶಕ ಇಮಿಡಾಕ್ಲೋಪ್ರೀಡ್ 17.5 ಎಸ್ಎಲ್ 0.3 ಮಿ.ಲೀ ಅಥವಾ ಥಾಯೋಮೀಥ್ಯಾಕ್ಸಮ್ 0.3 ಗ್ರಾಂ ಅಥವಾ ಅಸಿಫೇಟ್ 1.0 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಪುನಃ 15 ದಿನಗಳ ನಂತರ ಇದೇ ರೀತಿ ಮಾಡಬೇಕು ಎಂದು ಸಲಹೆ ಮಾಡಿದ್ದಾರೆ.
ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರೂ ಆದ ವಿಜ್ಞಾನಿ ಬಾರಿಕರ ಉಮೇಶ, ಕೃಷಿ ಇಲಾಖೆಯ ಬೀದರ್ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ರಾಜಕುಮಾರ ಮತ್ತು ಕೃಷಿ ಅಧಿಕಾರಿ ಮಕರ್ ಹರ್ಷ ಅವರು ರೈತರ ಹೊಲಗಳಿಗೆ ಭೇಟಿ ಕೊಟ್ಟು ರೋಗ ಪತ್ತೆ ಹಚ್ಚಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.