ಬೀದರ್: ‘ಇಂದಿನ ಯುವಜನಾಂಗ ದುಶ್ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳುವ ಅಗತ್ಯ ಹೆಚ್ಚಿದ್ದು, ಅದಕ್ಕಾಗಿ ಹೆಚ್ಚಿನ ಜಾಗೃತಿ ಮೂಡಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಸಲಹೆ ಮಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶ್ರೀ ವಿಜಯ ಮಹಾಂತ ಎಜ್ಯುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ವ್ಯಸನಮುಕ್ತ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಇಂದಿನ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ದುಶ್ಚಟಗಳಿಗೆ ಒಳಗಾಗುತ್ತಿದ್ದಾರೆ. ಅವರಲ್ಲಿ ಅರಿವು ಮೂಡಿಸಬೇಕು. ಯುವಕರು ಧೂಮಪಾನ, ಮದ್ಯಪಾನ ಬಿಟ್ಟು ಆರೋಗ್ಯವಂತ ಜೀವನ ಕಟ್ಟಿಕೊಳ್ಳಬೇಕು. ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.
ಮೊಬೈಲ್, ಸಾಮಾಜಿಕ ಮಾಧ್ಯಮಗಳಿಂದ ದೂರವಿದ್ದು, ಶಿಕ್ಷಣ, ಕ್ರೀಡೆ, ಯೋಗಾಸನದಂತಹ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ದೇಶದ ಹಾಗೂ ಸಮಾಜದ ಒಳಿತಿಗಾಗಿ ಕೊಡುಗೆ ನೀಡಬೇಕು. ಜಿಲ್ಲೆಯಲ್ಲಿ ಗಿಡ-ಮರಗಳನ್ನು ಬೆಳೆಸಿ, ಹಸಿರು ಹೊದಿಕೆ ಹೆಚ್ಚಿಸಿ, ಪರಿಸರ ಸಂರಕ್ಷಣೆ ಮಾಡಬೇಕು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ಪ್ಲಾಸ್ಟಿಕ್ ಮುಕ್ತ ಜಿಲ್ಲೆಯಾಗಲು ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಮನೋ ವೈದ್ಯ ಡಾ. ರಾಘವೇಂದ್ರ ವಾಗೋಲ್ ಮಾತನಾಡಿ, ಮಾದಕ ವಸ್ತುಗಳ ಬಳಕೆಯಿಂದ ನಮ್ಮ ಮೆದುಳು ಹಾಗೂ ನರಮಂಡಲದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಾದಕ ವಸ್ತುಗಳು ಅಥವಾ ಮಾದಕ ದ್ರವ್ಯಗಳಾದ ತಂಬಾಕು ಉತ್ಪನ್ನಗಳು, ಅಲ್ಕೊಹಾಲ್, ಗಾಂಜಾ, ಹೆರಾಯಿನ್, ಕೊಕೇನ್, ಎಂಡಿಎಂಎ ಮುಂತಾದವು ಸೇರಿವೆ. ಕಾಲೇಜು ದಿನಗಳಲ್ಲಿ ಕುತೂಹಲಕ್ಕೆ ಸ್ನೇಹಿತರ ಪ್ರಚೋದನೆಯಿಂದ ಮಾದಕ ವಸ್ತುಗಳ ಬಳಕೆ ಪ್ರಾರಂಭವಾಗುತ್ತದೆ. ಆನಂತರ ಅದು ಹವ್ಯಾಸವಾಗಿ ಬದಲಾಗುತ್ತದೆ ಎಂದರು.
ಅದರ ಬಳಕೆ ಹೆಚ್ಚಾದಂತೆಲ್ಲಾ ನಮ್ಮ ದೇಹದ ಮೇಲೆ ದುಷ್ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ನಂತರ ಇದಕ್ಕೆ ದಾಸರಾಗಿ ವ್ಯಸನಕ್ಕೆ ಒಳಗಾಗುತ್ತಾರೆ. ಈ ಹಂತದಲ್ಲಿ ಇದರಿಂದ ಹೊರಕ್ಕೆ ಬರುವುದು ಹೆಚ್ಚು ಕಷ್ಟವಾಗುತ್ತದೆ. ಕ್ಯಾನ್ಸರ್ ಮತ್ತು ಇತರೆ ರೋಗಗಳು ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಆದಕಾರಣ ದುಶ್ಚಟಗಳಿಂದ ದೂರವಿರಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ , ವಿಜಯ ಮಹಾಂತ ಎಜ್ಯುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ರಾಚಪ್ಪ ಮಾಶೆಟ್ಟಿ, ವಾಣಿಜ್ಯ ತೆರಿಗೆ ಅಧಿಕಾರಿಗಳಾದ ಮಹೇಶ ಮಾಶೆಟ್ಟಿ, ಪ್ರಶಾಂತ ಮಾಶೆಟ್ಟಿ, ಪದವಿ ಕಾಲೇಜಿನ ಪ್ರಾಂಶುಪಾಲೆ ಸ್ವಪ್ನಾ ಮಾಶೆಟ್ಟಿ, ಕಸಾಪ ಕೋಶಾಧ್ಯಕ್ಷ ಶಿವಶಂಕರ ಟೋಕರೆ, ಪ್ರಾಂಶುಪಾಲ ಚನ್ನಬಸವ ಹೆಡೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಿಜಯಕೃಷ್ಣ ಸೋಲಪೂರ ಇದ್ದರು.
'ಮಹಾಂತ ಜೋಳಿಗೆ ದುಶ್ಚಟಗಳ ಭಿಕ್ಷೆ' ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆಯನ್ನು ರಾಜ್ಯ ಸರ್ಕಾರ ವ್ಯಸನ ಮುಕ್ತ ದಿನಾಚರಣೆ ರೂಪದಲ್ಲಿ ಆಚರಿಸುತ್ತಿದೆ. ಮಹಾಂತ ಶಿವಯೋಗಿಗಳು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಆಗಸ್ಟ್ 1 1930ರಲ್ಲಿ ಜನಿಸಿದ್ದರು. 1970ರಲ್ಲಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ದೃಢ ಸಂಕಲ್ಪ ತೊಟ್ಟು 1974ರಲ್ಲಿ 'ಮಹಾಂತ ಜೋಳಿಗೆ ದುಶ್ಚಟಗಳ ಭಿಕ್ಷೆ' ಎಂಬ ವಾಕ್ಯದೊಂದಿಗೆ ಆಂದೋಲನ ಆರಂಭಿಸಿದರು. ಅವರ ಆಂದೋಲನದ ಪರಿಣಾಮ ಅನೇಕರು ವ್ಯಸನಗಳಿಂದ ಆಚೆ ಬಂದು ಉತ್ತಮ ಜೀವನ ಕಟ್ಟಿಕೊಂಡರು ಎಂದು ಈಶ್ವರ ಬಿ. ಖಂಡ್ರೆ ಉದ್ದೇಶ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.