ADVERTISEMENT

ಅಪಾಯ ಆಹ್ವಾನಿಸುವ ಕಾಮಗೆರೆ-ಹುಲಸುಗುಡ್ಡೆ ರಸ್ತೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2011, 6:55 IST
Last Updated 29 ಮಾರ್ಚ್ 2011, 6:55 IST
ಅಪಾಯ ಆಹ್ವಾನಿಸುವ ಕಾಮಗೆರೆ-ಹುಲಸುಗುಡ್ಡೆ ರಸ್ತೆ
ಅಪಾಯ ಆಹ್ವಾನಿಸುವ ಕಾಮಗೆರೆ-ಹುಲಸುಗುಡ್ಡೆ ರಸ್ತೆ   

ಕೊಳ್ಳೇಗಾಲ: ತಾಲ್ಲೂಕಿನ ಕಾಮಗೆರೆ-ಹುಲಸುಗುಡ್ಡೆ ರಸ್ತೆ ಯಲ್ಲಿ ಗುಂಡಿಗಳದ್ದೇ ಸಾಮ್ರಾಜ್ಯ. ಎಚ್ಚರ ತಪ್ಪಿದರೆ ಜೀವಕ್ಕೆ ಸಂಚಕಾರ. ಉಸಿರು ಬಿಗಿಹಿಡಿದು ಚಾಲಕರು ವಾಹನ ಓಡಿಸಿದರಷ್ಟೇ ನೆಮ್ಮದಿ. ಇಲ್ಲವಾದಲ್ಲಿ ಅಪಘಾತ ನಿಶ್ಚಿತ! ಈ ರಸ್ತೆಯಲ್ಲಿ ವಾಹನಗಳು ಅಪಘಾತಕ್ಕೀಡಾಗಿ ಸಾರ್ವಜನಿಕರು ಪ್ರಾಣ ಕಳೆದುಕೊಳ್ಳುವುದು ನಿರಂತರವಾಗಿ ನಡೆಯುತ್ತಿದೆ. ಆದರೆ, ಇಂದಿಗೂ ಅಪಘಾತ ಮರುಕಳಿಸ ದಂತೆ ಮುನ್ನೆಚ್ಚರಿಕೆ ಕ್ರಮ ಮಾತ್ರ ಜಾರಿಗೊಂಡಿಲ್ಲ.

ಇದೇ ರಸ್ತೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಂಚರಿಸುತ್ತಾರೆ. ಮಲೆಮಹದೇಶ್ವರ ಬೆಟ್ಟಕ್ಕೆ ಈ ರಸ್ತೆಯಲ್ಲಿಯೇ ಹೋಗಬೇಕು. ಅಪಘಾತಗಳ ತಡೆಗೆ ಮಾತ್ರ ಪೊಲೀಸ್ ಇಲಾಖೆಯಿಂದಲೂ ಕ್ರಮಕೈಗೊಂಡಿಲ್ಲ. ಕೊಳ್ಳೇಗಾಲ-ಹನೂರು ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಿದೆ. ಪ್ರತಿವರ್ಷ ಜಾತ್ರೆ ವೇಳೆ ಮಲೆಮಹದೇಶ್ವರ ಬೆಟ್ಟಕ್ಕೆ ವಿಶೇಷ ವಾಹನ ಸೌಲಭ್ಯ ಕಲ್ಪಿಸಲಾಗುತ್ತದೆ. ಆ ವೇಳೆಯೂ ಅಪಘಾತ ಸಂಭವಿಸಿರುವ ನಿದರ್ಶನಗಳಿವೆ.

ಮಂಗಲ ಮತ್ತು ಆರ್.ಎಸ್. ದೊಡ್ಡಿ ಮಧ್ಯದಲ್ಲಿ ಬರುವ ಹುಲಸುಗುಡ್ಡೆ ಬೋರೆ ಅಪಘಾತ ವಲಯವಾಗಿದೆ. ಈಗಾಗಲೇ, ಬಹಳಷ್ಟು ದ್ವಿಚಕ್ರವಾಹನಗಳು ಅಪಘಾತಕ್ಕೀಡಾಗಿವೆ. ಸವಾರರು ಸ್ಥಳದಲ್ಲೇ ಮೃತಪಟ್ಟ ಉದಾಹರಣೆಯಿದೆ. ಹುಲಸುಗುಡ್ಡೆ ಬೋರೆಯ ಅಪಾಯಕಾರಿ ತಿರುವಿನಲ್ಲಿ ಸಂಚರಿಸುವಾಗ ಮುಂಭಾಗದಿಂದ ಬರುವ ವಾಹನಗಳು ಕಾಣಿಸುವುದಿಲ್ಲ. ಇದೇ ಅಪಘಾತಕ್ಕೆ ಮೂಲ ಕಾರಣ. ಶರವೇಗದಲ್ಲಿ ಮುನ್ನುಗ್ಗುವ ವಾಹನ ಚಾಲಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಹುಲಸುಗುಡ್ಡೆ ಬೋರೆ-ಕಾಮಗೆರೆ-ಮಂಗಲ ಗ್ರಾಮದ ರಸ್ತೆಯಲ್ಲಿ ಗುಂಡಿಗಳು ಹೆಚ್ಚಿವೆ. ಇವುಗಳು ಸವಾರರಿಗೆ ಮೃತ್ಯುಕೂಪವಾಗಿ ಪರಿಣಮಿಸಿವೆ. ರಸ್ತೆಯಲ್ಲಿರುವ ಗುಂಡಿ ತಪ್ಪಿಸಲು ಮುಂದಾಗುವ ವೇಳೆ ಅಪಘಾತ ಸಂಭವಿಸುತ್ತಿವೆ. ವಾರದಲ್ಲಿ ಒಂದೆರೆಡು ಅಪಘಾತ ಘಟಿಸುತ್ತಲೇ ಇದ್ದರೂ ಗುಂಡಿ ಮುಚ್ಚುವ ಕೆಲಸ ನಡೆದಿಲ್ಲ. ಇತ್ತೀಚಿನ ದಿನದಲ್ಲಿ ವಾಹನಗಳ ಸಂಚಾರ ಅಧಿಕ ಗೊಂಡಿದೆ. ಹದಗೆಟ್ಟಿರುವ ರಸ್ತೆ ಮಾತ್ರ ದುರಸ್ತಿ ಕಂಡಿಲ್ಲ. ಕೂಡಲೇ, ಸಂಬಂಧಪಟ್ಟ ಅಧಿಕಾರಿಗಳು ದುರಸ್ತಿಗೆ ಮುಂದಾಗಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯ ಎಂಬುದು ಗ್ರಾಮಸ್ಥರ ಎಚ್ಚರಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.