ADVERTISEMENT

ಆಹಾರ ಪದಾರ್ಥಗಳ ಗುಣಮಟ್ಟಕ್ಕೆ ಆದ್ಯತೆ ನೀಡಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 8:55 IST
Last Updated 17 ಫೆಬ್ರುವರಿ 2012, 8:55 IST

ಯಳಂದೂರು: `ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ, ದಿನ ನಿತ್ಯ ಬಳಕೆಯಾಗುವ ಆಹಾರ ಪದಾರ್ಥಗಳ ಗುಣಮಟ್ಟಕ್ಕೆ ಆದ್ಯತೆ ನೀಡಿ ಮಾರಾಟ ಮಾಡಬೇಕು~ ಎಂದು ಆಹಾರ ಸುರಕ್ಷತಾ ಅಧಿಕಾರಿ ವಿ. ಶಿವಕುಮಾರ್ ವ್ಯಾಪಾರಸ್ಥರಿಗೆ ಕರೆ ನೀಡಿದರು.

ಪಟ್ಟಣದ ಬಳೇಪೇಟೆಯಲ್ಲಿರುವ ದಾಸ ಬಣಜಿಗರ ಶ್ರೀರಾಮಮಂದಿರದಲ್ಲಿ ವರ್ತಕರ ಸಂಘ ಹಾಗೂ ಆಹಾರ ಇಲಾಖೆಯ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ `ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಕಾಯ್ದೆ~ ವಿಷಯ ಕುರಿತು ಅವರು ಮಾತನಾಡಿದರು.

ಗುಣಮಟ್ಟದಲ್ಲಿ ಯಾವಾಗಲೂ ವ್ಯಾಪಾರಸ್ಥರು ಹಾಗೂ ಗ್ರಾಹಕರು ರಾಜಿಯಾಗಬಾರದು. ದಿನಸಿ ಅಂಗಡಿ, ಬೇಕರಿ, ಚಹಾ ಅಂಗಡಿ, ಹೋಟೆಲ್ ಮಾಲೀಕರು ಹಾಗೂ ಕಚ್ಚಾ ಮತ್ತು ಸಿದ್ಧಪಡಿಸಿದ ಆಹಾರ ಪದಾರ್ಥಗಳನ್ನು ಮಾರುವ ಪ್ರತಿಯೊಬ್ಬರೂ ಇಲಾಖೆ ವತಿಯಿಂದ ಪರವಾನಿಗೆ ಪಡೆಯಬೇಕು.

ಹೋಟೆಲ್‌ಗಳಲ್ಲಿ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಬೇಕು. ತಲೆ ಹಾಗೂ ಕೈ ಗಳಿಗೆ ಸುರಕ್ಷಾ ಕವಚಗಳನ್ನು ಧರಿಸಿ ಉಣ ಬಡಿಸಬೇಕು. ಕೆಲವು ತಿಂಡಿಗಳಿಗೆ ಬಣ್ಣ ನೀಡುವ ದೃಷ್ಟಿಯಿಂದ ಹಾನಿಕಾರಕ ರಾಸಾಯನಿಕಗಳನ್ನು ಹೆಚ್ಚು ಬಳಸುತ್ತಾರೆ. ಇದರ ಬಳಕೆಯನ್ನು ಆದಷ್ಟೂ ಕಡಿಮೆ ಮಾಡಬೇಕು. ರುಚಿಗೆ ಉಪಯೋಗಿಸುವ ಅಜಿನೋಮೋಟೋ (ಟೇಸ್ಟಿಂಗ್   ಪೌಡರ್) ಬಳಕೆ ಮಡಬಾರದು. ಅಯೋಡಿನ್ ಅಂಶ ಹೊಂದಿರುವ ಉಪ್ಪನ್ನೇ ಮಾರಾಟ ಮಾಡಬೇಕು. ಈ ಬಗ್ಗೆ ವ್ಯಾಪಾರಿಗಳು ಗ್ರಾಹಕರಿಗೆ ಮನವರಿಕೆ ಮಾಡಿಕೊಡಬೇಕು.

ಯಳಂದೂರು ತಾಲ್ಲೂಕಿನ ಆಹಾರ ಸುರಕ್ಷತಾ ಅಧಿಕಾರಿ ಎಚ್.ಪಿ. ರಾಜು ಮಾತನಾಡಿ `ಗ್ರಾಮಾಂತರ ಪ್ರದೇಶಗಳಲ್ಲಿ ಶುಚಿತ್ವಕ್ಕೆ ಹೆಚ್ಚು ಗಮನ ನೀಡದಿರುವುದರಿಂದ ಅನೇಕ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ. ಇದರ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯತೆ ಇದೆ. ಈ ದಿಸೆಯಲ್ಲಿ ಇಲಾಖೆಯು ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲೂ ಇಂತಹ ಜಾಗೃತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತದೆ~ ಎಂದು  ತಿಳಿಸಿದರು.

ಗುಂಡ್ಲುಪೇಟೆ ಹಾಗೂ ಕೊಳ್ಳೇಗಾಲ ತಾಲ್ಲೂಕಿನ ಅಧಿಕಾರಿಗಳಾದ ಶ್ರೀನಿವಾಸ್, ಪ್ರಸಾದಾಚಾರಿ, ವರ್ತಕ ಸಂಘದ ಅಧ್ಯಕ್ಷ ನಯಾಜ್‌ಖಾನ್, ಕಾರ್ಯದರ್ಶಿ ಹಬೀಬುಲ್ಲಾಖಾನ್, ಖಜಾಂಚಿ ವೈ.ಜಿ. ನಿರಂಜನ್, ಎಚ್.ಆರ್. ಮಂಜುನಾಥ್, ಅನಿಲ್‌ಕುಮಾರ್, ನಾರಾಯಣಸ್ವಾಮಿ ವರ್ತಕರ ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.